ಹಾಸನದಲ್ಲಿ ನಾಮಪತ್ರ ಸಲ್ಲಿಸಲು ಮುಂದಾದ ಭವಾನಿ, ಸ್ವರೂಪ್:ಶಕುನಿಗಳ ಬಗ್ಗೆ ಮಾತನಾಡಿದ ಎಚ್ಡಿಕೆ- ಸಂಘರ್ಷಕ್ಕೆ ಮತ್ತೊಂದು ತಿರುವು
ಹಾಸನ, ಏಪ್ರಿಲ್ 12: ಹಾಸನ ಟಿಕೆಟ್ಗೆ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿರುವ ಜೆಡಿಎಸ್ ( JDS ) ಮುಖಂಡರಾದ ಭವಾನಿ ರೇವಣ್ಣ ಮತ್ತು ಎಚ್ಪಿ ಸ್ವರೂಪ್ ಇಬ್ಬರೂ ಒಂದೇ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಅವರು ಕ್ರಮವಾಗಿ ಏಪ್ರಿಲ್ 14 ಮತ್ತು ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ. ಈ ಸಂದರ್ಭದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮೆಗಾ ರೋಡ್ ಶೋ ನಡೆಸಲು ಇಬ್ಬರು ಮುಖಂಡರು ಯೋಜಿಸುತ್ತಿದ್ದಾರೆ.
ಈ ಪ್ರತಿಷ್ಠಿತ ಕ್ಷೇತ್ರಕ್ಕೆ ಜೆಡಿಎಸ್ ಟಿಕೆಟ್ ಘೋಷಣೆ ಮಾಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮತ್ತು ಅವರ ಸಹೋದರ ಎಚ್ಡಿ ರೇವಣ್ಣ ನಡುವಿನ ಜಟಾಪಟಿಯ ಏರ್ಪಟ್ಟಿದೆ. ಇದರ ನಡುವೆಯೇ ಭವಾನಿ ಹಾಗೂ ಸ್ವರೂಪ್ ನಾಮಪತ್ರ ಸಲ್ಲಿಸುವ ಮಾಹಿತಿ ಬಹಿರಂಗಗೊಂಡಿದೆ.

ಕುಮಾರಸ್ವಾಮಿ ಅವರು ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಅವರ ಸಹೋದರ ಎಚ್ಡಿ ರೇವಣ್ಣ ಅವರು ತಮ್ಮ ಪತ್ನಿ ಭವಾನಿ ಅವರಿಗೆ ಟಿಕೆಟ್ ಕೊಡಿಸಲು ಹರಸಾಹಸ ಪಡುತ್ತಿದ್ದಾರೆ.
ಉಭಯ ಬಣಗಳ ನಾಯಕರು ಸರಣಿ ಸಭೆ ನಡೆಸಿ ಜೆಡಿಎಸ್ ವಲಯದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಕಾರ್ಯತಂತ್ರ ರೂಪಿಸಿದ್ದಾರೆ. ಒಕ್ಕಲಿಗರ ಉಪಪಂಗಡವಾದ ದಾಸ ಒಕ್ಕಲಿಗ ಸಮುದಾಯದ 30,000 ಬೆಂಬಲಿಗರನ್ನು ರೋಡ್ಶೋಗೆ ಕರೆತರಲು ಸ್ವರೂಪ್ ಯೋಜಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಭವಾನಿ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿರುವ ಕುಮಾರಸ್ವಾಮಿ, ಬೃಹತ್ ಸಮಾವೇಶ ನಡೆಸುವ ಮೂಲಕ ಪ್ರತಿಪಕ್ಷಗಳ ಅಭ್ಯರ್ಥಿಗಳಿಗೆ ಹಾಗೂ ಭವಾನಿ ಬಣಕ್ಕೆ ಪ್ರಬಲ ಸಂದೇಶ ರವಾನಿಸುವಂತೆ ಸ್ವರೂಪ್ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ. ಭವಾನಿ ಕೂಡ ಮೆಗಾ ರೋಡ್ ಶೋ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕುಮಾರಸ್ವಾಮಿ ಹೇಳಿಕೆ
ಹಾಸನ ಟಿಕೆಟ್ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬದೊಳಗಿನ ಭಿನ್ನಾಭಿಪ್ರಾಯ ಮುಂದುವರಿದಿದೆ. ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಮಹಾಭಾರತದ ಕುರುಕ್ಷೇತ್ರದ ಯುದ್ಧವನ್ನು ಪ್ರಸ್ತಾಪಿಸಿದ್ದಾರೆ. ಕೆಲವು 'ಶಕುನಿಗಳು' ಸಹೋದರ ಎಚ್ ಡಿ ರೇವಣ್ಣನವರ ಬ್ರೈನ್ ವಾಶ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ಅರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ತಂದೆ ಮತ್ತು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಸಹ ತಮ್ಮ ಅಣ್ಣ, ಮಾಜಿ ಸಚಿವ ರೇವಣ್ಣ ಅವರನ್ನು ಮನವೊಲಿಸಲು ಸಾಧ್ಯವಾಗಲಿಲ್ಲ ಮತ್ತು ಇದು ದುರದೃಷ್ಟಕರ ಎಂದು ಹೇಳಿದ್ದಾರೆ.
ಹಾಸನದಲ್ಲಿ ಪಕ್ಷದ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ನೀಡಬೇಕು ಎಂಬುದು ತಮ್ಮ ಸ್ಪಷ್ಟ ನಿಲುವಾಗಿದ್ದು, ಇದರಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.
'ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ನಮ್ಮ ಕುಟುಂಬದವರು ಅಭ್ಯರ್ಥಿಯಾಗುವ ಅಗತ್ಯವಿಲ್ಲ ಎಂದು ಒಂದೂವರೆ ವರ್ಷಗಳ ಹಿಂದೆಯೇ ಹೇಳಿದ್ದೆ. ಹಾಸನದಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿ ಚುನಾವಣೆ ಎದುರಿಸುವ ಧೈರ್ಯ ಪಕ್ಷಕ್ಕಿದೆ' ಎಂದೂ ಎಚ್ಡಿಕೆ ಹೇಳಿದ್ದಾರೆ.
'ಹಾಸನದಲ್ಲಿ ಶಕುನಿಗಳಿದ್ದಾರೆ. ಇವರು ಕುಟುಂಬವನ್ನು ಹಾಳುಮಾಡಲು ಮುಂದಾಗಿದ್ದಾರೆ. ಶಕುನಿಗಳು ಮನಸ್ಸನ್ನು ಕಲಕುತ್ತಾರೆ. ಕುರುಕ್ಷೇತ್ರ ಯುದ್ಧ ಏಕೆ ಸಂಭವಿಸಿತು, ಶಕುನಿಯ ನಡತೆಯೇ ಇದು. ಇದು ಇತಿಹಾಸವಾಗಿದೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications