ಹಾಸನ: ಹಿಜಾಬ್ಗಾಗಿ ಪಟ್ಟುಹಿಡಿದ ವಿದ್ಯಾರ್ಥಿನಿಯರು; ಕೇಸ್ ಹಾಕುತ್ತೇವೆ ಎಂದ ಡಿವೈಎಸ್ಪಿ
ಹಾಸನ, ಫೆಬ್ರವರಿ 17: ಹಿಜಾಬ್ ವಿವಾದ ರಾಜ್ಯದಲ್ಲಿ ತಣ್ಣಗಾಗುವಂತೆ ಕಾಣುತ್ತಿಲ್ಲ. ಅದೇ ರೀತಿ ಹಾಸನದಲ್ಲೂ ಹಿಜಾಬ್ ವಿವಾದ ಭುಗಿಲೆದ್ದಿದ್ದು, ಇಂದು ಕೂಡ ಕೆಲ ವಿದ್ಯಾರ್ಥಿನಿಯರು, ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ, ಹಿಜಾಬ್ ಬೇಕೇ ಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಹಿಂದಿನಿಂದ ಹೇಗೆ ನಡೆದುಕೊಂಡು ಬಂದಿದೆಯೋ, ಅದರಂತೆ ನಮಗೆ ಹಿಜಾಬ್ ಜೊತೆಯಲ್ಲಿಯೇ ಶಿಕ್ಷಣ ಬೇಕು. ನ್ಯಾಯಾಲಯದ ಎಲ್ಲಾ ಮಾತುಗಳನ್ನು ನಾವು ಕೇಳುವುದಕ್ಕಾಗಲ್ಲ ಎಂದು ಹಾಸನದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯರು ಕಾಲೇಜು ಮುಂದೆ ಹೀಗೊಂದು ಹೇಳಿಕೆ ಕೊಟ್ಟು ಪ್ರತಿಭಟನೆ ನಡೆಸಿದರು.
ಹಿಜಾಬ್- ಕೇಸರಿ ವಿಚಾರದಲ್ಲಿ ಗೊಂದಲ ಉಂಟಾಗಿ ಈಗಾಗಲೇ ನ್ಯಾಯಾಲಯದ ಮೆಟ್ಟಿಲು ಏರಿ ಕಾಲೇಜುಗಳಿಗೆ ರಜೆ ಕೊಟ್ಟು ಮತ್ತೆ ಕಾಲೇಜಗಳನ್ನು ಪುನರಾರಂಭಿಸಿದೆ. ನ್ಯಾಯಾಲಯದ ತೀರ್ಪು ಬರುವವರೆಗೂ ಹಿಜಾಬ್ ಧರಿಸದೇ ಮತ್ತು ಕೇಸರಿ ಶಾಲು ಹಾಕದೆ ತರಗತಿಗೆ ಹಾಜರಾಗಬೇಕೆಂದು ಕೋರ್ಟ್ ಮತ್ತು ಸರ್ಕಾರದ ಆದೇಶವಿದ್ದರೂ, ಮುಸ್ಲಿಂ ವಿದ್ಯಾರ್ಥಿನಿಯರು ಹಠಕ್ಕೆ ಬಿದ್ದು ನಾವು ಹಿಜಾಬ್ ಧರಿಸಿಯೇ ತರಗತಿಗೆ ಬರುವುದಾಗಿ ಹೇಳುತ್ತಿದ್ದಾರೆ.

ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿ ನಿಯಮದಂತೆ ಹೊರಗೆ ಹಾಕಿದೆ. ಇದನ್ನು ಖಂಡಿಸಿ ನಾವು ಹಿಜಾಬ್ ಹಾಕದೇ ಕಾಲೇಜಿನ ತರಗತಿಗಳಿಗೆ ಬರುವುದಿಲ್ಲ ಎಂದು ಹಾಸನ ನಗರದ ಎವಿಕೆ ಕಾಲೇಜು ಬಳಿ ಇರುವ ಮಹಿಳಾ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಎದುರು ಹಿಜಾಬ್ ಧರಿಸಿ, ಕಾಲೇಜು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಆರ್.ಸಿ. ರಸ್ತೆ ಬಳಿ ಇರುವ ಶ್ರೀಗಂಧದ ಕೋಠಿ ಕಾಲೇಜಿನಲ್ಲೂ ಇದೇ ರೀತಿ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಹಾಸನದ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಎದುರು ಯುವಕನೋರ್ವ ಹಿಜಾಬ್ ಬಗ್ಗೆ ಮಾತನಾಡಿದ ಹಿನ್ನಲೆ ಆತನನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡಿರುವ ಘಟನೆ ಗುರುವಾರ ಮದ್ಯಾಹ್ನ ನಡೆದಿದೆ. ವಿಚಾರ ತಿಳಿದ ಡಿವೈಎಸ್ಪಿ ಉದಯ ಭಾಸ್ಕರ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಆಗಮಿಸಿ ವಿಚಾರಣೆ ನಡೆಸಿದರು. ಈ ವೇಳೆ ಆ ಯುವಕನಿಗೆ ಡಿವೈಎಸ್ಪಿ ಉದಯಭಾಸ್ಕರ್ ಸಖತ್ ಕ್ಲಾಸ್ ತೆಗೆದುಕೊಂಡರು.
ನಂತರ ಆತನನ್ನು ಜೀಪ್ ಬಳಿ ಎಳೆದಾಡಿದರು. ನಂತರ ಆತ ನನ್ನ ತಮ್ಮ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿ ಆತನನ್ನು ಬಿಡಿಸಿದರು. ಈ ವೇಳೆ ಪ್ರತಿಭಟನಾ ವಿದ್ಯಾರ್ಥಿನಿಯರಿಗೆ ಎಚ್ಚರಿಕೆ ನೀಡಿದ ಡಿವೈಎಸ್ಪಿ ಉದಯ ಭಾಸ್ಕರ್, "ಇನ್ನು ಹತ್ತು ನಿಮಿಷ ಬಿಟ್ಟು ಬರುತ್ತೇನೆ, ನೀವು ಹೋಗಿಲ್ಲ ಅಂದರೆ ಕೇಸ್ ಮಾಡುತ್ತೇವೆ," ಎಂದು ಎಚ್ಚರಿಕೆ ನೀಡಿದರು.

"ಸಿಬ್ಬಂದಿಯೊಬ್ಬರಿಗೆ ಇವರು ಹೋಗಿಲ್ಲ ಅಂದರೆ ಕೇಸ್ ಹಾಕಿ, ಪ್ರಿನ್ಸಿಪಾಲರಿಗೆ ರಿರ್ಪೋರ್ಟ್ ಕೊಡಿ, ಡಿಬಾರ್ ಮಾಡಲಿ ಎಂದು ಸೂಚನೆ ನೀಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಅಲ್ಲದೇ ರಸ್ತೆ ಬ್ಲಾಕ್ ಮಾಡಿದರೆ, ಸೆಕ್ಷನ್ 341 ಅಡಿಯಲ್ಲಿ ಕೇಸ್ ದಾಖಲು ಮಾಡಿ," ಎಂದು ಸೂಚಿಸಿದರು. ನಂತರ ಕೆಲಕಾಲ ಪ್ರತಿಭಟಿಸಿದ ವಿದ್ಯಾರ್ಥಿನಿಯರು ತಮ್ಮ ಮನೆಗೆ ತೆರಳಿದರು.
ಒಟ್ಟಾರೆ ಹಾಸನದಲ್ಲಿ ಹಿಜಾಬ್ ವಿವಾದ ತಣ್ಣಗಾಗುವ ತರ ಕಾಣುತ್ತಿಲ್ಲ. ದಿನಕ್ಕೊಂದು ಕಾಲೇಜಿನಲ್ಲಿ ವಿವಾದ ಭುಗಿಲೇಳುತ್ತಿದ್ದು, ಹಿಜಾಬ್ಗೆ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿಯುತ್ತಿದ್ದಾರೆ.
ಪ್ರತಿಭಟನೆ ಬಗ್ಗೆ ವಿದ್ಯಾರ್ಥಿನಿಯೊಬ್ಬರು ಮಾತನಾಡಿ, ನಮಗೆ ನಮ್ಮ ಧರ್ಮ ಮುಖ್ಯ, ಧರ್ಮದಲ್ಲಿ ಹಿಜಾಬ್ ಧರಿಸುವಂತೆ ಇದೆ. ಹಾಗಾಗಿ ಹಿಜಾಬ್ ಧರಿಸುತ್ತೇವೆ. ಹಿಜಾಬ್ ಬೇಕೇ ಬೇಕು ಎಂದರು. ನಾವು ಹಿಜಾಬ್ ಧರಿಸದೇ ಯಾವುದೇ ತರಗತಿಗೆ ಹೋಗುವುದಿಲ್ಲ ಎಂದರು.












Click it and Unblock the Notifications