ಹೇಮಾವತಿ ಭಾಗದ ರೈತರಿಗೆ ಎಕರೆಗೆ 50 ಸಾವಿರ ರು ನೀಡಿ : ರೇವಣ್ಣ
ಬೆಂಗಳೂರು/ಹಾಸನ, ಸೆ. 16: ತಮಿಳುನಾಡಿಗೆ ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಹೇಮಾವತಿ ನದಿ ಪಾತ್ರದ ಜನರು ಆತಂಕಕ್ಕೀಡಾಗಿದ್ದಾರೆ. ಜೆಡಿಎಸ್ ಹೋರಾಟ ಮುಂದುವರೆದಿದ್ದರೂ ಯಾವುದೇ ಫಲ ಕಂಡಿಲ್ಲ. ಈ ನಡುವೆ ಜೆಡಿಎಸ್ ನಾಯಕ ರೇವಣ್ಣ ಮಾತನಾಡಿ, ಹೇಮಾವತಿ ಭಾಗದ ರೈತರಿಗೆ ಎಕರೆಗೆ 50 ಸಾವಿರ ರು ನೀಡುವಂತೆ ಆಗ್ರಹಿಸಿದ್ದಾರೆ.
ಸಿಎಂ ನಿವಾಸ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಅವರು ಜಿಲ್ಲೆಯ ರೈತರ ಸಂಕಷ್ಟಗಳ ಬಗ್ಗೆ ಮುಖ್ಯಮಂತ್ರಿಗೆ ವಿವರಿಸಿದರು. [ಹೇಮಾವತಿ ನದಿ ನೀರು ಬಿಡುಗಡೆ, ಜೆಡಿಎಸ್ ಪ್ರತಿಭಟನೆ]
ಸರ್ಕಾರದ ನಿರ್ಲಕ್ಷ್ಯ ಧೋರಣೆ, ರೈತರ ಬಗೆಗಿನ ನಿಷ್ಕಾಳಜಿಯಿಂದ ತಮಿಳುನಾಡಿಗೆ ನೀರು ಹರಿಯುತ್ತಿದೆ. ನಮ್ಮಲ್ಲಿ ಬೆಳೆದು ನಿಂತಿರುವ ಬೆಳೆಗೆ ನೀರಿಲ್ಲ, ಕುಡಿಯಲು ನೀರಿಲ್ಲ. ಇಂತಹ ಪರಿಸ್ಥಿತಿ ನಿರ್ಮಾಣಕ್ಕೆ ಸರ್ಕಾರವೇ ನೇರ ಹೊಣೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು
ಹೇಮಾವತಿ ಪ್ರದೇಶ 6.5 ಲಕ್ಷ ಎಕರೆ ಭೂಮಿ ನೀರಾವರಿಯನ್ನು ನಂಬಿಕೊಂಡಿದೆ. ಮಳೆಯಿಲ್ಲದ ಕಾರಣ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಸರ್ಕಾರ ಪ್ರತಿ ಎಕರೆ 50 ಸಾವಿರ ರು ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಹಾಸನ ಜಿಲ್ಲೆಯ 8 ತಾಲೂಕು ಬರಪೀಡಿತ ಪ್ರದೇಶವಾಗಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. 2015ರಿಂದ ಬೆಳೆ ತೆಗೆದಿಲ್ಲ, ಪ್ರತಿ ತಾಲೂಕಿಗೆ 5 ಕೋಟಿ ರು ಅನುದಾನವಾದರೂ ಬೇಕಿದೆ.
ಕಾವೇರಿ ನೀರು ಬಿಡುಗಡೆಗೆ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಹೇಮಾವತಿ ಅಣೆಕಟ್ಟಿನಿಂದ ದಿನನಿತ್ಯ ಎಂಟೂವರೆ ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಯಾಗುತ್ತಿದ್ದು, ಜಿಲ್ಲೆಯ ಅನ್ನದಾತರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ.
ಹೇಮಾವತಿ ಜಲಾಶಯ (ಅಣೆಕಟ್ಟಿನ ಎತ್ತರ 146 ಅಡಿಗಳು) ಒಟ್ಟು ಹೊರ ಹರಿವು ಒಟ್ಟು 12,880 ಕ್ಯೂಸೆಕ್ಸ್. ಜಲಾಶಯದ ಒಳ ಹರಿವು ಕೇವಲ 703 ಕ್ಯೂಸೆಕ್ಸ್. ದಿನೇ ದಿನೇ ಒಂದು ಟಿಎಂಸಿಗಿಂತ ಹೆಚ್ಚು ನೀರು ಇಳಿಮುಖವಾಗುತ್ತಿದೆ. ಇಂದಿನ ಗರಿಷ್ಠ ಮಟ್ಟ 2886 ಅಡಿ ಇದೆ. ಪೂರ್ಣ ನೀರಿನ ಮಟ್ಟ 2935 ಅಡಿಗಳು, ಕುಡಿಯುವ ನೀರಿಗಾಗಿ 2 ಟಿಎಂಸಿ ನೀರು ಬಳಕೆಯಾಗುತ್ತದೆ. (ಒನ್ಇಂಡಿಯಾ ಸುದ್ದಿ)