ಬೆಂಗಳೂರಿಗೆ ಲಾಲ್ಬಾಗ್ ನೋಡಲು ಬಂದಿಲ್ಲ; ಪ್ರೀತಂ ಜೆ. ಗೌಡ
ಹಾಸನ, ಆಗಸ್ಟ್ 10; "ಲಾಲ್ಬಾಗ್, ಕಬ್ಬನ್ ಪಾರ್ಕ್ ನೋಡುವುದಕ್ಕೆ ನಾನು ಬೆಂಗಳೂರಿಗೆ ಬಂದಿಲ್ಲ. ರಾಜಕಾರಣ ಮಾಡಲು ಬಂದಿದ್ದೇನೆ" ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ. ಗೌಡ ವಸತಿ ಸಚಿವ ವಿ. ಸೋಮಣ್ಣ ಹೇಳಿಕೆಗೆ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ನಿವಾಸಕ್ಕೆ ಭೇಟಿ ನೀಡಿರುವುದಕ್ಕೆ ಪ್ರೀತಂಗೌಡ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಗಳ ಜೊತೆ ಸಚಿವ ವಿ. ಸೋಮಣ್ಣ ಸಹ ದೇವೇಗೌಡರ ಮನೆಗೆ ಹೋಗಿದ್ದರು.
ಮಂಡ್ಯದಲ್ಲಿ ಮಾತನಾಡಿದ್ದ ವಿ. ಸೋಮಣ್ಣ, "ಒಂದು ಬಾರಿ ಶಾಸಕರಾದ ಕೂಡಲೇ ಯಾರೂ ದೇವರಾಗಲ್ಲ. ಶಾಸಕ ಪ್ರೀತಂ ಇತಿಮಿತಿಯಲ್ಲಿ ಮಾತನಾಡಬೇಕು" ಎಂದು ಹೇಳಿದ್ದರು. ಈ ಹೇಳಿಕೆಗೆ ವಿಧಾನಸೌಧದಲ್ಲಿ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ.

ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಗೌರವ ಕೊಟ್ಟು ಗೌರವ ತೆಗೆದುಕೊಳ್ಳಿ. ವೈಯಕ್ತಿಕವಾಗಿ ಯಾರೂ ಮಾತನಾಡಬಾರದು. ನನ್ನ ಜೊತೆ ಇರುವವರಿಗೂ ಇದನ್ನು ಹೇಳಿದ್ದೇನೆ. ಹಿರಿಯರಿಗೆ ಮನವಿ ಮಾಡುತ್ತೇನೆ" ಎಂದರು.
"ವಿಧಾನಸೌಧದಲ್ಲಿ 224 ಶಾಸಕರು ಇದ್ದಾರೆ. 5 ಸಲ 6 ಸಲ ಗೆದ್ದವರು ಇರುತ್ತಾರೆ. ಒಂದು ಸಲ ಗೆದ್ದವರು ಇರುತ್ತಾರೆ. ಒಂದು ಸಲ ಗೆದ್ದ ಮೇಲೆಯೇ 5 ಸಲ ಗೆಲ್ಲುವುದಕ್ಕೆ ಆಗುವುದು" ಎಂದು ಹೇಳಿದರು.
"ಒಂದು ಬಾರಿ ಗೆದ್ದಿರಲಿ 6 ಬಾರಿ ಗೆದ್ದಿರಲಿ ಎಲ್ಲರಿಗೂ ಅವರ ಕೆಪಾಸಿಟಿ ಇರುತ್ತದೆ. ನನ್ನ ಬಗ್ಗೆ ಮಾತನಾಡಿದರೆ ನಾನು ಪ್ರತಿಕ್ರಿಯೆ ಕೊಡುತ್ತೇನೆ. ನಾನು ಯಾವುದೇ ಮುಲಾಜು ನೋಡುವುದಿಲ್ಲ. ನಾನು ಗಟ್ಟಿತನದ ರಾಜಕಾರಣ ಮಾಡುತ್ತೇನೆ. ಇಲ್ಲವೇ ಮನೆಯಲ್ಲಿ ಇರುತ್ತೇನೆ" ಎಂದು ಪ್ರೀತಂ ಗೌಡ ತಿಳಿಸಿದರು.
"ಲಾಲ್ಬಾಗ್, ಕಬ್ಬನ್ ಪಾರ್ಕ್ ನೋಡೋಕೆ ನಾನು ಬೆಂಗಳೂರಿಗೆ ಬಂದಿಲ್ಲ. ರಾಜಕಾರಣ ಮಾಡಲು ಬಂದಿದ್ದೇನೆ. ನಾನು ತಪ್ಪಿಸಿಕೊಂಡು ಓಡಿಹೋಗುವುದಿಲ್ಲ. ನನ್ನ ಬಗ್ಗೆ ಮಾತನಾಡಿದರೆ ನಾನು ಪ್ರತಿಕ್ರಿಯೆ ಕೊಡುತ್ತೇನೆ" ಎಂದು ಹಾಸನದ ಶಾಸಕರು ವಿ. ಸೋಮಣ್ಣಗೆ ತಿರುಗೇಟು ಕೊಟ್ಟರು.
"ಯಾರೂ ಸಹ ಯಾರ ಬಳಿಯೂ ಜೀತಕ್ಕೆ ಇಲ್ಲ. ಹಿರಿಯರು ಇದ್ದರೆ ಮಾರ್ಗದರ್ಶನ ಮಾಡಲಿ. ನಮ್ಮದು ರಾಷ್ಟ್ರೀಯ ಪಕ್ಷಗಳ. ನಾನು ಕಾರ್ಯಕರ್ತರ ಮನಸ್ಸಿನಲ್ಲಿನ ನೋವನ್ನು ಹೇಳಿದ್ದೇನೆ. ಅದೇ ಪ್ರಶ್ನೆಯನ್ನು ಕೇಳಿದ್ದೇನೆ" ಎಂದು ಸ್ಪಷ್ಟಪಡಿಸಿದರು.
"ಮುಖ್ಯಮಂತ್ರಿಯಾದ 24 ಗಂಟೆಯಲ್ಲಿ ದೇವೇಗೌಡರ ಮನೆಗೆ ಹೋಗಿದ್ದು ಏಕೆ ಎಂದು ಕಾರ್ಯಕರ್ತರು ಕೇಳಿದ್ದರು. ಇದರಿಂದಾಗಿ ಕಾರ್ಯಕರ್ತರಿಗೆ ನೋವಾಗಿದೆ. ಅದನ್ನೇ ನಾನು ಕೇಳಿದ್ದೇನೆ" ಎಂದು ಶಾಸಕರು ಹೇಳಿದರು.
ಸಚಿವ ಸ್ಥಾನ ಕೇಳಿಲ್ಲ; "ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ನಾನು ಮಾತನಾಡುತ್ತಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ನಾನು ಮಂತ್ರಿಸ್ಥಾನ ಕೇಳಿಲ್ಲ. ಆದ್ದರಿಂದ ಸ್ಥಾನ ಕೈತಪ್ಪಿಗೆ ಎಂಬ ಅಸಮಾಧಾನವೂ ಇಲ್ಲ" ಎಂದು ಪ್ರೀತಂ ಗೌಡ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳ ಮಾತು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಪ್ರೀತಂ ಗೌಡ ಬಗ್ಗೆ ಮಾತನಾಡಿದ್ದರು. "ಪ್ರೀತಂ ಗೌಡ ನನ್ನ ಯುವ ಮಿತ್ರ. ಅವರು ಆತುರದಲ್ಲಿ ಮಾತನಾಡಿದ್ದಾರೆ. ದೇವೇಗೌಡರ ಜೊತೆ ಯಾವುದೇ ರಾಜಕೀಯ ಮಾತನಾಡಿಲ್ಲ" ಎಂದು ಹೇಳಿದರು.
"ಹಾಸನದ ಎಲ್ಲಾ ಪದಾಧಿಕಾರಿಗಳನ್ನು ಭೇಟಿ ಮಾಡಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವೆ. ಅವರ ಹಿತವನ್ನು ಕಾಪಾಡುತ್ತೇನೆ" ಎಂದು ಬೆಂಗಳೂರಿನಲ್ಲಿ ತಿಳಿಸಿದರು.











Click it and Unblock the Notifications