ಅರಸೀಕೆರೆಯಲ್ಲಿ ತೆರೆದ ವಾಹನದಲ್ಲಿ ನಿಂತು ದೇವೇಗೌಡರ ಭರ್ಜರಿ ಚುನಾವಣಾ ಪ್ರಚಾರ
ಹಾಸನ, ಮೇ 04: ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್ ಅಭ್ಯರ್ಥಿ ಎನ್.ಆರ್.ಸಂತೋಷ ಪರ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಗಂಡಸಿ ಗ್ರಾಮದಲ್ಲಿ ನಡೆದ ಜೆಡಿಎಸ್ ರೋಡ್ ಶೋನಲ್ಲಿ ತೆರೆದ ವಾಹನದಲ್ಲಿ ನಿಂತು ದೇವೇಗೌಡರು ಮತಯಾಚನೆ ಮಾಡಿದ್ದಾರೆ.
ಈ ವೇಳೆ ಮಾಜಿ ಸಚಿವ ಎಚ್.ಡಿ ರೇವಣ್ಣ, ಭವಾನಿ ರೇವಣ್ಣ ಹಾಗೂ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಕೂಡ ಚುನಾವಣಾ ಪ್ರಚಾರ ನಡೆಸಿದ್ದು, ದೇವೇಗೌಡರನ್ನು ಕಂಡ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಹರ್ಷೋದ್ಗಾರದಿಂದ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.

ಅರಸೀಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಆರ್ ಸಂತೋಷ್ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಮಾತನಾಡಿದ ದೇವೇಗೌಡರು, ಇಂದು ಮತ್ತೆ ನಾಳೆ ಹಾಸನ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಿದ್ಧನಾಗಿ ಬಂದಿದ್ದೇನೆ. ಯಾವುದೇ ಕ್ಷೇತ್ರವನ್ನು ಕಡೆಗಣಿಸುವ ಪ್ರಶ್ನೆ ಇಲ್ಲ. ಕಡೂರು ಸೇರಿ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ಭವಾನಿ ಅವರು ಹಾಸನದಲ್ಲಿ ಸ್ವರೂಪ್ ಅವರನ್ನು ತನ್ನ ಮೂರನೇ ಮಗ ಎಂದು ಘೋಷಣೆ ಮಾಡಿದ್ದಾರೆ ಎಂದರು.
ಮೊನ್ನೆ ಪ್ರಧಾನಿ ಮೋದಿಯವರು ಜಿಲ್ಲೆಯ ಬೇಲೂರಿಗೆ ಬಂದಿದ್ದರು. ನಾನೂ ಕೂಡ ಅಲ್ಲಿಗೇ ಹೋಗುತ್ತಿದ್ದೇನೆ, ನಾಳೆವರೆಗೂ ಕೂಡ ಹಾಸನದಲ್ಲಿ ಪ್ರಚಾರ ನಡೆಸುತ್ತೇನೆ ಎಂದ ಅವರು, ಜೆಡಿಎಸ್ ಬಿ ಟೀಮ್ ಎನ್ನುವ ಪ್ರಧಾನಿ ಮೋದಿ ಹೇಳಿಕೆಯನ್ನು ಖಂಡಿಸಿದರು.

ಸಕಳೆದ ಬಾರಿ ಹಾಸನದಲ್ಲಿ ರಾಹುಲ್ ಗಾಂಧಿ ಏನು ಹೇಳಿದರು ಎಂದು ನೆನಪಿದೆ ಅಲ್ವಾ. ಕಳೆದ ಬಾರಿ ಅವರು ಮಾಡಿದ ಕೆಲಸ ಈ ಬಾರಿ ಮೋದಿ ಮಾಡಿದ್ದಾರೆ. ಇದರಲ್ಲಿ ವ್ಯತ್ಯಾಸ ಏನಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಾತು ಮುಂದುವರಿಸಿದ ದೇವೇಗೌಡರು, ರಾಹುಲ್ ಓರ್ವ ಯುವಕ, ಮೋದಿ ಪ್ರಬುದ್ಧ ವ್ಯಕ್ತಿ, ಮೋದಿಯವರಿಂದ ಇಂತಹ ಮಾತನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ರಾಹುಲ್ ಓರ್ವ ಯಂಗ್ ಸ್ಟಾರ್ ಮಾತಾಡಿದರು, ಆದರೆ ಮೋದಿ ಅವರು ಪ್ರಧಾನಿ. ಹತ್ತು ವರ್ಷ ಪ್ರಧಾನಿಯಾಗಿ ಈ ದೇಶ ಆಳಿದವರು. ಜೆಡಿಎಸ್ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications