ಪ್ರಧಾನಿ ಮೋದಿಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ 'ಆಕ್ಸಿಜನ್' ಪತ್ರ!
ಹಾಸನ, ಮೇ 9: ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಆಕ್ಸಿಜನ್, ಬೆಡ್ ಸಮಸ್ಯೆ, ಲಸಿಕೆ ಅಭಾವದ ಬಗ್ಗೆ ತುರ್ತಾಗಿ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.
"ರಾಜ್ಯದಲ್ಲಿ ಸುಮಾರು ಐವತ್ತು ಸಾವಿರ ಹೊಸ ಕೇಸುಗಳು ದಾಖಲಾಗುತ್ತಿವೆ. ರಾಜ್ಯದ ಇತರ ಜಿಲ್ಲೆಗಳು ಹಾಟ್ ಸ್ಪಾಟ್ ಆಗುತ್ತಿವೆ. ಈಗಿರುವ ನಮ್ಮ ವೈದ್ಯಕೀಯ ಸೌಕರ್ಯದ ಮೂಲಕ ಕೋವಿಡ್ ಅನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ"ಎಂದು ಪ್ರಜ್ವಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ರಾಜ್ಯದ ಚಾಮರಾಜನಗರ, ಕಲಬುರಗಿ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಮೃತ ಪಟ್ಟಿದ್ದಾರೆ. ರಾಜ್ಯದಲ್ಲಿ ಬೆಡ್, ಆಕ್ಸಿಜನ್, ಲಸಿಕೆಯ ಅಭಾವ ತೀವ್ರವಾಗಿ ಕಾಡುತ್ತಿದೆ. ಸೆಪ್ಟಂಬರ್ ನಲ್ಲಿ ಮೂರನೇ ಅಲೆ ದಾಳಿ ಮಾಡುವ ಮುನ್ನ, ನಾವು ಸಿದ್ದತೆಯನ್ನು ಮಾಡಿಕೊಂಡು ಇರಬೇಕು"ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.

"ನಾನು ಪ್ರತಿನಿಧಿಸುವ ಹಾಸನ ಕ್ಷೇತ್ರದಲ್ಲಿ 22 ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಭರ್ತಿ ಮಾಡಿಕೊಳ್ಳುತ್ತಿದ್ದೇವೆ. 672 ಆಕ್ಸಿಜನ್ ಸಿಲಿಂಡರ್ ಅವಶ್ಯಕತೆ ನಮಗಿದೆ. ಆದರೆ, 460 ಸಿಲಿಂಡರ್ ರಿಫಿಲ್ ಮಾಡುವ ಸಾಮರ್ಥ್ಯ ಮಾತ್ರ ನಮ್ಮಲ್ಲಿದೆ. ಇದು ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದು"ಎಂದು ಪ್ರಜ್ವಲ್ ಪತ್ರದ ಮೂಲಕ ಹೇಳಿದ್ದಾರೆ.
ದಿನವೊಂದಕ್ಕೆ ಎರಡರಿಂದ ಮೂರು ಸಾವಿರ ಹೊಸ ಕೇಸುಗಳು ದಾಖಲಾಗುತ್ತಿವೆ, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕ್ಷೇತ್ರದ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಬೆಡ್ ಸಂಖ್ಯೆಯನ್ನು ಹೆಚ್ಚಿಸಲು ಎಂಟರಿಂದ ಹತ್ತು ಕೋಟಿ ಅನುದಾನ ನೀಡುವಂತೆ ರಾಜ್ಯ ಸರಕಾರಕ್ಕೆ ಮಾಡಿದ ಮನವಿಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದು ಪ್ರಜ್ವಲ್ ರೇವಣ್ಣ ಪತ್ರದಲ್ಲಿ ನಮೂದಿಸಿದ್ದಾರೆ.
ಹಾಸನ ಕ್ಷೇತ್ರದವರಾದ ಎಚ್.ಡಿ.ದೇವೇಗೌಡ ಅವರು ಏಪ್ರಿಲ್ 25ನೇ ತಾರೀಕಿನಂದು ವಿಸ್ಕೃತ ಮಾಹಿತಿಯನ್ನು ಪತ್ರದ ಮೂಲಕ ತಮಗೆ ತಿಳಿಸಿದ್ದಾರೆ. ಲಸಿಕೆ ಅಭಿಯಾನವನ್ನು ರಾಷ್ಟ್ರೀಯ ಕಾರ್ಯಕ್ರಮ ಎಂದು ಘೋಷಿಸಿ. ಕೋವಿಡ್ ಫ್ರಂಟ್ ಲೈನ್ ವರ್ಕರ್ಸ್ ಮತ್ತು ಆಶಾ ಕಾರ್ಯಕರ್ತರಿಗೆ ವಿಮಾ ಯೋಜನೆ ಘೋಷಿಸಿ ಎನ್ನುವ ಸಲಹೆಯನ್ನು ಪ್ರಜ್ವಲ್ ಪತ್ರದ ಮೂಲಕ ತಿಳಿಸಿದ್ದಾರೆ.
ಆಕ್ಸಿಜನ್ ಉತ್ಪಾದನೆ, ಐಸಿಯು ಬೆಡ್, ಆಮ್ಲಜನಕವನ್ನು ಶೇಖರಿಸುವ ಸಿಸ್ಟಂ, ಆಪರೇಶನ್ ಥಿಯೇಟರ್ ಹೆಚ್ಚಿಸುವ ಪ್ರಕ್ರಿಯೆ ವೇಗವನ್ನು ಪಡೆದುಕೊಳ್ಳಬೇಕು. ನಮ್ಮ ಕ್ಷೇತ್ರದ ಅವಶ್ಯಕತೆಯ ಬಗ್ಗೆ ಗಮನ ಹರಿಸಿ ಎಂದು ಪ್ರಜ್ವಲ್ ರೇವಣ್ಣ ಅವರು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ವಿನಂತಿಸಿ ಕೊಂಡಿದ್ದಾರೆ.












Click it and Unblock the Notifications