ಹಾಸನಾಂಬ ಜಾತ್ರೆ : ಹೆಲಿ ಟೂರಿಸಂ ಪ್ರಮುಖ ಆಕರ್ಷಣೆ
ಹಾಸನ, ಅಕ್ಟೋಬರ್ 30 : ಹಾಸನಾಂಬ ದೇವಿ ದರ್ಶನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾಸನಾಂಬ ಜಾತ್ರೆಯ ಅಂಗವಾಗಿ ಪೂರ್ವ ಭಾವಿ ಸಿದ್ದತಾ ಪರಿಶೀಲನಾ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಹಿಣಿ ಸಿಂಧೂರಿ ಅವರು, 'ಭಕ್ತಾಧಿಗಳಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡುವಂತೆ' ತಿಳಿಸಿದರು.
'ಭಕ್ತಾಧಿಗಳಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿರಬೇಕು. ವಿಶೇಷ ದರ್ಶನ ಹಾಗೂ ವಿಕಲಚೇತನರು ಮತ್ತು ವಯೋವೃದ್ಧರಿಗೆ ಪ್ರತ್ಯೇಕ ಸಾಲುಗಳನ್ನು ಮಾಡುವಂತೆ' ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಾಲಯದ ಬಾಗಿಲು ನವೆಂಬರ್ 1 ರಿಂದ 9ರ ತನಕ ತೆರೆದಿರುತ್ತದೆ. ನವೆಂಬರ್ 1 ಮತ್ತು 9ರಂದು ಭಕ್ತಾದಿಗಳಿಗೆ ದೇವಿಯ ದರ್ಶನ ಪಡೆಯಲು ಅವಕಾಶವಿಲ್ಲ. ಉಳಿದ 7 ದಿನ ದರ್ಶನ ಪಡೆಯಬಹುದಾಗಿದೆ.

ದರ್ಶನಕ್ಕೆ ಕಡಿಮೆ ಅವಕಾಶ
ನವೆಂಬರ್ 1 ರಿಂದ 9ರ ತನಕ ಹಾನಾಂಬೆ ದೇವಾಲಯ ಬಾಗಿಲು ತೆರೆದಿರುತ್ತದೆ. ದೇವಿಯ ದರ್ಶನಕ್ಕೆ ಈ ಬಾರಿ ಕಡಿಮೆ ಅವಧಿಯ ಸಮಯಾವಕಾಶ ಇರುವುದರಿಂದ ಪ್ರತಿದಿನ ಹೆಚ್ಚಿನ ಸಮಯ ದರ್ಶನಕ್ಕೆ ಅವಕಾಶ ಗುವಂತಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಸೌಟ್ಸ್ ಮತ್ತು ಗೈಡ್ಸ್ ಹಾಗೂ ಆರೋಗ್ಯ ಇಲಾಖೆಯ ಸೇವೆಯನ್ನು ಸಮರ್ಪಕವಾಗಿ ಒಳಸಿಕೊಳುವಂತೆ ಸೂಚಿಸಿದರು.

ಪ್ರವಾಸಿ ಸ್ಥಳಗಳ ದರ್ಶನ
ಹಾಸನಾಂಬೆ ಜಾತ್ರೆಯ ಅಂಗವಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶೇಷ ವ್ಯವಸ್ಥಿತ ಪ್ರವಾಸವನ್ನು ಆಯೋಜಿಸಲಾಗಿದೆ. ನವೆಂಬರ್ 1 ರಿಂದ 8 ರವರೆಗೆ ಆಗಮಿಸುವ ಪ್ರವಾಸಿಗರು ಪ್ರವಾಸಿ ಸ್ಥಳಗಳ ವೀಕ್ಷಣೆ ಮಾಡಬಹುದಾಗಿದೆ.
ಪ್ರವಾಸಿಗರು ಬೆಳಗ್ಗೆ 8.30ಕ್ಕೆ ಕೊಂಡಜ್ಜಿಯಿಂದ ಹೊರಟು ಕೋರಮಂಗಲ ಬೆಳಗ್ಗೆ 10, ರುದ್ರಪಟ್ಟಣ ಮಧ್ಯಾಹ್ನ 12, ರಾಮನಾಥಪುರ 1 ಗಂಟೆ, ದೊಡ್ಡಗದ್ದವಳ್ಳಿ 3 ಗಂಟೆ, ಹಳೇಬೀಡು ಸಂಜೆ 5.30, ಬೇಲೂರು ಸಂಜೆ 7.30 ನೋಡಿಕೊಂಡು ರಾತ್ರಿ 9ಕ್ಕೆ ಹಾಸನಕ್ಕೆ ವಾಪಸ್ ಆಗಬಹುದು. ಟಿಕೆಟ್ ದರ ರೂ. 300, 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಟಿಕೆಟ್ ಕಡ್ಡಾಯ. ಊಟ, ತಿಂಡಿ ವ್ಯವಸ್ಥೆ ಇರುವುದಿಲ್ಲ.

ಹೆಲಿ ಟೂರಿಸಂ ಆಕರ್ಷಣೆ
ಹಾಸನಾಂಬೆ ಜಾತ್ರೆಯ ಅಂಗವಾಗಿ ಹೆಲಿ ಟೂರಿಸಂ ಆಯೋಜನೆ ಮಾಡಲಾಗಿದೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಎಲ್ಲಾ ಇಲಾಖಾ ಅಧಿಕಾರಿಗಳು ಹಾಸನಾಂಬ ಜಾತ್ರೆಯ ಯಶಸ್ವಿಗೆ ಶ್ರಮಿಸಬೇಕು. ಹಾಸನ ನಗರದ ಜನರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಹಾಸನಾಂಬೆ ದೇವಿಯ ಜಾತ್ರೆಯ ಅಂಗವಾಗಿ ಪತ್ರಿ ದಿನ ಸಂಜೆ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಮನ ಹರಿಸಬೇಕು. ಅದೇ ರೀತಿ ಪ್ರವಾಸಿಗರಿಗೆ ನಿಗದಿತ ದಿನದಲ್ಲಿ ಹಾಸನ ಜಿಲ್ಲಾದರ್ಶನಕ್ಕೆ ವಾಹನ ವ್ಯವಸ್ಥೆಗೆ ಪ್ರವಾಸೋದ್ಯಮ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.












Click it and Unblock the Notifications