ಹಾಸನ ರೈಲ್ವೆ ಮೇಲ್ಸೇತುವೆಯಲ್ಲಿ ವಾಹನ ಸಂಚಾರ; ಜಟಾಪಟಿ ಏನು?
ಹಾಸನ, ಫೆಬ್ರವರಿ 06: ಭಾರತೀಯ ರೈಲ್ವೆ ಮತ್ತು ಹಾಸನ ಜಿಲ್ಲಾಡಳಿತ ನಡುವಿನ ಜಟಾಪಟಿ ಅಂತ್ಯಗೊಂಡಿದೆ. ಇಲಾಖೆಗೆ ಸೆಡ್ಡು ಹೊಡೆದ ಜಿಲ್ಲಾಡಳಿತ ತಡೆಗೋಡೆಯನ್ನು ಒಡೆದು ಹಾಸನ ರೈಲ್ವೆ ಮೇಲ್ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ಹಾಸನ ನಗರದ ಎನ್. ಆರ್. ವೃತ್ತದಿಂದ ಹಾಸನದ ನೂತನ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ಇದಾಗಿದೆ. ಸೋಮವಾರ ರಾತ್ರಿ ಜಿಲ್ಲಾಡಳಿತ ತಡೆಗೋಡೆಯನ್ನು ಒಡೆದು ವಾಹನಗಳು ಸಂಚಾರ ಮಾಡಲು ಅನುಕೂಲ ಕಲ್ಪಿಸಿದೆ.

ರೈಲ್ವೆ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದ್ದರೂ ಸಹ ರೈಲ್ವೆ ಇಲಾಖೆ ನೆಪಗಳನ್ನು ಕೇಳುವ ಮೂಲಕ ರೈಲ್ವೆ ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಿತ್ತು. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಚಾರಕ್ಕೆ 20 ದಿನಗಳಿಂದ ಇಲಾಖೆ ಮತ್ತು ಜಿಲ್ಲಾಡಳಿತದ ನಡುವೆ ಜಟಾಪಟಿ ನಡೆದಿತ್ತು.
ಒಂದೇ ಬಾರಿ ರೈಲ್ವೆ ಮೇಲ್ಸೇತುವೆ ಮತ್ತು ಲೆವೆಲ್ ಕ್ರಾಸಿಂಗ್ ಚಾಲನೆಯಲ್ಲಿ ಇರಬಾರದು ಎಂಬ ವಾದ ಮಂಡಿಸಿದ್ದ ರೈಲ್ವೆ ಇಲಾಖೆ ತಡೆಗೋಡೆಯನ್ನು ನಿರ್ಮಾಣ ಮಾಡಿ ರೈಲ್ವೆ ಮೇಲ್ಸೇತುವೆ ಮೇಲೆ ವಾಹನಗಳು ಸಂಚಾರ ಮಾಡದಂತೆ ನಿರ್ಬಂಧಿಸಿತ್ತು.
ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ತಮ್ಮ ಅಧಿಕಾರವನ್ನು ಬಳಕೆ ಮಾಡಿಕೊಂಡು ಜೆಸಿಬಿ ಮೂಲಕ ರೈಲ್ವೆ ಮೇಲ್ಸೇತುವೆಗೆ ಹಾಕಿದ್ದ ತಡೆಗೋಡೆಯನ್ನು ತೆರವು ಮಾಡಿಸಿದ್ದಾರೆ. ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಅವರ ನಡೆ ಜನರ ಮೆಚ್ಚುಗೆಗೆ ಕಾರಣವಾಗಿದೆ.
42 ಕೋಟಿ ರೂ. ಯೋಜನೆ; 2023ರ ಆಗಸ್ಟ್ನಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ನಗರದ ಎನ್. ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೆ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ್ದರು. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈಗ ಕಾಮಗಾರಿ ಮುಗಿದರೂ ಸಹ ವಾಹನ ಸಂಚಾರ ಬಂದ್ ಮಾಡಲಾಗಿತ್ತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 60:40 ಅನುದಾನ ಹಂಚಿಕೆಯಡಿ ಈ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಸುಮಾರು 42 ಕೋಟಿ ರೂ.ಗಳ ಯೋಜನೆ ಇದಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಎಚ್. ಡಿ. ರೇವಣ್ಣ ಕಾಳಜಿಯಿಂದಲೇ ಈ ಯೋಜನೆ ಜಾರಿಗೆ ಬಂದಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರೈಲ್ವೆ ಮೇಲ್ಸೇತುವೆ ಕಾಮಗಾರಿ 2023ರಲ್ಲಿಯೇ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ ವಿವಿಧ ಕಾರಣಗಳಿಗೆ ಕಾಮಗಾರಿ ವಿಳಂಬವಾಯಿತು. ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ರೈಲ್ವೆ ಮೇಲ್ಸೇತುವೆ ಮೇಲೆ ವಾಹನಗಳನ್ನು ಬಿಡದೇ ಜನರ ಆಕ್ರೋಶಕ್ಕೆ ರೈಲ್ವೆ ಇಲಾಖೆ ತುತ್ತಾಗಿತ್ತು.
ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಕಾರಣ ನೂತನ ನ್ಯಾಯಾಲಯ, ಚನ್ನಪಟ್ಟಣ ಬಡಾವಣೆ, ಕೈಗಾರಿಕಾ ಪ್ರದೇಶ ಸೇರಿದಂತೆ ಹೊಳೆನರಸೀಪುರ, ಸಕಲೇಶಪುರ ಕಡೆ ಸಾಗುವ ವಾಹನ ಸವಾರರು ಸುತ್ತಿ ಬಳಸಿ ಸಾಗಬೇಕಿತ್ತು.
ಹಲವು ವರ್ಷಗಳ ಬಳಿಕ ಈಗ ಕಾಮಗಾರಿ ಪೂರ್ಣಗೊಂಡರೂ ಸಹ ವಾಹನಗಳನ್ನು ಬಿಡುತ್ತಿಲ್ಲ ಎಂಬುದು ವಾಹನ ಸವಾರರ ಆಕ್ರೋಶವಾಗಿತ್ತು. ಈಗ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ.
ರೈಲ್ವೆ ಮೇಲ್ಸೇತುವೆ ಮೇಲೆ ಕೆಲವು ದಿನ ವಾಹನ ಸಂಚಾರಕ್ಕೆ ಅವಕಾಶ ಕೊಡಲಾಗಿತ್ತು. ಬಳಿಕ ಬಂದ್ ಮಾಡಲಾಗಿತ್ತು, ಆಮ್ ಆದ್ಮಿ ಪಕ್ಷ ಸೇರಿದಂತೆ ಅನೇಕ ಸಂಘಟನೆಗಳು ವಾಹನ ಸಂಚಾರ ಪುನಃ ಆರಂಭಿಸಬೇಕು ಎಂದು ಒತ್ತಾಯಿಸಿದ್ದವು. ಆದರೆ ಇಲಾಖೆ ಇದಕ್ಕೆ ಒಪ್ಪಿರಲಿಲ್ಲ.












Click it and Unblock the Notifications