ತಹಶೀಲ್ದಾರ್ಗಳ ಎಣ್ಣೆ ಪಾರ್ಟಿ: ಅಧಿಕಾರಿಗಳನ್ನು ಸಮರ್ಥಿಸಿಕೊಂಡ ರೇವಣ್ಣ
ಹಾಸನ, ಅಕ್ಟೋಬರ್ 5: ಜಿಲ್ಲೆಯ ತಹಶೀಲ್ದಾರ್ಗಳು ಸೇರಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಮದ್ಯಪಾನ ಕೂಟ ನಡೆಸಿದ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಎಚ್ ಡಿ ರೇವಣ್ಣ ಅವರು ಹೊಳೆನರಸೀಪುರ ತಹಶೀಲ್ದಾರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರಿ ಐಬಿಯಲ್ಲಿ ತಹಶೀಲ್ದಾರ್ಗಳ ಎಣ್ಣೆ ಪಾರ್ಟಿ: ಪ್ರಶ್ನಿಸಿದವರ ವಿರುದ್ಧವೇ ದೂರು
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಳೆನರಸೀಪುರ ತಹಶೀಲ್ದಾರ್ ಶ್ರೀನಿವಾಸ್ ಅವರ ಬೆಂಬಲಕ್ಕೆ ನಿಂತರು. ಶ್ರೀನಿವಾಸ್ ಅವರು ಪ್ರಾಮಾಣಿಕ ವ್ಯಕ್ತಿ. ಅವರು ಮದ್ಯಸೇವನೆ ಮಾಡುವುದಿಲ್ಲ. ಎಲ್ಲ ಅಧಿಕಾರಿಗಳೂ ಒಟ್ಟಿಗೆ ಸೇರಿ ಸಭೆ ನಡೆಸಿದ ಬಳಿಕ ಊಟ ಮಾಡಿದ್ದಾರೆ. ಅಧಿಕಾರಿಗಳು ಒಟ್ಟಿಗೆ ಊಟ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಅಲ್ಲದೆ, ಈ ಪ್ರಕರಣವು ಬಿಜೆಪಿಯವರ ಕೃತ್ಯ ಎಂದು ಆರೋಪಿಸಿದರು. ಸಂಸದರು ಅಧಿಕಾರಿಗಳ ಸಭೆ ಕರೆದಿದ್ದರು. ಬಳಿಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಹೊರಗಿನಿಂದ ಮದ್ಯ ಸೇವಿಸಿ ಐಬಿ ಒಳಗೆ ನುಗ್ಗಿದ ಇಬ್ಬರು ತಹಶೀಲ್ದಾರ್ ಮೇಲೆ ಹಲ್ಲೆಗೆ ಪ್ರಯತ್ನಿಸಿದರು. ದುರುದ್ದೇಶಪೂರ್ವಕವಾಗಿ ಅವರ ಮೇಲೆ ಆರೋಪ ಮಾಡಲಾಗಿದೆ. ಬಿಜೆಪಿ ಮುಖಂಡರೇ ಈ ಕೃತ್ಯ ನಡೆಸಿದ್ದು, ಮದ್ಯದ ಬಾಟಲಿ ಇಟ್ಟು ಅವರೇ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿದರು.
ಜನರು ಒಪ್ಪುವವರೆಗೆ ಮಾತ್ರ ರಾಜಕೀಯದಲ್ಲಿರ್ತೇವೆ: ರೇವಣ್ಣ
ಮರಳು ಅಕ್ರಮ ಸಾಗಾಣಿಕೆಗೆ ಶ್ರೀನಿವಾಸ್ ಅವರು ಅಡ್ಡಿಪಡಿಸಿದ್ದರು. ಅವರು ತಾಲ್ಲೂಕಿನಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೆಟ್ಟ ಹೆಸರು ತಂದು ಬ್ಲ್ಯಾಕ್ ಮೇಲ್ ಮಾಡಲು ಈ ರೀತಿ ಎಣ್ಣೆ ಬಾಟಲಿ ಇಟ್ಟು ವಿಡಿಯೋ ಮಾಡಿದ್ದಾರೆ. ಇದರ ಬಗ್ಗೆ ಸಮರ್ಪಕ ತನಿಖೆ ನಡೆಯಬೇಕಿದೆ ಎಂದು ಹೇಳಿದರು.
ಘಟನೆ ಸಂಬಂಧ ವಿವರಣೆ ಕೇಳಿ ಸರ್ಕಾರವು ಏಳು ತಹಶೀಲ್ದಾರ್ಗಳಿಗೆ ನೋಟಿಸ್ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ನಾಗೇಶ್ ಮತ್ತು ಮೂವರು ಬಿಜೆಪಿ ಮುಖಂಡರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.