ಮೈತ್ರಿ ಆದರೂ ದೇವೇಗೌಡ ಕುಟುಂಬಕ್ಕೆ ಬೆಂಬಲ ಇಲ್ಲ: ಎ ಮಂಜು
ಹಾಸನ, ಅಕ್ಟೋಬರ್ 23: ಬದ್ಧ ವೈರಿಗಳೆಂದೇ ಬಿಂಬಿತರಾಗುತ್ತಿದ್ದ ಸಿದ್ದರಾಮಯ್ಯ-ದೇವೇಗೌಡ ಅವರೇ ಜೊತೆಯಾಗಿ ಕೂತು ನಾವೆಲ್ಲಾ ಒಟ್ಟಾಗಿದ್ದೀವಿ ಎಂದು ಸಾರುತ್ತಿದ್ದಾರೆ. ಆದರೆ ಹಾಸನದಲ್ಲಿ ಮಾತ್ರ ಜೆಡಿಎಸ್-ಕಾಂಗ್ರೆಸ್ ಒಂದಾಗುವ ಲಕ್ಷಣಗಳು ಕಾಣುತ್ತಿಲ್ಲ.
ಕಾಂಗ್ರೆಸ್ ಮಾಜಿ ಸಚಿವ ಎ.ಮಂಜು ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬಗಲ ಮುಳ್ಳಾಗಿ ಕಾಡುತ್ತಿದ್ದಾರೆ. ಇಡೀ ಕರ್ನಾಟಕದಲ್ಲೇ ಕಾಂಗ್ರೆಸ್-ಜೆಡಿಎಸ್ ಒಂದು ಎಂದಾದರೆ ಹಾಸನದಲ್ಲಿ ಮಾತ್ರ ಇದನ್ನು ಸಾಧ್ಯವಾಗಲು ಎ.ಮಂಜು ಬಿಡುತ್ತಿಲ್ಲ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೈತ್ರಿ ಆಗಲಿ ಆಗದೇ ಇರಲಿ ನಾನು ಮಾತ್ರ ಎಂದಿಗೂ ದೇವೇಗೌಡರ ಕುಟುಂಬಕ್ಕೆ ಕೊಡುವುದಿಲ್ಲ ಎಂದು ಖಂಡಾತುಂಡವಾಗಿ ಹೇಳಿದ್ದಾರೆ.

ದೇವೇಗೌಡ ಕುಟುಂಬದ ರಾಜಕೀಯ ವಿರೋಧಿ
ನಾನು ದೇವೇಗೌಡ ಕುಟುಂಬದ ರಾಜಕೀಯ ವಿರೋಧಿ. ಅವರು ಮಾಡಿರುವ ಅನ್ಯಾಯಗಳ್ನು ಹೊರಗೆಳೆಯುವ ಹೋರಾಟವನ್ನು ಮಾಡುತ್ತಾ ಬಂದಿದ್ದೇನೆ. ಈಗ ಮೈತ್ರಿ ಆದೊಡನೆ ನನ್ನ ಹೋರಾಟ ನಾನು ಬಿಡುವುದಿಲ್ಲ ಎಂದು ಮಾಜಿ ಕಾಂಗ್ರೆಸ್ ಸಚಿವ ಎ.ಮಂಜು ಹೇಳಿದ್ದಾರೆ.

ದೇವೇಗೌಡರೇ ಚುನಾವಣೆಗೆ ನಿಂತರೂ ಬೆಂಬಲ ಇಲ್ಲ
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಹಾಸನದಲ್ಲಿ ಯಾರೇ ಸ್ಪರ್ಧಿಸಿದರೂ ನಾನು ಅವರಿಗೆ ಬೆಂಬಲ ಕೊಡುವುದಿಲ್ಲ. ದೇವೇಗೌಡರು ನಿಂತರೂ ಸರಿ ಅವರ ಮೊಮ್ಮಗ ಪ್ರಜ್ವಲ್ ನಿಂತರೂ ನಾನು ಬೆಂಬಲ ಕೊಡುವುದಿಲ್ಲ. ನಾನು ದೇವೇಗೌಡರ ವಿರುದ್ಧ ಸೋತಿರುವ ಅಭ್ಯರ್ಥಿ ನನ್ನ ಎದುರಾಳಿಗೆ ಹೇಗೆ ಬೆಂಬಲ ಕೊಡಲಿ ಎಂದು ಅವರು ಪ್ರಶ್ನಿಸಿದ್ದಾರೆ.

ಜೆಡಿಎಸ್ ಶಾಸಕನ ಮೇಲೆ ವಾಗ್ದಾಳಿ
ನನ್ನ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಉಳಿವಿಗಾಗಿ ನಾನು ದೇವೇಗೌಡರ ಕುಟುಂಬದ ವಿರುದ್ಧ ಹೋರಾಡುತ್ತಿದ್ದೇನೆ ಎಂದ ಅವರು, ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ವಿರುದ್ಧ ಹರಿಹಾಯ್ದರು. ಅವರು ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಅವರನ್ನು ಜಿಲ್ಲೆಯಿಂದ ಹೊರಗಟ್ಟಬೇಕು ಎಂದರು.

ರೇವಣ್ಣ ವಿರುದ್ಧ ಭೂ ಕಬಳಿಕೆ ಆರೋಪ
ಮೈತ್ರಿ ಸರ್ಕಾರ ರಚನೆ ಆದಾಗಿನಿಂದಲೂ ಅಸಮಾಧಾನ ಹೊರಹಾಕುತ್ತಲೇ ಇರುವ ಎ.ಮಂಜು ಅವರು, ಇತ್ತೀಚೆಗಷ್ಟೆ ಸಚಿವ ಎಚ್.ಡಿ.ರೇವಣ್ಣ ಅವರ ಮೇಲೆ ಭೂ ಕಬಳಿಕೆಯ ಆರೋಪ ಮಾಡಿದ್ದರು. ಅಲ್ಲದೆ ತಾವು ಈ ಬಗ್ಗೆ ದೂರು ಸಲ್ಲಿಸಿರುವುದಾಗಿಯೂ ಹೇಳಿದ್ದರು.

ಸಿದ್ದರಾಮಯ್ಯ ಬೆಂಬಲಿಗ ಎ.ಮಂಜು
ಸಿದ್ದರಾಮಯ್ಯ ಅವರ ಅಪ್ಪಟ ಬೆಂಬಲಿಗರಾಗಿರುವ ಎ.ಮಂಜು ಅವರು ಸಿದ್ದರಾಮಯ್ಯ ಅವರ ಅಣತಿಯಂತೆಯೇ ದೇವೇಗೌಡ ಅವರ ಕುಟುಂಬದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಎ.ಮಂಜು ಅವರು ಇಷ್ಟೊಂದು ಆರೋಪಗಳನ್ನು ಮಾಡಿದರೂ ಕಾಂಗ್ರೆಸ್ ನ ಹಿರಿಯ ಮುಖಂಡರು ಅವರಿಗೆ ಎಚ್ಚರಿಕೆ ನೀಡದೇ ಇರುವುದೇ ಈ ಅನುಮಾನ ಗಟ್ಟಿಯಾಗಲು ಕಾರಣವಾಗಿದೆ.












Click it and Unblock the Notifications