ದೇಶದ ಅಭಿವೃದ್ಧಿಗೆ ಅರಣ್ಯ ಇಲಾಖೆಯೇ ಅಡ್ಡಿ ಎಂದ ಶಾಸಕ ಶಿವಲಿಂಗೇಗೌಡ
ಹಾಸನ, ಜನವರಿ 25: ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಹಾಸನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎತ್ತಿನಹೊಳೆ ಯೋಜನೆ ಪ್ರಗತಿ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನೆ ಮಾಡಲಾಯಿತು. ಈ ಸಂದರ್ಭದಲ್ಲಿ ನೀರಾವರಿ ಯೋಜನೆಗೆ ಅರಣ್ಯ ಇಲಾಖೆಯ ಕೆಲವು ನಿಯಮಗಳು ಅಡ್ಡಿಯಾಗುತ್ತಿವೆ ಎಂದು ನೀರಾವರಿ ಅಧಿಕಾರಿಗಳು ತಿಳಿಸಿದರು.
ಆಗ ತಮ್ಮ ಮೇಲಿನ ಆರೋಪಕ್ಕೆ ಅರಣ್ಯ ಅಧಿಕಾರಿಗಳು ಸಮಜಾಯಿಷಿ ನೀಡಲು ಮುಂದಾದಾಗುತ್ತಿದ್ದಂತೆ ಶಾಸಕ ಶಿವಲಿಂಗೇಗೌಡ ಕೋಪಗೊಂಡರು. ""ಅಲ್ಲಿ ಜನರಿಗೆ ಕುಡಿಯಲು ನೀರಿಲ್ಲ, ನೀವಿಲ್ಲಿ ಎಲ್ಲದಕ್ಕೂ ತಗಾದೆ ತೆಗೆಯುತ್ತಿದ್ದೀರಾ. ನಿಮ್ಮ ಅರಣ್ಯ ಅಧಿಕಾರಿಗಳಿಂದ ದೇಶದ ಅಭಿವೃದ್ಧಿ ಹಾಳಾಗಿದೆ'' ಎಂದು ಕಿಡಿಕಾರಿದರು.

""ನೀವೇನು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ?'' ಎಂದು ಅರಣ್ಯ ಅಧಿಕಾರಿಗಳಿಗೆ ಪ್ರಶ್ನಿಸಿದ ಶಿವಲಿಂಗೇಗೌಡ, ನಮಗೆ ಎಲ್ಲವೂ ಗೊತ್ತಿದೆ. ನಿಮ್ಮಿಂದ ಈ ದೇಶದಲ್ಲಿ ಒಂದು ಪ್ರಾಜೆಕ್ಟ್ ಸರಿಯಾಗಿ ಆಗುತ್ತಿಲ್ಲ ಎಂದು ಆಕ್ರೋಶವಾಗಿ ಮಾತನಾಡಿದರು.
ನಮ್ಮಲ್ಲಿ ಆರು ಟಿಎಂಸಿ ನೀರು ಹರಿದು ಮಾರಿ ಕಣಿವೆ ಸೇರುತ್ತಿದೆ ಅಲ್ಲಿ ನೀವೇ ಒಂದು ಚೆಕ್ ಡ್ಯಾಂ ಕಟ್ಟಿ ಎಂದು ಇವರ ಬಳಿ ಕಾಲು ಹಿಡಿಯೋದು ಒಂದು ಬಾಕಿ ಇದೆ. ಬರೀ ನೀಲಗಿರಿ ಮರ ಬೆಳೆಸಿದ್ದೀರಿ, ಅಂತರ್ಜಲ ಕಡಿಮೆಯಾಗೋದೆ ನಿಮ್ಮಿಂದ ಎಂದು ಕಿಡಿಕಾರಿದರು.












Click it and Unblock the Notifications