ಹಾಸನ: ಹಸಿರುಭೂಮಿ ಪ್ರತಿಷ್ಠಾನದಿಂದ ಕೆರೆ ಕಲ್ಯಾಣಿ ಪುನಶ್ಚೇತನ
ಹಾಸನ, ಮಾರ್ಚ್ 27: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿ ಮಳೆಗಾಲ ಬೇಗನೆ ಪ್ರಾರಂಭವಾಗುತ್ತದೆ ಮತ್ತು ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆಯಾಗುವ ನಿರೀಕ್ಷೆಯಿರುವುದರಿಂದಾಗಿ ಬೀಳುವ ಪ್ರತಿ ಮಳೆ ಹನಿ ನೀರನ್ನೂ ಮಳೆ ಬಿದ್ದ ಗ್ರಾಮದಲ್ಲೇ ಹಿಡಿದಿಡಲು ಕಲ್ಯಾಣಿಗಳ ಪುನಶ್ಚೇತನಕ್ಕೆ ಹಸಿರು ಭೂಮಿ ಪ್ರತಿಷ್ಠಾನ ಮುಂದಾಗಿದೆ.
ಹಾಸನಾದ್ಯಂತ ಇರುವ ಕೆರೆ ಕಲ್ಯಾಣಿಗಳ ಪುನಶ್ಚೇತನಕ್ಕೆ ಮುಂದಾಗಿರುವ ಪ್ರತಿಷ್ಠಾನದ ಸದಸ್ಯರು ಪ್ರತಿ ಭಾನುವಾರ ಹಾಸನದಿಂದ ಬಸ್ ವ್ಯವಸ್ಥೆ ಮಾಡಿಕೊಂಡು ಹಾಸನ ತಾಲೂಕಿನಲ್ಲಿರುವ ಒಂದು ಅಥವಾ ಎರಡು ಹಳ್ಳಿಗೆ ತೆರಳಿ ಕಲ್ಯಾಣಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಿರುವುದು ವಿಶೇಷವಾಗಿದೆ.
ಕಳೆದ ಮೇ 1 ರಿಂದ ರಚನಾತ್ಮಕ ಕೆಲಸಗಳ ಮೂಲಕ ಪರಿಸರದ ಮರುಸೃಷ್ಟಿಯಲ್ಲಿ, ಜಲಸಂರಕ್ಷಣೆಯ ಮಾದರಿ ನಿರ್ಮಾಣದಲ್ಲಿ ತೊಡಗಿರುವ ಹಾಸನದ ಹಸಿರುಭೂಮಿ ಪ್ರತಿಷ್ಠಾನವು ಇದುವರೆಗೆ ತನ್ನ ಹಸಿರುಭೂಮಿ ಬಳಗದ ತಂಡದಿಂದ ಹಾಗೂ ಸ್ವಯಂಪ್ರೇರಣೆ ನೀಡಿ ಇತರರಿಂದ 27 ಕಲ್ಯಾಣಿಗಳನ್ನು, 5 ಕೆರೆಗಳನ್ನು ಪುನಶ್ಚೇತನಗೊಳಿಸಿದೆ.

ಭಾನುವಾರ ಹಾಸನ ತಾಲೂಕು ದುದ್ದ ಹೋಬಳಿಯ ಹೊನ್ನಾವರ ಗ್ರಾಮಕ್ಕೆ ತೆರಳಿದ ಕಾರ್ಯಕರ್ತರು ಬೃಹತ್ ಪುರಾತನ ಕಲ್ಯಾಣಿಯನ್ನು ಸತತ ಮೂರು ಗಂಟೆಗಳ ಶ್ರಮದಿಂದ ಪುನಶ್ಚೇತನಗೊಳಿಸಿತು. ಎಸ್ಡಿಎಂ ಆಯುರ್ವೇದ ಕಾಲೇಜಿನ ವ್ಯವಸ್ಥಾಪನಾ ಮಂಡಳಿಯು ಗ್ರಾಮಕ್ಕೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಿಕೊಟ್ಟಿದೆ.
ಪ್ರತಿಷ್ಠಾನವು ಇದಕ್ಕಾಗಿ ಕಾಲೇಜಿಗೆ ಅಭಾರಿಯಾಗಿದೆ. ಇದರ ಜೊತೆಗೆ ಎಸ್ಡಿಎಂ ಆಯುರ್ವೇದ ಕಾಲೇಜಿನ ಎನ್ಎಸ್ಎಸ್ ಕಾರ್ಯಕರ್ತರು, ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ಎನ್ಎಸ್ಎಸ್ ಕಾರ್ಯಕರ್ತರು, ಮೆಡಿಕಲ್ ರೆಪ್ರೆಸಿಂಟಿಟೀವ್ಗಳು, ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ವಿವೇಕಾನಂದ ಸ್ಪರ್ಧಾತ್ಮಕ ಪರಿಕ್ಷಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು, ಹಸಿರುಭೂಮಿ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಡಾ.ಹೆಚ್.ಎಲ್.ನಾಗರಾಜ್, ಟ್ರಸ್ಟಿಗಳಾದ ರೂಪಹಾಸನ, ಪುಟ್ಟಯ್ಯ, ಬಿ.ಎಸ್.ದೇಸಾಯಿ, ರಾಜೀವೇಗೌಡ, ಡಾ.ಮಂಜುನಾಥ್, ತಿಮ್ಮೇಶ್ಪ್ರಭು ಮತ್ತು ಹಸಿರುಭೂಮಿ ಬಳಗದ ಸದಸ್ಯರು ಕಲ್ಯಾಣಿಗಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿದೆ.












Click it and Unblock the Notifications