ಹಾಸನ : ಗ್ರಹಣ ನೋಡುತ್ತಾ ಉಪ್ಪಿಟ್ಟು, ಪುರಿ ಸವಿದ ಜನರು
ಹಾಸನ, ಡಿಸೆಂಬರ್ 26 : ಹಾಸನ ಜಿಲ್ಲೆಯಲ್ಲಿ ಸೂರ್ಯಗ್ರಹಣ ವೀಕ್ಷಣೆ ಚಟುವಟಿಕೆಯಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡರು. ನಗರದಲ್ಲಿ ಶೇ. 91.6 ರಷ್ಟು ಗ್ರಹಣ ಗೋಚರವಾಯಿತು. ಕಂಕಣಸೂರ್ಯ ಗ್ರಹಣವನ್ನು ಜನರು ಕಣ್ತುಂಬಿಕೊಂಡರು.
ಗುರುವಾರ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಹಣ ವೀಕ್ಷಣೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಹಲವು ವಿಜ್ಞಾನ ಮಾದರಿಗಳು, ಬ್ಯಾನರ್ಗಳ ಮೂಲಕ ಗ್ರಹಣದ ಮಹತ್ವವನ್ನು ವೈಜ್ಞಾನಿಕ ವಿಶ್ಲೇಷಣೆ ಮಾಡಿ ಜನವರಿಗೆ ವಿವರಿಸಲಾಯಿತು.
ಗ್ರಹಣ ವೀಕ್ಷಣೆಗೆ ಬಂದಿದ್ದ ಜನರಿಗೆ ಉಪ್ಪಿಟ್ಟು, ಪುರಿ ವಿತರಿಸುವ ಮೂಲಕ ಗ್ರಹಣ ಕಾಲದಲ್ಲಿ ಉಟೋಪಚಾರ ಮಾಡುವುದರಿಂದ ಆಹಾರದಲ್ಲಿ ಯಾವುದೇ ವಿಷಾಂಶ ಉತ್ಪತ್ತಿಯಾಗುವುದಿಲ್ಲ, ಆರೋಗ್ಯದಲ್ಲಿ ವ್ಯತ್ಯಾಸ ಆಗುವುದಿಲ್ಲ ಎಂದು ಜಾಗೃತಿ ಮೂಡಿಸಲಾಯಿತು.

ನೂರಾರು ಜನರು, ಮಕ್ಕಳು ಅತ್ಯುತ್ಸಾಹದಿಂದ ಗ್ರಹಣ ವೀಕ್ಷಿಸಿದರು. ಮೊಡ ಆಗಾಗ ಕಣ್ಣಾ ಮುಚ್ಚಾಲೆ ಆಡುತ್ತಿದ್ದರೂ ಹಾಸನದಲ್ಲಿ ಶೇ.91.6 ರಷ್ಟು ಗ್ರಹಣ ಗೋಚರವಾಯಿತು.
ಭಾರತ ಜ್ಞಾನ ವಿಜ್ಞಾನ ಸಮಿತಿ ಒಂದು ವಾರದಿಂದ ಜಿಲ್ಲೆಯಾದ್ಯಾಂತ ಗ್ರಹಣ ಪಯಣ ಜಾಗೃತಿ ವಾಹನ ಜಾಥಾ ನಡೆಸಿ ಸಾರ್ವಜನಿಕರಿಗೆ ಮೂಡನಂಬಿಕೆಗಳಿಂದ ದೂರ ಉಳಿಯುವಂತೆ ಅರಿವು ಮೂಡಿಸಿತ್ತು.
ಜಿಲ್ಲೆಯ ಸುಮಾರು 100 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗ್ರಹಣದ ಬಗ್ಗೆ ಅರಿವು ಮೂಡಿಸಲಾಯಿತು. ಅಲ್ಲದೆ ಜಿಲ್ಲೆಯಲ್ಲಿ ಗ್ರಹಣ ವೀಕ್ಷಣೆಗೆ ಸುಮಾರು 15,000 ಸೋಲಾರ್ ಫಿಲ್ಟರ್ ಕನ್ನಡಕಗಳನ್ನು ಮಾರಾಟ ಮಾಡಲಾಗಿತ್ತು.











Click it and Unblock the Notifications