ಬಾಹುಬಲಿಗಾಗಿ 11.60 ಕೋಟಿ ದಾನ ಮಾಡಿದ ರಾಜಸ್ತಾನಿ ಕುಟುಂಬ
ಶ್ರವಣಬೆಳಗೊಳ, ಫೆಬ್ರವರಿ 17: ಹನ್ನೆರಡು ವರ್ಷದ ನಿರೀಕ್ಷೆ. ಲಕ್ಷಾಂತರ ಕಣ್ಣುಗಳು ತೇವಗೊಂಡಿರಲಿಕ್ಕೂ ಸಾಕು. ಚೆಲುವಾಂತ ಚೆಲುವ, ಮಹಾ ವಿರಾಗಿ ಗೊಮ್ಮಟೇಶ್ವರನಿಗೆ ಶನಿವಾರ ಮಹಾಮಸ್ತಕಾಭಿಷೇಕದ ಆರಂಭವಾಗಿದೆ.
ಮಹಾ ವಿರಾಗಿಯ ಮಹಾ ಮಸ್ತಕಾಭಿಷೇಕಕ್ಕೆ ರಾಜಸ್ತಾನದ ಮಹಾನ್ ದಾನಿಯೊಬ್ಬರು ಹನ್ನೊಂದು ಕೋಟಿ ಅರವತ್ತು ಲಕ್ಷ ರುಪಾಯಿ ನೀಡಿ, ಬಾಹುಬಲಿಯ ಮೇಲೆ ಮೊದಲ ಜಲಾಭಿಷೇಕಕ್ಕೆ ಅವಕಾಶ ಪಡೆದರು.
ಆ ಮೊತ್ತವನ್ನು ಇನ್ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಬಳಸಲಾಗುತ್ತದೆ ಎಂದು ಘೋಷಿಸಲಾಯಿತು. ಇನ್ನೂ ಅಚ್ಚರಿ ವಿಷಯ ಏನೆಂದರೆ ಹನ್ನೆರಡು ವರ್ಷದ ಹಿಂದೆ ಬಾಹುಬಲಿಗೆ ಮೊದಲ ಜಲಾಭಿಷೇಕ ಮಾಡುವ ಅವಕಾಶ ಕೂಡ ಅದೇ ಕುಟುಂಬದ್ದಾಗಿತ್ತು. ಆ ಸಲ ಈ ಕುಟುಂಬ ನೀಡಿದ ದಾನದ ಮೊತ್ತ ಒಂದು ಕೋಟಿ ರುಪಾಯಿ.
In Pics: ಮುಗಿಲೆತ್ತರಕ್ಕೆ ನಿಂತ ವಿರಾಗಿಗೆ ಮಹಾಮಸ್ತಕಾಭಿಷೇಕ
ತ್ಯಾಗ-ದಾನ-ವೈರಾಗ್ಯಗಳ ಸಂದೇಶವನ್ನೇ ಅಲ್ಲವೇ ಜೈನ ಧರ್ಮ ಹಾಗೂ ಆ ಭಗವಾನ್ ಬಾಹುಬಲಿ ನೀಡುವುದು. ಆರುನೂರಕ್ಕೂ ಹೆಚ್ಚು ಮೆಟ್ಟಿಲೇರಿ ಬಾಹುಬಲಿ ಎದುರು ನಿಲ್ಲುವುದರೊಳಗೆ ದೇಶ- ವಿದೇಶದಿಂದ ಹರಿದುಬಂದ ಭಕ್ತ ಸಾಗರದ ದರ್ಶನವಾಗಿರುತ್ತದೆ. ಪುಟ್ಟ ಮಗುವಿನಿಂದ ಕುಗ್ಗಿಹೋದ ರೆಟ್ಟೆಯಿರುವ ಸನ್ಯಾಸಿಗಳ ತನಕ ಯಾರ ಕಣ್ಣು ಗಮನಿಸಿದರೂ ಅದೇ ಭಕ್ತಿ ಭಾವ. ಎಲ್ಲರೂ ಬಾಯಲ್ಲೂ 'ಜೈ ಜಿನೇಂದ್ರ', ಜೈ ಬಾಹುಬಲಿ.

ಸೊಗಸಾದ ವ್ಯವಸ್ಥೆ
ಒಂದಿಷ್ಟು ಲೋಪ ಇಣುಕದಂತೆ ಸೊಗಸಾದ ವ್ಯವಸ್ಥೆ ಶ್ರವಣಬೆಳಗೊಳದಲ್ಲಿ ಮಾಡಲಾಗಿದೆ. ಅದೆಷ್ಟು ಹಣ, ಜನ, ಶ್ರದ್ಧೆ- ಜವಾಬ್ದಾರಿ, ಆಸಕ್ತಿ ವಹಿಸಿದರೆ ಈ ಪರಿಯ ವ್ಯವಸ್ಥೆ ಆಗುತ್ತದೋ? ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಹಾಸನ ಜಿಲ್ಲಾಡಳಿತ ಒಟ್ಟಾರೆ ಸಹಸ್ರ ಸಹಸ್ರ ಜನರ ಶ್ರಮ, ಸರಕಾರದ ಆಸಕ್ತಿ ಎಲ್ಲ ಕಾಣಸಿಗುತ್ತದೆ.

