ಶ್ರವಣಬೆಳಗೊಳ : ಮಸ್ತಕಾಭಿಷೇಕ ಪ್ರಚಾರಕ್ಕೆ ತಂತ್ರಜ್ಞಾನಗಳ ಬಳಕೆ
ಹಾಸನ, ಅ.16 : ಶ್ರವಣಬೆಳಗೊಳದಲ್ಲಿ ಫೆಬ್ರವರಿಯಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಪ್ರಚಾರಕ್ಕೆ ಲಭ್ಯವಿರುವ ತಂತ್ರಜ್ಞಾನ ಮತ್ತು ಸಮೂಹ ಸಂವಹನ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿಯವರು ಮುಂದಾಗಿದ್ದಾರೆ.
ಮಸ್ತಕಾಭಿಷೇಕ ಉತ್ಸವಕ್ಕೆ ಬ್ರಾಂಡಿಂಗ್ ವ್ಯವಸ್ಥೆ, ಜಗತ್ತಿನ ಎಲ್ಲರಿಗೂ ಸುಲಭವಾಗಿ ಮಾಹಿತಿ ಲಭ್ಯವಾಗುವಂತೆ ವೆಬ್ ಸೈಟ್, ಮೊಬೈಲ್ ಅಪ್ಲಿಕೇಶನ್, ಜಿಂಗಲ್ಸ್, ಪ್ರೊಮೋಗಳನ್ನು ಸಿದ್ಧಪಡಿಸಿ ಪ್ರಚಾರಪಡಿಸಲು ಯೋಜನೆ ರೂಪಿಸಲಾಗಿದೆ.

ವಾಸು ಅಗರ್ ಬತ್ತಿ ಸಂಸ್ಥೆಯವರು ಪ್ರಚಾರ ಕಾರ್ಯಕ್ಕೆ ಸಂಪೂರ್ಣ ಉಚಿತವಾಗಿ ಕೆಲವು ತಾಂತ್ರಿಕ ನೆರವು ನೀಡಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ, ಅವರಿಂದ ಲಭ್ಯವಾಗುವಂತಹ ಸಹಕಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಮಹಾಮಸ್ತಕಾಭಿಷೇಕ ವಿಶ್ವವಿಖ್ಯಾತ ಕಾರ್ಯಕ್ರಮವಾಗಿದೆ. ಅದೇ ರೀತಿ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿ ಕೂಡ ಪ್ರಸಿದ್ಧಿ ಪಡೆದಿದೆ. ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಮಜ್ಜನ ಮಹೋತ್ಸವಕ್ಕೆ ಅತ್ಯುತ್ತಮವಾದ ಪ್ರಚಾರ ನೀಡುವ ಮೂಲಕ ಪ್ರವಾಸಿಗರನ್ನು ಸೆಳೆಯಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಹಾಸನ ಜಿಲ್ಲೆ ಶಿಲ್ಪಕಲೆ ಮತ್ತು ಪ್ರವಾಸಿ ತಾಣಗಳಿಗೂ ಹೆಸರುವಾಸಿಯಾಗಿದೆ. ಮಹಾ ಮಸ್ತಕಾಭಿಷೇಕದ ಸದಾವಕಾಶವನ್ನು ಬಳಸಿಕೊಂಡು ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಜನರನ್ನು ಆಕರ್ಷಿಸಬೇಕಿದೆ. ಅದಕ್ಕೆ ತಕ್ಕಂತೆ ವೆಬ್ ಸೈಟ್, ಮೊಬೈಲ್ ಆಪ್ಲಿಕೇಶನ್ ಸಿದ್ದಪಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.












Click it and Unblock the Notifications