ವಿಡಿಯೋ; ಹಿಂದೂ ಸಂಪ್ರದಾಯದಂತೆ ಮುಸ್ಲಿಂ ಕುಟುಂಬದಿಂದ ಪೂಜೆ
ಹಾಸನ, ಫೆಬ್ರವರಿ 23; ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಈ ಸಂದರ್ಭದಲ್ಲಿ ಅಪರೂಪದ ಘಟನೆಯೊಂದು ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮುಸ್ಲಿಂ ಕುಟುಂಬವೊಂದು ಪೂಜೆ ಸಲ್ಲಿಸಿದೆ.
ಬೇಲೂರ ಚನ್ನಕೇಶವ ಕನಸಿನಲ್ಲಿ ಬಂದು ಜಮೀನಿನಲ್ಲಿ ಪೂಜೆ ಸಲ್ಲಿಸಲು ಸೂಚಿಸಿದ್ದಾನೆಂದು ಹಿಂದೂ ಸಂಪ್ರದಾಯದ ಪ್ರಕಾರ ಪೂಜೆ ಮಾಡಿದ್ದಾರೆ ರಿಯಾಜ್ ಪಾಷಾ. ಅಪರೂಪದ ಘಟನೆ ನಡೆದಿರೋದು ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ದೀನದಯಾಳ್ ಬಡಾವಣೆಯಲ್ಲಿ.
ರಾಜ್ಯದಲ್ಲಿ ಹಿಜಾಬ್ - ಕೇಸರಿ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿರುವ ಈ ಸಂದರ್ಭದಲ್ಲಿ ಅಪರೂಪದ ಘಟನೆಯೊಂದು ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮುಸ್ಲಿಂ ಕುಟುಂಬವೊಂದು ಪೂಜೆ ಸಲ್ಲಿಸಿದೆ#Hassan #HassanNews #Viral #Hindu #Muslim pic.twitter.com/utcCz2WGHd
— oneindiakannada (@OneindiaKannada) February 23, 2022
ರಿಯಾಜ್ ಪಾಷಾ ಎಂಬ ಮುಸ್ಲಿಂ ಕುಟುಂಬಕ್ಕೆ ಬೇಲೂರು ಚನ್ನಕೇಶವ ಕನಸಲ್ಲಿ ಬಂದು ಪೂಜೆ ಸಲ್ಲಿಸಬೇಕು ಎಂದು ಹೇಳಿದ್ದರಂತೆ. ಹಾಗಾಗಿ ಮುಸ್ಲಿಂ ಕುಟುಂಬ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದೆ. ಜೋಡಿಯಾಗಿ ಬೆಳೆದಿರೋ ನೇರಳೆ ಹಾಗೂ ಆಲದ ಮರದ ಬುಡದಲ್ಲಿ ವಿನಾಯಕನ ಮೂರ್ತಿಪ್ರತಿಷ್ಠಾಪನೆ ಮಾಡಿ, ಪುರೋಹಿತರ ಮಂತ್ರಘೋಷದೊಂದಿಗೆ ವಿಶೇಷ ಪೂಜೆಯನ್ನು ನೆರವೇರಿಸಿದೆ.

ರಿಯಾಜ್ ಪಾಷಾ ಪೂರ್ವಜರ ಕಾಲದಿಂದಲೂ ದೀನದಯಾಳ್ ಬಡಾವಣೆಯಲ್ಲಿ ಒಂದು ಎಕರೆ ಜಮೀನಲ್ಲಿ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಇವರ ಜಮೀನಲ್ಲಿ ಒಂದೇ ಬುಡದಲ್ಲಿ ನೇರಳೆ ಹಾಗೂ ಆಲದ ಮರ ಬೆಳೆದುಕೊಂಡಿದೆ. ಅದಕ್ಕೆ ಪೂಜೆ ಮಾಡಿಕೊಂಡು ಬಂದಿದ್ದಾರೆ.
2008ರಲ್ಲಿ ರಿಯಾಜ್ ಪಾಷಾ ಅಣ್ಣತಮ್ಮಂದಿರು ತಮ್ಮ ಜಮೀನನ್ನು ನಾಗರಾಜು ಎಂಬುವವರಿಗೆ ಮಾರಿ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಬದುಕು ನಡೆಸುತ್ತಿದ್ದಾರೆ. ಆದರೆ ಕಳೆದ ಆರು ತಿಂಗಳಿನಿಂದ ಬೇಲೂರು ಚನ್ನಕೇಶವ ತಮ್ಮ ಕನಸಿನಲ್ಲಿಬಂದು ಯಾಕೆ ನನ್ನ ಪೂಜೆ ಮಾಡುವುದನ್ನು ನಿಲ್ಲಿಸಿದ್ದೀರಾ? ಎಂದು ಹೇಳುವುದಕ್ಕೆ ಶುರು ಮಾಡಿದ್ದರಂತೆ.
ಹಾಗಾಗಿಯೇ ಮಾರಾಟ ಮಾಡಿದ್ದ ಜಮೀನು ಮಾಲೀಕರ ಜೊತೆ ಮಾತಾನಾಡಿ, ಪುರೋಹಿತರ ನೇತೃತ್ವದಲ್ಲಿ ವಿಶೇಷ ಪೂಜೆಯನ್ನು ರಿಯಾನ್ ಪಾಷಾ ಕುಟುಂಬ ನೆರವೇರಿಸಿದೆ.
ಧರ್ಮದ ಹೆಸರಿನಲ್ಲಿ ಹೊಡೆದಾಡುವ ಸದ್ಯದ ಸನ್ನಿವೇಶದಲ್ಲಿ ಇಂತಹ ಘಟನೆಗಳಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಪ್ರೇರೇಪಣೆ ಸಿಗುತ್ತದೆ. ಕೇಸರಿ ಹಾಗೂ ಹಿಜಾಬ್ ಗಲಾಟೆಯ ನಡುವೆ ಹೀಗೊಂದು ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರೋ ಘಟನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.












Click it and Unblock the Notifications