ಶ್ರವಣಬೆಳಗೊಳದಲ್ಲಿ ಅದ್ದೂರಿಯ ಜೈನ ಯುವ ಸಮ್ಮೇಳನ
ಶ್ರವಣಬೆಳಗೊಳ, ಅಕ್ಟೋಬರ್ 28 : 2018ರಲ್ಲಿ ಜರುಗಲಿರುವ ಗೊಮ್ಮಟೇಶ್ವರ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಅಂಗವಾಗಿ ಶ್ರವಣಬೆಳಗೊಳದಲ್ಲಿ ಎರಡು ದಿನಗಳ ಕಾಲ ರಾಷ್ಟ್ರ ಮಟ್ಟದ ಜೈನ ಯುವ ಸಮ್ಮೇಳನದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ಪರಮಪೂಜ್ಯ ಆಚಾರ್ಯಶ್ರೀ ಯವರು ಮತ್ತು ಮುನಿಶ್ರೀಗಳ ಪಾವನ ಸಾನಿಧ್ಯದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಚಾವುಂಡರಾಯ ಸಭಾ ಮಂಟಪದಲ್ಲಿ ಮಂಗಲ ಕಲಶ ಸ್ಥಾಪನೆ ನೆರವೇರಿಸಿದರು.

ನಂತರ ವಿದ್ಯಗಿರಿ ಮಹಾದ್ವಾರದಿಂದ ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಸುಮಾರು 3 ಕಿ.ಮೀ. ಮೆರವಣಿಗೆ ಸಾಗಿ ಸಾಮ್ರಾಟ್ ಚಂದ್ರಗುಪ್ತ ಮೌರ್ಯ ಸಭಾ ಮಂಟಪಕ್ಕೆ ಆಗಮಿಸಿತು.

ಮೆರವಣಿಗೆಯಲ್ಲಿ ಗುಳ್ಳಕಾಯಿ ಅಜ್ಜಿಯು ಭಗವಾನ್ ಬಾಹುಬಲಿ ಸ್ವಾಮಿಗೆ ಅಭಿಷೇಕ ಮಾಡುವ ಸ್ಥಬ್ದಚಿತ್ರ ಮೆರವಣಿಗೆಯಲ್ಲಿ ಆಕರ್ಷಣೆಯಾಗಿತ್ತು. ಹೊರ ಜಿಲ್ಲೆಗಳಿಂದ ಬಂದಿದ್ದ ಜೈನ ಯುವ ಸಮೂಹ ಮೆರವಣಿಗೆಯ ಉದ್ದಕ್ಕೂ ನರ್ತಿಸುತ್ತ ಹೆಜ್ಜೆ ಹಾಕಿದರು.

ಮೆರವಣಿಗೆಯಲ್ಲಿ ಐರಾವತ, ಚಿಟ್ಟಿಮೇಳ, ಡೊಳ್ಳುಕುಣಿತ, ಸಾಕ್ಸಫೋನ್ ವಾದನ, ಧರ್ಮಧ್ವಜವನ್ನು ಹಿಡಿದ ಯುವಕರು ಹೆಜ್ಜೆ ಹಾಕಿದರೆ, ಮೆರವಣಿಗೆಗೆ ಮೈಸೂರು ಬ್ಯಾಂಡ್ಸೆಟ್ ವಾದನ ಕಳೆತುಂಬಿತು. ಕಳಸಹೊತ್ತ ನೂರಾರು ಮಹಿಳೆಯರು ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications