ಬೇಲೂರು, ಹಳೇಬೀಡು ದೇವಾಲಯ ಯುನೆಸ್ಕೋ ಪಟ್ಟಿಗೆ ಶಿಫಾರಸು
ಹಾಸನ, ಫೆಬ್ರವರಿ 01; ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಹೊಯ್ಸಳ ದೇವಾಲಯಗಳು ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಲಿವೆ. 2022-23ನೇ ಸಾಲಿಗೆ ಕರ್ನಾಟಕದ ಈ ಮೂರು ದೇವಾಲಯಗಳನ್ನು ಶಿಫಾಸರು ಪಟ್ಟಿಯಲ್ಲಿವೆ.
ಹೊಯ್ಸಳರ ಕಾಲದ ಮೂರು ದೇವಾಲಯಗಳನ್ನು ಯುನೆಸ್ಕೋ ವಿಶ್ವ ಸಂಸ್ಥೆಯ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಯುನೆಸ್ಕೋಗೆ ನಾಮ ನಿರ್ದೇಶನ ಮಾಡಿದೆ.
ಬೇಲೂರಿನ ಚನ್ನಕೇಶವ ದೇವಾಲಯ, ಹೇಳಬೀಡಿನಲ್ಲಿರುವ ಹೊಯ್ಸಳೇಶ್ವರ ಹಾಗೂ ಸೋಮನಾಥಪುರದ ಕೇಶವ ದೇವಾಲಯಗಳನ್ನು ಕರ್ನಾಟಕದಿಂದ 2022-23ನೇ ಸಾಲಿಗೆ ನಾಮ ನಿರ್ದೇಶನ ಮಾಡಲಾಗಿದೆ.

ಈ ದೇವಾಲಯಗಳು ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ಪ್ರತೀಕವಾಗಿದ್ದು ಹೊಯ್ಸಳರ ಕಾಲದಲ್ಲಿ ಇವುಗಳನ್ನು ನಿರ್ಮಾಣ ಮಾಡಲಾಗಿದೆ. 2015ರಿಂದ ಮೂರು ದೇವಾಲಯಗಳು ತಾತ್ಕಾಲಿಕ ಪಟ್ಟಿಯಲ್ಲಿದ್ದವು. ಮೂರು ದೇವಾಲಯಗಳನ್ನು ಖಾಯಂ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
ಯುನೆಸ್ಕೋದ ಭಾರತದ ಖಾಯಂ ಪ್ರತಿನಿಧಿ ವಿಶಾಲ್ ವಿ. ಶರ್ಮಾ ಔಪಚಾರಿಕವಾಗಿ ತಂಡಕ್ಕೆ ಭಾರತದ ಪಟ್ಟಿಯನ್ನು ನೀಡಿದ್ದಾರೆ. ಮುಂದಿನ ಹಂತವಾಗಿ ಯುನೆಸ್ಕೋದ ಸಮಿತಿ ಪಟ್ಟಿ ಪರಿಶೀಲನೆ ನಡೆಸಲಿದೆ. ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ತಜ್ಞರ ಸಮಿತಿ ಪಟ್ಟಿಯನ್ನು ಪರಿಶೀಲನೆ ಮಾಡಿ ಭಾರತದ ಜೊತೆ ಮತ್ತೆ ಮಾತುಕತೆ ನಡೆಸಲಿದೆ. ಸೆಪ್ಟೆಂಬರ್ ಅಥವ ಅಕ್ಟೋಬರ್ ತಿಂಗಳಿನಲ್ಲಿ ಮೌಲ್ಯ ಮಾಪನ ನಡೆಯಲಿದೆ. 2023ರ ಜುಲೈ ಅಥವ ಆಗಸ್ಟ್ನಲ್ಲಿ ದೇವಾಲಯಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವ ಕುರಿತು ಅಂತಿಮ ಘೋಷಣೆಯಾಗಲಿದೆ.
12ನೇ ಶತಮಾನದಲ್ಲಿ ನಿರ್ಮಾಣವಾದ ಈ ಎಲ್ಲಾ ದೇವಾಲಯಗಳು ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಸಂರಕ್ಷಿತ ಸ್ಮಾರಕಗಳಾಗಿವೆ. ಭಾರತೀಯ ಪುರಾತತ್ವ ಇಲಾಖೆಯೇ ದೇವಾಲಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ.
ಹೊಯ್ಸಳರ ರಾಜಧಾನಿಯಾಗಿತ್ತು; ಬೇಲೂರು ಚನ್ನಕೇಶನ ದೇವಾಲಯ ಯಗಚಿ ನದಿಯ ದಂಡೆಯ ಮೇಲಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ, ದೇಶಗಳ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಬೇಲೂರು ಹಿಂದೆ ಹೊಯ್ಸಳರ ರಾಜಧಾನಿಯಾಗಿತ್ತು ಎನ್ನುತ್ತದೆ ಇತಿಹಾಸ.
ಬೇಲೂರನ್ನು ಹಿಂದೆ ವೇಲಾಪುರ, ವೇಲೂರು ಮತ್ತು ಬೇಲಾಪುರ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು. ಈ ದೇವಾಲಯ ಹೊಯ್ಸಳರ ಕಾಲದ ಶಿಲ್ಪಕಲೆಗೆ ಸಾಕ್ಷಿಯಾಗಿ ನಿಂತಿದೆ. ಕ್ರಿ. ಶ. 1116ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ಚೋಳರ ವಿರುದ್ಧ ಸಾಧಿಸಿದ ವಿಜಯದ ಸಂಕೇತವಾಗಿ ಈ ದೇಗುಲವನ್ನು ನಿರ್ಮಿಸಿ, ವಿಜಯ ನಾರಾಯಣ ಎಂದು ಕರೆದನು ಎಂಬ ಉಲ್ಲೇಖವಿದೆ.
ಹಳೇಬೀಡು ದೇವಾಲಯ; ಹಳೇಬೀಡಿನಲ್ಲಿ ಹೊಯ್ಸಳೇಶ್ವರ ದೇವಾಲಯ ವಿಷ್ಣುವರ್ಧನ ಮತ್ತು ಎರಡನೇ ಬಲ್ಲಾಳರಿಂದ ನಿರ್ಮಿಸಲ್ಪಟ್ಟಿದೆ. ಹೊಯ್ಸಳೇಶ್ವರ ಮತ್ತು ಕೇದಾರೇಶ್ವರ ಜೋಡಿ ದೇವಾಲಯಗಳು ಇದಾಗಿದ್ದು, ವಾಸ್ತು ಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ರಾಮಾಯಣ, ಮಹಾಭಾರತ, ಭಾಗವತಗಳಲ್ಲಿನ ದೃಷ್ಟಾಂತಗಳನ್ನು ಈ ದೇಗುಲಗಳ ಹೊರಗೋಡೆಗಳ ಮೇಲೆ ಚಿತ್ರಿಸಲಾಗಿದೆ.
ಸೋಮನಾಥಪುರ ದೇವಾಲಯ; ಮೈಸೂರು ಜಿಲ್ಲೆಯಲ್ಲಿರುವ ಸೋಮನಾಥಪುರದ ಕೇಶವ ದೇವಾಲಯ ಅತ್ಯಂತ ಸುಂದರ ವಾತಾವರಣದಲ್ಲಿದೆ. ಹೊಯ್ಸಳರ ರಾಜನಾದ 3ನೇ ನರಸಿಂಹನ ಆಸ್ಥಾನದಲ್ಲಿ ಸೇನಾ ದಂಡನಾಯಕನಾಗಿದ್ದ ಸೋಮನಾಥ 1254-2191ರ ನಡುವೆ ಈ ದೇವಾಲಯ ನಿರ್ಮಾಣ ಮಾಡಿದೆ ಎಂಬ ಇತಿಹಾಸವಿದೆ.
ನಕ್ಷತ್ರಾಕಾರದ ಜಗುಲಿಯ ಮೇಲೆ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಆಲಯ ತ್ರಿಕೂಟಾಚಲವಾಗಿದ್ದು ಪೂರ್ವ ದ್ವಾರದಿಂದ ಪ್ರವೇಶ ನೀಡಲಾಗಿದೆ. ವೇಣುಗೋಪಾಲ, ಕೇಶವ, ಜನಾರ್ದನನ ವಿಗ್ರಹಗಳು ದೇವಾಲಯದಲ್ಲಿವೆ. ಗರ್ಭಗುಡಿ ಮೂರು ಗೋಪುರ, ಒಂದು ನವರಂಗ ಒಳಗೊಂಡಿದೆ.
ದೇವಾಲಯ ಕಾವೇರಿ ನದಿಯ ದಡದಲ್ಲಿದ್ದು ಸುತ್ತಮುತ್ತಿನ ಹಸಿರು ಪರಿಸರದಿಂದಾಗಿ ಪ್ರಸಿದ್ಧಿ ಪಡೆದಿದೆ. ದೇವಾಲಯದಲ್ಲಿ ತಿರುಗಣಿಗಳ ಮೇಲೆ ಕೆತ್ತಿರುವ ಕಂಬಗಳು ಹೊಯ್ಸಳರ ಕಾಲದ ಶಿಲ್ಪಕಲೆಗೆ ಉದಾಹರಣೆಯಾಗಿ ನಿಂತಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ದೇವಾಲಯವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಮಾಡಿದೆ.












Click it and Unblock the Notifications