ಕಣ್ಣು ಹಾಯಿಸಿದಷ್ಟು ದೂರಕ್ಕೂ ಭಕ್ತರು
ಶನಿವಾರ ಮಧ್ಯಾಹ್ನ ಎರಡು ಮೂವತ್ತರ ನಂತರ ಬಾಹುಬಲಿಗೆ ನೂರೆಂಟು ಕಳಶದ ಜಲಾಭಿಷೇಕ ಆರಂಭವಾಯಿತು. ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣುತ್ತಿದ್ದ ಭಕ್ತರು ಬಿಸಿಲನ್ನೂ ಲೆಕ್ಕಿಸದೆ ಜಲಾಭಿಷೇಕ ಕಣ್ತುಂಬಿಕೊಂಡರು. ಮಾಧ್ಯಮಗಳಿಂದ ವರದಿ ಮಾಡಲು ಬಂದಿದ್ದ ಹಲವರಿಗೆ ಹಿಂದಿನ ಮಹಾಮಸ್ತಕಾಭಿಷೇಕದ ನೆನಪೇ ಇಲ್ಲ. ಏಕೆಂದರೆ ಬಹುತೇಕರು ಇಪ್ಪತ್ತು- ಮೂವತ್ತರ ಹರೆಯದವರಿದ್ದರು.

ಸನ್ಯಾಸಿ- ಸನ್ಯಾಸಿನಿಯರು ಭಾಗಿ
ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ಸಾವಿರ ಸಂಖ್ಯೆಯಲ್ಲಿ ಸನ್ಯಾಸಿ- ಸನ್ಯಾಸಿನಿಯರು ಬಂದಿದ್ದರು. ಶ್ರವಣಬೆಳಗೊಳದಲ್ಲಿ ಭಾರೀ ಉತ್ಸವ ನಡೆಯುತ್ತಿದೆ ಎಂಬ ಕಾರಣಕ್ಕೆ ಅದರ ಹಿನ್ನೆಲೆ ಕೂಡ ತಿಳಿಯದ ವಿದೇಶೀಯರ ಸಂಖ್ಯೆಗೂ ಏನೂ ಕಡಿಮೆ ಇರಲಿಲ್ಲ.

ಮಿಂಚಿದರು ರೋಹಿಣಿ ಸಿಂಧೂರಿ
ಬಾಹುಬಲಿಗೆ ಜಲಾಭಿಷೇಕ ಮಾಡುವ ಅವಕಾಶ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಸಚಿವ ಎ.ಮಂಜು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸಚಿವೆ ಉಮಾಶ್ರೀ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಸಿಕ್ಕಿತು. ಇಡೀ ಕಾರ್ಯಕ್ರಮದಲ್ಲಿ ಮಿಂಚಿದ್ದು ಹಳದಿ ಸೀರೆ ಉಟ್ಟು, ಬಹಳ ಹೊತ್ತು ಅಟ್ಟಣಿಗೆ ಮೇಲೆ ಕಾಣಿಸಿಕೊಂಡ ರೋಹಿಣಿ ಸಿಂಧೂರಿ.

ಡೋಲಿಯವರ ನೆನೆಯದಿದ್ದರೆ ಹೇಗೆ?
ಬೆಟ್ಟಕ್ಕೆ ಮೆಟ್ಟಲು ಏರಲಾರದವರಿಗೆ ಡೋಲಿ ವ್ಯವಸ್ಥೆ ಇದ್ದು, ಅದಕ್ಕಾಗಿ ಜಾರ್ಖಂಡ್ ನಿಂದ ಬಂದಿರುವ ತಂಡಗಳು ಶ್ರಮಿಸುತ್ತಿವೆ. ದಿನಕ್ಕೆ ಆರುನೂರು ರುಪಾಯಿ ಪಡೆದು ಅಶಕ್ತರ ಸೇವೆಗೆ ನಿಂತಿರುವ ಇವರಿಗೊಂದು ನಮಸ್ಕಾರ ಹೇಳಲೇಬೇಕು. ಆಯೋಜಕರು ಇಂಥದ್ದೊಂದು ವ್ಯವಸ್ಥೆ ಮಾಡಲು ಪಟ್ಟಿರುವ ಶ್ರಮವೂ ಸ್ಮರಣೀಯ.

ಹೇಳುತ್ತಾ ಹೋದಂತೆ ಅದೆಷ್ಟು ವಿಷಯಗಳು
ಜಲಾಭಿಷೇಕದ ನಂತರ ಮಾಡಿದ ಅಷ್ಟದ್ರವ್ಯ ಅಭಿಷೇಕ ನೋಡಲು ಎರಡು ಕಣ್ಣು ಸಾಲದು. ಹನ್ನೆರಡು ವರ್ಷಗಳ ನಂತರದ ಈ ಬಾರಿಯ ಮಹಾಮಸ್ತಕಾಭಿಷೇಕದಲ್ಲಿ ಮೊಬೈಲ್ ಫೋನ್ ಗಳ ಕಾರುಬಾರು ಜೋರಾಗಿತ್ತು. ಬಿಸಿಲಿನ ತಾಪ ತಡೆದುಕೊಳ್ಳುವ ಸಲುವಾಗಿ ಸನ್ ಗ್ಲಾಸ್ ತೊಟ್ಟಿದ್ದ ಯುವಕ-ಯುವತಿಯರು, ಆಂಧ್ರ ಬ್ಯಾಂಕ್ ನವರ ನೀರಿನ ವ್ಯವಸ್ಥೆ, ಬಾಹುಬಲಿ ಎದುರು ನೃತ್ಯ ಸೇವೆ ಅರ್ಪಿಸಿದ ಪುಟ್ಟ ಹೆಣ್ಣುಮಕ್ಕಳು...ಹೇಳುತ್ತಾ ಹೋದಂತೆ ಅದೆಷ್ಟು ವಿಷಯಗಳೋ!
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications