ಯುದ್ಧಭೂಮಿ ಉಕ್ರೇನ್ನಲ್ಲಿ 40 ಕಿ. ಮೀ. ನಡೆದ ಹಾಸನದ ಯುವಕ
ಹಾಸನ, ಮಾರ್ಚ್ 10; ಎಂಬಿಬಿಎಸ್ ವ್ಯಾಸಂಗಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿ ಯುದ್ಧಭೂಮಿಯಲ್ಲಿ ಸಿಲುಕಿದ್ದ ಹಾಸನದ ಗಗನ್ ಗೌಡ ಸುರಕ್ಷಿತವಾಗಿ ತವರಿಗೆ ವಾಪಸ್ ಆಗಿದ್ದಾರೆ. ಮನೆಯಲ್ಲಿ ಸಂತಸದ ವಾತವರಣ ನಿರ್ಮಾಣವಾಗಿದೆ.
ಹಾಸನ ನಗರದ ಬಿ. ಕಾಟೀಹಳ್ಳಿಯ ಕೇಶವಮೂರ್ತಿ ಮತ್ತು ಸುಜಾತ ಎಂಬುವರ ಮಗ ಗಗನ್ ಗೌಡ ಉಕ್ರೇನ್ನಲ್ಲಿ ಸಿಲುಕಿದ್ದರು. ಸುಮಾರು ಹತ್ತು ದಿನಗಳ ಕಾಲ ತೊಂದರೆಗೆ ಸಿಲುಕಿಕೊಂಡಿದ್ದರು. ಸರಿಯಾಗಿ ಊಟವಿಲ್ಲದೆ, ನೀರು ಕುಡಿದುಕೊಂಡು ಸುಮಾರು 40 ಕಿ. ಮೀ. ದೂರ ಯುದ್ಧಭೂಮಿಯಲ್ಲಿ ನಡೆದಿದ್ದಾರೆ. ಪುತ್ರ ಭಯದಲ್ಲಿದ್ದ, ನನ್ನ ಮಗನಿಗೆ ಊಟ, ರಕ್ಷಣೆ ಕೊಡಿಸುವಂತೆ ಜಿಲ್ಲಾಧಿಕಾರಿಗಳ ಬಳಿ ಪೋಷಕರು ಕೋರಿದ್ದರು.
ಪೋಷಕರು ಹಾಸನ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದರು. ಡಿಸಿ ಬಳಿ ಮನವಿ ಮಾಡಿದ ನಂತರ ಹೊರ ಬಂದಾಗ ಗಗನ್ ಗೌಡನ ತಾಯಿ ಸುಜಾತ ಆತಂಕದಲ್ಲಿ ದುಃಖ ತಡೆಯಲಾರದೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದರು. ಈಗ ಪುತ್ರನು ಕ್ಷೇಮವಾಗಿ ಮನೆಗೆ ಬಂದಿರುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮಗನಿಗೆ ಸಿಹಿ ತಿನ್ನಿಸಿ ಸಂತೋಷದ ಕಣ್ಣೀರು ಹಾಕಿದರು.

ವಿಮಾನ ಹಾರಾಟ ನಿಲ್ಲಿಸಿದರು; ಉಕ್ರೇನ್ ಯುದ್ಧ ಭೂಮಿಯಲ್ಲಿ ನಡೆದ ಘಟನೆಗಳನ್ನು ಗಗನ್ ಗೌಡ ನೆನಪು ಮಾಡಿಕೊಂಡರು. "ಫೆಬ್ರವರಿ 24 ರಿಂದ ಉಕ್ರೇನ್-ರಷ್ಯಾ ನಡುವೆ ಯುದ್ಧ ಆರಂಭವಾಯಿತು. ಈ ವಿಷಯ ತಿಳಿಯುತ್ತಿದ್ದಂತೆ ಹಾಸ್ಟೆಲ್ನಲ್ಲಿದ್ದ ಭಾರತದ ವಿದ್ಯಾರ್ಥಿಗಳು ಹೊರಟರು, ಅಷ್ಟರಲ್ಲಿ ವಿಮಾನ ಹಾರಾಟ ನಿಲ್ಲಿಸಿದ್ದರು. ಒಂದು ದಿನ ಬಂಕರ್ನಲ್ಲಿ ಇರುವಂತೆ ಹೇಳಿದರು. ನಂತರ ಮೂರ್ನಾಲ್ಕು ದಿನ ಕಳೆದ ಮೇಲೆ ಊಟ, ನೀರಿಗೆ ತೊಂದರೆಯಾಗಲು ಶುರುವಾಯಿತು" ಎಂದರು.
"ನಾವು ಬಂಕರ್ನಲ್ಲಿ ಕತ್ತಲಲ್ಲಿ ಕಾಲ ಕಳೆಯಬೇಕಾಯಿತು. ಟ್ಯಾಪ್ ವಾಟರ್ ಬಿಸಿ ಮಾಡಿಕೊಂಡು ಕುಡಿಯುತ್ತಿದ್ದೆವು. ಬಾಂಬ್ ಶಬ್ದ ಕೇಳಿ ತುಂಬಾ ಭಯವಾಯಿತು, ದೇವರನ್ನು ನೆನೆಸಿಕೊಂಡು ಬಂಕರ್ನಲ್ಲಿದ್ದೆವು, ಭಾರತೀಯ ರಾಯಭಾರಿ ಕಚೇರಿಯವರು ಸಹಾಯ ಮಾಡುತ್ತಿದ್ದರು. ಆದರೆ ಅವರು ಉಕ್ರೇನ್ನೊಳಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಒಂಭತ್ತು ದಿನ ಕಳೆದ ನಂತರ ಎಲ್ಲರೂ ಹೊರಟೆವು" ಎಂದು ಹೇಳಿದರು.
