ಕಪ್ಪುಚುಕ್ಕೆ ಬರದಂತೆ ಮಹಾಮಸ್ತಕಾಭಿಷೇಕ : ರೇವಣ್ಣ
ಶ್ರವಣಬೆಳಗೊಳ, ಸೆಪ್ಟೆಂಬರ್ 13 : 2018ರಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕಕ್ಕೆ ಯಾವುದೇ ಕಪ್ಪುಚುಕ್ಕೆ ಬಾರದಂತೆ ಯಶಸ್ವಿಯಾಗಿ ಮಹೋತ್ಸವ ನೆರವೇರಿಸಲು ಕೇಂದ್ರ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಮಾಡಲು ದೇವೇಗೌಡರು ಸಿದ್ದರಿದ್ದಾರೆ ಎಂದು ಮಾಜಿ ಸಚಿವ ಹಾಗೂ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ವಾಗ್ದಾನ ನೀಡಿದ್ದಾರೆ.
ಬುಧವಾರ ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆಶೀರ್ವಾದ ಪಡೆದು ಮಾತನಾಡಿದ ಅವರು, ನಿನ್ನೆ ದೇವೇಗೌಡರವರು ದೂರವಾಣಿ ಕರೆ ಮಾಡಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಕಾಮಗಾರಿಗಳು ಹೇಗೆ ನಡೆಯುತ್ತಿವೆ ಎಂದು ನೋಡಿಕೊಂಡು ಬರಲು ತಿಳಿಸಿದ್ದರು ಎಂದು ರೇವಣ್ಣ ನುಡಿದರು.

ಈ ಹಿನ್ನೆಲೆಯಲ್ಲಿ ಇಂದು ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಕೇಂದ್ರ ಸರ್ಕಾರದ ವತಿಯಿಂದ ಆಗಬೇಕಾದ ರಸ್ತೆಗಳು, ರೈಲ್ವೆ ಇಲಾಖೆಗೆ ಸಂಬಂಧಿಸಿದ ಕೆಲಸಗಳು ಹಾಗೂ ಇನ್ನಿತರ ಕಾಮಗಾರಿಗಳನ್ನು ಸಂಸದನಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ದೇವೇಗೌಡರು ತಿಳಿಸಿದ್ದಾರೆ ಎಂದರು.
2006ರ ಮಹೋತ್ಸವಕ್ಕೆ ಕೇಂದ್ರ ಸರ್ಕಾರ 250 ಕೋಟಿ ರೂ. ಹಣ ಬಿಡುಗಡೆ ಮಾಡಿತ್ತು ಹಾಗೂ ಹಾಸನ-ಬೆಂಗಳೂರು ಚತುಷ್ಪಥ ರಸ್ತೆ ನಿರ್ಮಾಣಕ್ಕೆ 2700 ಕೋಟಿ ನೀಡಲಾಗಿತ್ತು. ಅದೇ ರೀತಿ ಈ ಬಾರಿ ದೇವೇಗೌಡರು ನಿತಿನ್ ಗಡ್ಕರಿಯವರಿಗೆ ಬರೆದ ಪತ್ರದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಅಭಿವೃದ್ಧಿ ಹಾಗೂ ಮಹಾಮಸ್ತಕಾಭಿಷೇಕಕ್ಕೆ ಸಂಬಂಧಿಸಿದಂತೆ ಈಗಾಗಲೇ 100 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಮತ್ತೆ 200 ಕೋಟಿ ಬಿಡುಗಡೆ ಮಾಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗಿದ್ದು, ಮುಖ್ಯಮಂತ್ರಿಯವರೂ ಪತ್ರ ಬರೆದಿದ್ದಾರೆ ಎಂದರು.

ಈಗಾಗಲೇ ಕೇಂದ್ರ ರೈಲ್ವೆ ಮಂತ್ರಿಗಳೊಂದಿಗೆ ದೇವೇಗೌಡರು ಚರ್ಚಿಸಿದ್ದು ಮಹೋತ್ಸವದ ಸಂದರ್ಭದಲ್ಲಿ ಹಾಸನ-ಬೆಂಗಳೂರು ಮಾರ್ಗವಾಗಿ ಪ್ರತಿ 2 ಗಂಟೆಗೆ ಒಂದರಂತೆ ರೈಲು ಬಿಡುವಂತೆ ಮನವಿ ಮಾಡಲಾಗಿದೆ. ಹಿರೀಸಾವೆಯಿಂದ ಶ್ರವಣಬೆಳಗೊಳ ಮಾರ್ಗವಾಗಿ ಚನ್ನರಾಯಪಟ್ಟಣದವರೆಗೆ ರಾಷ್ಟ್ರೀಯ ಹೆದ್ದಾರಿಗೆ ಸೇರಿಸಿ ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದ್ದು, ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಶ್ರವಣಬೆಳಗೊಳ : ಮಸ್ತಕಾಭಿಷೇಕ ಪ್ರಚಾರಕ್ಕೆ ತಂತ್ರಜ್ಞಾನಗಳ ಬಳಕೆ
ಪ್ರವಾಸೋದ್ಯಮ ಇಲಾಖೆ ಮಂತ್ರಿಗಳು ಇಲ್ಲೇ 2 ದಿನ ಕ್ಯಾಂಪ್ ಮಾಡಿ ಪ್ರವಾಸಿಗರ ಸೂಕ್ತ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಬೇಕು ಹಾಗೂ ಹೊರ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಹೊರ ರಾಜ್ಯದ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ ರೂಪಿಸಬೇಕು ಎಂದು ರೇವಣ್ಣ ಸೂಚಿಸಿದರು.
ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಹಣಕಾಸು ಮಂತ್ರಿ, ನಿತಿನ್ ಗಡ್ಕರಿ, ಈಗಿನ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಸುರೇಶ್ಪ್ರಭು, ರೈಲ್ವೆ ಅಧಿಕಾರಿಗಳು ಮುಂತಾದವರನ್ನು ದೇವೇಗೌಡರು ಹಾಗೂ ನಾನು ಮೂರ್ನಾಲ್ಕು ಬಾರಿ ಭೇಟಿ ಮಾಡಿದ್ದು, ಮಹಾಮಸ್ತಕಾಭಿಷೇಕಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications