ಅನುಕಂಪ vs ಅಭಿವೃದ್ಧಿ: ಹಾಸನ ಅಖಾಡದಲ್ಲಿ ಗೆಲ್ಲೋದು ಯಾರು?
ಹಾಸನ: ದಳಪತಿಗಳ ಭದ್ರಕೋಟೆ, ಮಾಜಿ ಪ್ರಧಾನಿ ದೇವೇಗೌಡರ ತವರಲ್ಲಿ ಬಿಜೆಪಿ, ಜೆಡಿಎಸ್ ಜಿದ್ದಾಜಿದ್ದಿನ ಹಣಾಹಣಿಗೆ ಸಜ್ಜಾಗಿವೆ. ಸೋತ ಕೋಟೆ ಮರುವಶಕ್ಕೆ ಜೆಡಿಎಸ್ ತೊಡೆತಟ್ಟಿದ್ದರೆ, ಮತ್ತೊಮ್ಮೆ ನಾನೇ ಗೆಲ್ಲೋದು ಎಂಬ ಹಠದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಮುನ್ನುಗ್ಗುತ್ತಿದ್ದಾರೆ. ಹಾಗಾದ್ರೆ ಹಾಸನದಲ್ಲಿ ಗೆದ್ದು ಸಾಮ್ರಾಜ್ಯ ಸ್ಥಾಪಿಸೋದು ಯಾರು? ಕಂಪ್ಲೀಟ್ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.
ಕೆಲ ತಿಂಗಳಿಂದ ಕರ್ನಾಟಕ ಚುನಾವಣೆಗಿಂತಲೂ ಹಾಸನ ವಿಧಾನಸಭಾ ಕ್ಷೇತ್ರದ JDS ಅಭ್ಯರ್ಥಿ ವಿಚಾರ ಭಾರಿ ಸೌಂಡ್ ಮಾಡಿತ್ತು. ಅತ್ತ ಭವಾನಿ ರೇವಣ್ಣ ಹಾಸನ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಬೇಕು ಎಂದು ಹಠ ಹಿಡಿದರು. ಇದೇ ಸಂದರ್ಭದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಹಠ ಹಿಡಿದರು. ಕೊನೆಗೆ ಈ ಸಮಸ್ಯೆ ಬಗೆಹರಿಸಲು ದೊಡ್ಡಗೌಡರೇ ಅಖಾಡಕ್ಕೆ ಎಂಟ್ರಿ ಕೊಡಬೇಕಾಯ್ತು. ಹಾಸನ ಕ್ಷೇತ್ರದ JDS ಟಿಕೆಟ್ ಎಚ್.ಪಿ. ಸ್ವರೂಪ್ಗೆ ಫೈನಲ್ ಆಗಿತ್ತು. ಇದೀಗ ಹಾಸನ ಅಖಾಡದಲ್ಲಿ ಜೆಡಿಎಸ್ VS ಬಿಜೆಪಿ ಆಟ ಶುರುವಾಗಿದೆ.

ಸಿಟ್ಟು ಬಿಟ್ಟು ರೇವಣ್ಣ ಸಪೋರ್ಟ್!
ಭವಾನಿ ರೇವಣ್ಣ ಅವರಿಗೆ ಹಾಸನ ಕ್ಷೇತ್ರದ ಟಿಕೆಟ್ ಕೊಡಿಸಲೇಬೇಕು ಎಂಬ ಹಠದಲ್ಲಿ ರೆವಣ್ಣ ಫ್ಯಾಮಿಲಿ ಎಲ್ಲಾ ರೀತಿ ಪ್ರಯತ್ನ ಮಾಡಿತ್ತು. ಆದ್ರೆ ಅಷ್ಟೇ ಹಠ ಹೆಚ್ಡಿಕೆ ಅವರಿಗೂ ಇತ್ತು. ಹೀಗಾಗಿ ಎಚ್.ಪಿ. ಸ್ವರೂಪ್ ವಿಚಾರದಲ್ಲಿ ಕುಮಾರಸ್ವಾಮಿ ಗೆದ್ದರು. ಆದರೆ ಟಿಕೆಟ್ ಸಿಕ್ಕ ನಂತರ ಎಚ್.ಪಿ. ಸ್ವರೂಪ್ಗೆ ರೇವಣ್ಣ ಕುಟುಂಬ ಬೆಂಬಲ ನೀಡುತ್ತಾ ಇಲ್ವಾ? ಎಂಬ ಆತಂಕ ಇತ್ತು, ಎಲ್ಲಾ ಮುನಿಸು ಮರೆತು ಸ್ವರೂಪ್ ಬೆಂಬಲಕ್ಕೆ ಬಂದಿರುವ ರೇವಣ್ಣ ಕುಟುಂಬ, ಈಗ ಖುದ್ದಾಗಿ ಜೆಡಿಎಸ್ ಗೆಲುವಿಗೆ ಭಾರಿ ಶ್ರಮವಹಿಸುತ್ತಿದೆ. ಈ ಮೂಲಕ ಪ್ರೀತಂಗೌಡಗೆ ಹೊಸ ಸವಾಲು ಎದುರಾಗಿದೆ.
ಎಚ್.ಪಿ.ಸ್ವರೂಪ್ ಗೆಲ್ತಾರಾ? ಸೋಲ್ತಾರಾ?
ಹಾಸನ ಜನರ ಮಟ್ಟಿಗೆ ಎಚ್.ಪಿ.ಸ್ವರೂಪ್ ಸೋಲು, ಗೆಲುವಿನ ಪ್ರಶ್ನೆ ಮಿಲಿಯನ್ ಡಾಲರ್ಗೆ ಸಮ. ಯಾಕಂದ್ರೆ ಈ ಕ್ಷೇತ್ರ ಮೊದಲಿನಿಂದ JDS ಭದ್ರಕೋಟೆ. ಆದ್ರೆ 2018ರಲ್ಲಿ ಬಿಜೆಪಿಯ ಪ್ರೀತಮ್ ಗೌಡ ಜೆಡಿಎಸ್ ಅಭ್ಯರ್ಥಿ ಎಚ್.ಎಸ್. ಪ್ರಕಾಶ್ ವಿರುದ್ಧ 13,006 ಮತಗಳ ಅಂತರದಲ್ಲಿ ಗೆಲುವು ಕಂಡರು. ಈಗ JDS ಟಿಕೆಟ್ ಪಡೆದಿರುವ ಎಚ್.ಪಿ. ಸ್ವರೂಪ್ ಕೂಡ ಎಚ್.ಎಸ್. ಪ್ರಕಾಶ್ ಅವರ ಪುತ್ರ. ಇದೇ ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿದ್ದ ಎಚ್.ಎಸ್. ಪ್ರಕಾಶ್ 2018ರಲ್ಲಿ ಸೋಲು ಕಂಡಿದ್ದರು, ಈಗ ಇದೇ ಕಾರಣಕ್ಕೆ ಎಚ್.ಪಿ. ಸ್ವರೂಪ್ ಗೆಲ್ಲಿಸಲು ಜೆಡಿಎಸ್ ಪಣತೊಟ್ಟಿದೆ.

ಎಚ್.ಪಿ.ಸ್ವರೂಪ್ ಗೆಲುವಿಗೆ ಶಕ್ತಿ ಏನು?
ಹಾಸನದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಮುಂದುವರಿಸಿದ್ದರೂ, ಭವಿಷ್ಯದಲ್ಲಿ ಅದನ್ನು ಕಳೆದುಕೊಳ್ಳುವ ಭೀತಿ ಇದ್ದೇ ಇದೆ. ಹೀಗಾಗಿ ಸೋತ ಕ್ಷೇತ್ರವನ್ನ ಮತ್ತೆ ಗೆಲ್ಲಬೇಕು ಎಂಬ ಹಠದಲ್ಲಿ ದಳಪತಿಗಳು ಸ್ವರೂಪ್ ಪರ ನಿಂತಿದ್ದಾರೆ. ಇನ್ನು ಸ್ವರೂಪ್ ಗೆಲುವಿಗೆ ಸಾಕಷ್ಟು ಸಕಾರಾತ್ಮಕ ಅಂಶಗಳಿವೆ. 4 ಬಾರಿ ಎಚ್.ಪಿ.ಸ್ವರೂಪ್ ಅವರ ತಂದೆ ಶಾಸಕರಾಗಿದ್ದರು. ಜೊತೆಗೆ ಇವರ ಕುಟುಂಬದ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪಗಳು ಗಂಭೀರವಾಗಿಲ್ಲ. ಕ್ಲೀನ್ ಹ್ಯಾಂಡ್ ಎನ್ನುವ ಪ್ಲಸ್ ಪಾಯಿಂಟ್ ಜೊತೆಗೆ ಸಾಲದಲ್ಲಿ ಈ ಕುಟುಂಬ ಚುನಾವಣೆ ಎದುರಿಸುತ್ತಿದೆ ಎಂಬ ಅನುಕಂಪ ಕೈಹಿಡಿಯುತ್ತಿದೆ.
ಇದರ ಜೊತೆಗೆ ಎಚ್.ಪಿ.ಸ್ವರೂಪ್ ಅವರ ತಂದೆ ಎಚ್.ಎಸ್. ಪ್ರಕಾಶ್ ಮೂಲ ಜೆಡಿಎಸ್ ಪಕ್ಷದವರು. ಹೀಗಾಗಿಯೇ ಮಾಜಿ ಪ್ರಧಾನಿ ದೇವೇಗೌಡರು, ಎಚ್.ಪಿ.ಸ್ವರೂಪ್ ಗೆಲುವಿಗೆ ಗಟ್ಟಿ ನಿಲುವು ತೆಗೆದುಕೊಂಡಿದ್ದಾರೆ. ಮತ್ತೊಂದು ಕಡೆ ರೇವಣ್ಣ ಕುಟುಂಬ ಕೂಡ ಸ್ವರೂಪ್ ಗೆಲುವಿಗೆ ಹಗಲು, ರಾತ್ರಿ ಶ್ರಮವಹಿಸುತ್ತಿದೆ. ಈ ನಡುವೆ ಆರ್ಥಿಕ ಸಂಕಷ್ಟದಲ್ಲಿ ಪರದಾಡುತ್ತಿರುವ ಎಚ್.ಪಿ.ಸ್ವರೂಪ್ ಚುನಾವಣಾ ಖರ್ಚಿಗೆ ಸ್ವತಃ ಹಾಸನ ಕ್ಷೇತ್ರದ ಜನರೇ ದುಡ್ಡು ಕೊಟ್ಟು, ದೇಣಿಗೆ ಮೂಲಕ ಚುನಾವಣೆ ಎದುರಿಸುವಂತೆ ಬೆಂಬಲ ನೀಡುತ್ತಿದ್ದಾರೆ.

ಎಚ್.ಪಿ.ಸ್ವರೂಪ್ ಗೆಲುವಿಗೆ ಅಡ್ಡಿ ಏನು?
ಹಾಸನ ಕ್ಷೇತ್ರದ ಪ್ರಸಕ್ತ ಸ್ಥಿತಿ ನೋಡಿದರೆ ಸಮಬಲದ ಹೋರಾಟ ನಿರೀಕ್ಷೆ ಮಾಡುತ್ತಿದ್ದಾರೆ ಜನರು. ಆದರೆ ಸ್ವರೂಪ್ ಗೆಲುವಿಗೆ ಇರುವ ಸಕಾರಾತ್ಮಕ ಅಂಶಗಳ ಜೊತೆ ಕೆಲ ನ್ಯೂನ್ಯತೆ ಕೂಡ ಇದೆ, ಅದೇನೆಂದ್ರೆ ಇದು ಎಚ್.ಪಿ.ಸ್ವರೂಪ್ಗೆ ಮೊದಲ ಚುನಾವಣೆ. ಹೀಗಾಗಿ ಜನರ ಜೊತೆ ಬೆರೆಯುವುದನ್ನ ಈಗೀಗ ಸ್ವರೂಪ್ ರೂಢಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ತಂದೆ 4 ಬಾರಿ ಶಾಸಕರಾಗಿದ್ದರು ಎಂಬ ಐಡೆಂಟಿಟಿ ಹೊರತು, ಸ್ವಂತ ಐಡೆಂಟಿಟಿ ಇನ್ನೂ ರೂಪಿಸಿಕೊಂಡಿಲ್ಲ.
ಇದಿಷ್ಟೂ ಹಾಸನ ಕ್ಷೇತ್ರದ JDS ಅಭ್ಯರ್ಥಿ ಎಚ್.ಪಿ. ಸ್ವರೂಪ್ ಸೋಲು ಗೆಲುವಿನ ಲೆಕ್ಕಾಚಾರ. ಸ್ವತಃ ದೇವೇಗೌಡರ ಕುಟುಂಬ ಸದಸ್ಯರು ಸ್ವರೂಪ್ ಬೆಂಬಲಕ್ಕೆ ನಿಂತು ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಜನ ಕೂಡ ದೇಣಿಗೆಯನ್ನ ನೀಡಿ, ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಹಣದ ಸಹಾಯ ಮಾಡುತ್ತಿದ್ದಾರೆ. ಹಾಗಾದ್ರೆ ಬಿಜೆಪಿಯ ಅಭ್ಯರ್ಥಿ, ಹಾಲಿ ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ಸೋಲು ಗೆಲುವಿನ ಲೆಕ್ಕಾಚಾರಗಳನ್ನ ಮುಂದೆ ನೋಡೋಣ.
ಜೆ.ಪ್ರೀತಂಗೌಡ ಗೆಲುವಿಗೆ ಶಕ್ತಿ ಯಾವುದು?
ಮೊದಲೇ ವಿವರಿಸಿದಂತೆ 2018ರಲ್ಲಿ ಮೊದಲ ಬಾರಿಗೆ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದ ಜೆ.ಪ್ರೀತಂಗೌಡ ಈಗ 2ನೇ ಬಾರಿಗೆ ಇದೇ ಕ್ಷೇತ್ರದಿಂದ ಶಾಸಕರಾಗಿ ಮರು ಆಯ್ಕೆ ಆಗುವ ನಿರೀಕ್ಷೆಯಲ್ಲಿದ್ದಾರೆ. ಜೆ.ಪ್ರೀತಂಗೌಡ ಗೆಲುವಿನ ಹುಮ್ಮಸ್ಸಿನಲ್ಲಿ ಇರಲು ಕಾರಣ ಹಲವು. ಅದರಲ್ಲಿ ಪ್ರಮುಖವಾಗಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ತಮ್ಮ ಗೆಲುವಿಗೆ ಶ್ರೀರಕ್ಷೆ ಎಂಬ ನಂಬಿಕೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ರಸ್ತೆ, ಕಾಲುವೆ, ಪಾರ್ಕ್ ಕೆಲಸ ಅಚ್ಚುಕಟ್ಟಾಗಿ ನಡೆದಿದೆ ಎಂಬ ಪ್ಲಸ್ ಪಾಯಿಂಟ್ ಹಾಸನದ ಬಿಜೆಪಿ ಅಭ್ಯರ್ಥಿ ಜೆ.ಪ್ರೀತಂಗೌಡ ಅವರಿಗಿದೆ.
ಜೆ.ಪ್ರೀತಂಗೌಡ ಗೆಲುವಿಗೆ ಅಡ್ಡಿ ಏನು?
ಪ್ರಮುಖವಾಗಿ ಜೆ.ಪ್ರೀತಂಗೌಡ ಗೆಲುವಿಗೆ ಅಡ್ಡಿಯಾಗಿರುವುದು ಎಚ್.ಪಿ.ಸ್ವರೂಪ್ ಪರ ಇರುವ ಅನುಕಂಪದ ಅಲೆ. ಈಗಾಗಲೇ ಜನರೇ ದೇಣಿಗೆ ನೀಡಿ, ಸ್ವರೂಪ್ಗೆ ಬೆಂಬಲ ಸೂಚಿಸುತ್ತಿರುವುದು ಕೊನೇ ಕ್ಷಣದಲ್ಲಿ ಎಲ್ಲಾ ಲೆಕ್ಕಾಚಾರ ಉಲ್ಟಾ ಮಾಡುತ್ತಿದೆ. ಇದನ್ನ ಹೊರತುಪಡಿಸಿ, ನೇರವಾಗಿ ದೇವೇಗೌಡರ ಕುಟುಂಬ ಸ್ವರೂಪ್ ಪರವಾಗಿ ಪ್ರಚಾರದ ಅಖಾಡಕ್ಕೆ ಬಂದಿರುವುದು ಜೆ.ಪ್ರೀತಂಗೌಡ ಗೆಲುವಿಗೆ ಮತ್ತೊಂದು ಅಡ್ಡಿ ಎನ್ನಬಹುದು. ಹಾಗೇ ದೇವೇಗೌಡರ ಕುಟುಂಬದ ವಿರುದ್ಧ ಪ್ರೀತಂಗೌಡ ಮಾತನಾಡಿರೋದು ಕೂಡ ಒಂದಷ್ಟು ಎಫೆಕ್ಟ್ ಕೊಡಬಹುದು. ಇದರ ಹೊರತು 2ನೇ ಬಾರಿ ಗೆದ್ದೇ ಗೆಲ್ಲುವ ನಿರೀಕ್ಷೆ ಪ್ರೀತಂಗೌಡ ಅವರಿಗೆ ಇದೆ.
ಹಾಸನ ಕ್ಷೇತ್ರದಲ್ಲಿ ಮತದಾರರು ಎಷ್ಟು?
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 2,23,000 ಮತದಾರರು ಇದ್ದಾರೆ. ಈ ಪೈಕಿ 1 ಲಕ್ಷಕ್ಕೂ ಹೆಚ್ಚು ಮತ ಒಕ್ಕಲಿಗ ಸಮುದಾಯದ್ದು. ಹೀಗಾಗಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. 1,17,000 ಪುರಷ ಮತದಾರರು ಹಾಗೂ 1,15,000 ಮಹಿಳಾ ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಇಲ್ಲಿ ಗೆಲುವಿಗಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ನಿರ್ಧಾರ ಕೂಡ ಸೋಲು-ಗೆಲುವಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಒಟ್ನಲ್ಲಿ ಮತದಾನಕ್ಕೆ ಕೌಂಟ್ಡೌನ್ ಶುರುವಾಗಿದೆ, ಹಾಸನ ಸಾಮ್ರಾಜ್ಯಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ರಣವ್ಯೂಹ ರಚನೆಯಾಗಿದೆ. ಈ ರಣಕಾಳಗದಲ್ಲಿ ಗೆಲ್ಲೋದು ಯಾರು? ಸೋಲೋದು ಯಾರು? ಎಂಬುದು ಇನ್ನೇನು ಕೆಲವೇ ದಿನಗಳಲ್ಲಿ ಕನ್ಫರ್ಮ್ ಆಗಲಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಅಂದೇ ಹಾಸನದ ಅಭ್ಯರ್ಥಿಗಳ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.












Click it and Unblock the Notifications