"ಹುಡುಗರನ್ನು ರೈಲು ಹತ್ತಲು ಬಿಡಲಿಲ್ಲ, ನಂತರ ಪಿಸೋಚಿನ್ಗೆ ನಡೆದುಕೊಂಡು ಬಂದೆವು, ಪಿಸೋಚಿನ್ನಲ್ಲಿ ಮೂರು ದಿನ ಇದ್ದೆವು. ದಿನಕ್ಕೆ ಒಂದು ಸಲ ಊಟ ಕೊಡುತ್ತಿದ್ದರು, ನಂತರ ದೆಹಲಿಗೆ ಕರೆ ತಂದರು. ನಮ್ಮನ್ನು ಭಾರತೀಯ ರಾಯಭಾರಿ ಕಚೇರಿಯವರು ತುಂಬಾ ಚೆನ್ನಾಗಿ ನೋಡಿಕೊಂಡರು" ಎಂದು ತಾವು ಪಟ್ಟ ಕಷ್ಟವನ್ನು ವಿವರಿಸಿದರು.
ವಿದ್ಯಾರ್ಥಿ ಅನೀಷ್ ಆರೋಪದ ಕುರಿತು ಮಾತನಾಡಿದ ಅವರು, "ಆ ರೀತಿ ಮಾತನಾಡಿರುವುದು ತಪ್ಪು, ಗಟ್ಸ್ ಅಂಥ ಎಲ್ಲಾ ಹೇಳಬಾರದಿತ್ತು, ಉಕ್ರೇನ್ ಒಳಗೆ ಭಾರತೀಯ ರಾಯಭಾರಿ ಕಚೇರಿಯವರು ಬರಲು ಆಗುತ್ತಿರಲಿಲ್ಲ, ನಾವು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದೆವು, ನಾವು ಕಷ್ಟಪಟ್ಟು ಬರಬೇಕಿತ್ತು, ಭಾರತೀಯ ರಾಯಭಾರಿ ಕಚೇರಿಯವರು ಸಹಾಯ ಮಾಡಿದ್ದರಿಂದಲೇ ನಾವು ವಾಪಾಸ್ ಬಂದಿದ್ದು. ಈಗ ಉಕ್ರೇನ್ನನ್ನು ಸಂಪೂರ್ಣ ನಾಶ ಮಾಡಿದ್ದಾರೆ, ಅಲ್ಲಿ ಏನು ಉಳಿದಿಲ್ಲ" ಎಂದರು.
ಗಗನ್ ಗೌಡ ತಾಯಿ ಸುಜಾತ ಮಾತನಾಡಿ, "ಮಗ ಗಗನ್ಗೌಡ ವಾಪಾಸ್ ಮನೆಗೆ ಬಂದಿದ್ದು ಸಂತಸ ತಂದಿದೆ. ಮಗ ಇಲ್ಲದೆ ಏನು ಮಾತನಾಡಲು ಆಗುತ್ತಿರಲಿಲ್ಲ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ, ಮತ್ತೆ ಮಕ್ಕಳನ್ನು ಅಲ್ಲಿಗೆ ಕಳುಹಿಸಲು ನಮಗೆ ಭಯ, ಆ ಮಕ್ಕಳಿಗೆ ಹೋಗಲು ಭಯವಾಗುತ್ತಿದೆ. ಇಲ್ಲೇ ಮೆಡಿಕಲ್ ಸೀಟ್ ಕೊಟ್ಟು ಅನುಕೂಲ ಮಾಡಿಕೊಟ್ಟರೆ ಹೊರ ದೇಶಕ್ಕೆ ಕಳುಹಿಸಿಲ್ಲ" ಎಂದು ಮನವಿ ಮಾಡಿದರು.
"ಇಲ್ಲಿ ಮೆಡಿಕಲ್ ಸೀಟ್ಗೆ ಹಣ ಕಟ್ಟಿ ಓದಿಸಲು ನಮ್ಮ ಬಳಿ ಅಷ್ಟು ಹಣವಿರಲಿಲ್ಲ ಅದಕ್ಕೆ ಉಕ್ರೇನ್ಗೆ ಕಳುಹಿಸಿದೆವು. ಇವತ್ತು ನನ್ನ ಮಗನ ಮರುಜನ್ಮ ಸಿಕ್ಕಿದೆ. ಏಳು ಜನ್ಮಕ್ಕೂ ನನ್ನ ಮಗನಾಗಿ ಹುಟ್ಟಲಿ, ಎಲ್ಲಾ ರಾಜಕಾರಣಿಗಳು, ಡಿಸಿ, ಅಧಿಕಾರಿಗಳು ಫೋನ್ ಮಾಡಿ ಧೈರ್ಯ ತುಂಬುತ್ತಿದ್ದರು" ಎಂದರು.












Click it and Unblock the Notifications