'ಸಾಬ್ರಿಗೆ ತೊಂದರೆ ಕೊಡಲು ಏನೇನು ಮಾಡಬೇಕು, ಅದೆಲ್ಲಾ ಸರ್ಕಾರ ಮಾಡುತ್ತಿದೆ'
ಹಾಸನ, ಅ 8: ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್ ಪ್ರೆಸ್ ಎಂದು ಮರು ನಾಮಕರಣ ಮಾಡಿದ್ದಕ್ಕೆ ಮಾಜಿ ಸಚಿವ, ಹಿರಿಯ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದೆಲ್ಲಾ ಇಲೆಕ್ಷನ್ ಸ್ಟಂಟ್ ಎಂದು ಜರಿದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರೇವಣ್ಣ, " ರೈಲಿನ ಹೆಸರನ್ನು ಏಕೆ ಬದಲಿಸಬೇಕಿತ್ತು, ಟಿಪ್ಪು ಸುಲ್ತಾನ್ ಕೂಡಾ ರಾಜ್ಯಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಬೇರೆ ರೈಲುಗಳಿಗೆ ಒಡೆಯರ್ ಹೆಸರನ್ನು ಇಡಬಹುದಾಗಿತ್ತಲ್ಲವೇ"ಎಂದು ಪ್ರಶ್ನಿಸಿದ್ದಾರೆ.
Wodeyar Express : ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್ಪ್ರೆಸ್ ಎಂದು ಮರು ನಾಮಕರಣ
"ಬಿಜೆಪಿಯವರು ಇಷ್ಟು ದಿನ ಏನು ಮಾಡುತ್ತಿದ್ದರು, ಈಗ ಚುನಾವಣೆ ಹತ್ತಿರ ಬರುತ್ತಿದೆ ಎಂದು ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಇಂತಹ ಕೆಲಸಕ್ಕೆ ಕೈಹಾಕುತ್ತಿದ್ದಾರೆ. ಒಡೆಯರ್ ಹೆಸರು ಇಡುವುದಕ್ಕೆ ನಮ್ಮ ಆಕ್ಷೇಪಣೆಯಿಲ್ಲ, ಸಾಬ್ರಿಗೆ ತೊಂದರೆ ಕೊಡಲು ಏನೇನು ಮಾಡಬೇಕೋ ಅದನ್ನೆಲ್ಲವನ್ನೂ ಸರಕಾರ ಮಾಡುತ್ತಿದೆ"ಎಂದು ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.
"ಇಷ್ಟು ದಿನ ಟಿಪ್ಪು ಎಕ್ಸ್ ಪ್ರೆಸ್ ಎಂದು ರೈಲಿನ ಹೆಸರು ಇತ್ತಲ್ಲವೇ, ಈಗ ಯಾಕೆ ಹೆಸರು ಬದಲಾಯಿಸಿದ್ದಾರೆ. ಒಂದು ದುಡ್ಡು ಹೊಡೆಯೋದು, ಇನ್ನೊಂದು, ಸಮಾಜವನ್ನು ಗುರಿಯಾಗಿಸಿಕೊಂಡು ವಿಭಜನೆಯ ಕೆಲಸವನ್ನು ಮಾಡುವುದು. ಇದಷ್ಟೇ ಸರಕಾರ ಗೊತ್ತಿರುವುದು"ಎಂದು ಎಚ್.ಡಿ.ರೇವಣ್ಣ ಹೇಳಿದ್ದಾರೆ.
"ಮೈಸೂರಿಗೆ ಇತರ ಭಾಗಗಳಿಂದ ಎಷ್ಟು ರೈಲುಗಳಿವೆ, ಅದರಲ್ಲಿ ಒಂದಕ್ಕಲ್ಲ ಮೂರು ರೈಲುಗಳಿಗೆ ಒಡೆಯರ್ ಹೆಸರನ್ನು ಇಡಬಹುದಾಗಿತ್ತು. ಟಿಪ್ಪು ಎಕ್ಸ್ ಪ್ರೆಸ್ ರೈಲೇ ಇವರಿಗೆ ಕಂಡಿದ್ದಾ. ಈಗ ಕುವೆಂಪು, ಒಡೆಯರ್ ಹೆಸರಿಟ್ಟು ಚುನಾವಣಾ ಗಿಮಿಕ್ ಮಾಡುತ್ತಿದ್ದಾರೆ"ಎಂದು ರೇವಣ್ಣ ಲೇವಡಿ ಮಾಡಿದ್ದಾರೆ.
"ಬಿಜೆಪಿಯವರಿಗೆ ಸಾಬ್ರು ಓಟು ಹಾಕುವುದಿಲ್ಲ, ಅದಕ್ಕಾಗಿಯೇ ಯಾವ್ಯಾವ ಸಾಬ್ರಿಗೆ ಏನೇನು ತೊಂದರೆ ಕೊಡಬಹುದು ಅದನ್ನೆಲ್ಲಾ ಮಾಡುತ್ತಿದ್ದಾರೆ. ನೈತಿಕತೆಯಿಲ್ಲದೇ ಬಿಜೆಪಿಯವರು ಅದ್ಯಾವ ಮುಖ ಇಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತದೆ"ಎಂದು ರೇವಣ್ಣ ಕಿಡಿಕಾರಿದ್ದಾರೆ.