ಅಕ್ರಮ ಮರಳು ಸಂಗ್ರಹ ಪತ್ತೆ ಹಚ್ಚಿ, ವಶಕ್ಕೆ ಪಡೆದ ರೋಹಿಣಿ ಸಿಂಧೂರಿ
ಹಾಸನ, ಜನವರಿ 10 : ಸೂಕ್ತ ದಾಖಲೆ ಹಾಗೂ ರಾಯಲ್ಟಿಯನ್ನು ಪಾವತಿಸದೆ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 8000 ಮೆಟ್ರಿಕ್ ಟನ್ ಮರಳನ್ನು ಹಾಗೂ ವಾಹನ ಮತ್ತು ಜನರೇಟರ್ ಸೆಟ್ ಅನ್ನು ಸಕಲೇಶಪುರ ತಾಲೂಕಿನ ಅರೆಕೆರೆ ಬಳಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಗುರುವಾರ ಖಚಿತ ಮಾಹಿತಿ ಮೇರೆಗೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಮರಳನ್ನು ವಶಕ್ಕೆ ಪಡೆದರು. ಇದರ ಮೌಲ್ಯ ಸುಮಾರು 2 ಕೋಟಿ ರೂ.ಗಳು.
ಓಷನ್ ಎಂಬ ಖಾಸಗಿ ಗುತ್ತಿಗೆದಾರ ಸಂಸ್ಥೆಯವರು ಅಕ್ರಮವಾಗಿ ಈ ಮರಳನ್ನು ದಾಸ್ತಾನು ಮಾಡಿರುವುದು ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಹಾಜರಿದ್ದ ಓಷನ್ ಕಂಪನಿಯ ಸೈಟ್ ಇಂಜಿನಿಯರ್ ಜಹೀರ್ ಉದ್ತಾನ್ ಅವರು ದಾಸ್ತಾನು ಮಾಡಿದ್ದ ಮರಳಿಗೆ ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲರಾದರು.
ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ತಹಶೀಲ್ದಾರ್ ನಾಗಭೂಷನ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಶ್ರೀನಿವಾಸ್, ಎತ್ತಿನ ಹೊಳೆ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ತಿಮ್ಮೇಗೌಡ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಯಾವುದೇ ಪರವಾನಗಿ ಇರಲಿಲ್ಲ
ಯಾವುದೇ ಪರವಾನಗಿ ಇಲ್ಲದೆ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಯಾವುದೇ ರಾಜಧರ್ಮವನ್ನು ರಾಯಲ್ಟಿಯನ್ನು ಪಾವತಿಸದೆ ಸರ್ಕಾರಕ್ಕೆ ತೆರಿಗೆಯನ್ನು ವಂಚಿಸಿರುವುದು ಕಂಡು ಬಂದಿದೆ. ಕಾನೂನು ರೀತಿಯಲ್ಲಿ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೋಹಿಣಿ ಸಿಂಧೂರಿ ಅವರು ಸಕಲೇಶಪುರ ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಡಿಗೆ ಪಡೆಯಲಾಗಿದೆ
ಓಷನ್ ಕಂಪನಿ ವಿರುದ್ದ ಎಫ್ಐಆರ್ ದಾಖಲಿಸಿ 8000 ಮೆಟ್ರಿಕ್ ಟನ್ ಮರಳು ಹಾಗೂ ಹಿಟಾಚಿ ವಾಹನವನ್ನು ವಶಕ್ಕೆ ತೆಗೆದುಕೊಂಡು ರಾಯಲ್ಟಿ ಮೇಲೆ ಐದು ಪಟ್ಟು ದಂಡ ವಿಧಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಖಾಸಗಿ ಜಮೀನನ್ನು ಮರಳು ದಾಸ್ತಾನು ಮಾಡಲು ಬಳಸಲಾಗಿದೆ. ಇದನ್ನು ಯಾವರೀತಿ ಬಾಡಿಗೆ ಪಡೆಯಲಾಗಿದೆ? ಎಂಬುದನ್ನು ಪರಿಶೀಲಿಸುವಂತೆ ನಿರ್ದೇಶನ ನೀಡಿದರು.

ಎಲ್ಲಿಂದ ಮರಳು ತರಲಾಗಿದೆ
ಎಲ್ಲಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮರಳನ್ನು ತಂದು ಸಂಗ್ರಹಿಸಲಾಗಿದೆ? ಎಂಬುದನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಓಷನ್ ಸಂಸ್ಥೆ ಎತ್ತಿನ ಹೊಳೆ ಯೋಜನೆ ಕಾಮಗಾರಿಗಳ ಗುತ್ತಿಗೆಯನ್ನು ಪಡೆದಿದೆ. ಸಂಬಂಧಪಟ್ಟ ಇಂಜನಿಯರ್ ಇದನ್ನು ಪರಿಶೀಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಮರಳಿನ ಕೊರತೆ ಇಲ್ಲ
ಹಾಸನ ಜಿಲ್ಲೆಯಲ್ಲಿ ಮರಳಿನ ಕೊರತೆ ಇಲ್ಲ. ಆದರೆ, ಇಂತಹ ಅಕ್ರಮಗಳಿಂದ ಕೃತಕ ಅಭಾವ ಸೃಷ್ಟಿಯಾಗಬಹುದು ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಮೈಸೂರು ಮಿನರಲ್ ಮೂಲಕ ಕೆಲವೊಂದು ಬ್ಲಾಕ್ಗಳ ಮರಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಹೆಚ್ಚಿನ ನಿಗಾವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.












Click it and Unblock the Notifications