ನಮ್ಮ ರಾಜಕೀಯ ಪಕ್ಷಗಳು ಹಸಿರು ಪ್ರತಿಷ್ಠಾನದ ಮೊರೆ ಆಲಿಸಬಹುದಾ?
ಹಾಸನ, ಮಾರ್ಚ್ 14: ಹಾಸನ ಜಿಲ್ಲೆಯಾದ್ಯಂತ ಅವಸಾನದ ಅಂಚಿನಲ್ಲಿದ್ದ ಕಲ್ಯಾಣಿ, ಕೆರೆಗಳಿಗೆ ಕಾಯಕಲ್ಪ ನೀಡುವ ಮೂಲಕ ಅಂತರ್ಜಲ ವೃದ್ಧಿ ಮತ್ತು ಪರಿಸರ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಹಸಿರುಭೂಮಿ ಪ್ರತಿಷ್ಠಾನ ಇದೀಗ ದೇಶದ ಹಿತದೃಷ್ಠಿಯಿಂದ ಎಲ್ಲ ರಾಜಕೀಯ ಪಕ್ಷಗಳು ಪರಿಸರ ಸಂರಕ್ಷಣೆಯ ವಿಷಯವನ್ನು ತಮ್ಮ ಪ್ರನಾಳಿಕೆಯಲ್ಲಿ ಪ್ರಧಾನ ವಿಷಯವಾಗಿ ಸೇರಿಸಬೇಕು ಎಂಬ ವಿಭಿನ್ನವಾದ ಮನವಿವೊಂದನ್ನು ರಾಜಕೀಯ ಪಕ್ಷಗಳ ಮುಂದಿಟ್ಟಿದೆ.
ಸದಾ ಭರವಸೆಯ ಮಹಾಪೂರವನ್ನು ಹರಿಸುವ, ಮತದಾರರನ್ನು ಸೆಳೆಯುವ ತಂತ್ರಗಳನ್ನೊಳಗೊಂಡ ಅನುಷ್ಠಾನಕ್ಕೆ ತರಲಾಗದಂತಹ ಯೋಜನೆಗಳನ್ನು ಚುನಾವಣಾ ಪ್ರನಾಳಿಕೆಯಲ್ಲಿ ಪ್ರಕಟಿಸುವ ರಾಜಕೀಯ ಪಕ್ಷಗಳು ಪರಿಸರ ಸಂರಕ್ಷಣೆಯ ವಿಚಾರವನ್ನು ತಮ್ಮ ಪ್ರನಾಳಿಕೆಯಲ್ಲಿ ಪ್ರಕಟಿಸಲು ಮುಂದಾಗುತ್ತವೆಯಾ? ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕಾರಣ ಚುನಾವಣಾ ಪ್ರನಾಳಿಕೆ ಎನ್ನುವುದೇ ಮತದಾರರನ್ನು ಸೆಳೆಯುವ ಕರಪತ್ರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇಷ್ಟಕ್ಕೂ ತಾವು ನೀಡಿದ ಪ್ರನಾಳಿಕೆಯಲ್ಲಿನ ಯೋಜನೆಗಳನ್ನು ಅದೆಷ್ಟು ಪಕ್ಷಗಳು ಅಧಿಕಾರ ಪಡೆದ ಬಳಿಕ ಈಡೇರಿಸಿವೆ ಎಂಬುದು ಗೊತ್ತಿರುವ ವಿಚಾರವೇ.
ಹೀಗಾಗಿ ದೇಶ ಮತ್ತು ಪರಿಸರಕ್ಕೆ ಅನುಕೂಲವಾಗುವಂತಹ ವಿಚಾರಗಳನ್ನೊಳಗೊಂಡ ಪರಿಸರ ಸಂರಕ್ಷಣೆ ಸಂಬಂಧಿಸಿದ ವಿಷಯವನ್ನು ತಮ್ಮ ಚುನಾವಣಾ ಪ್ರನಾಳಿಕೆಯಲ್ಲಿ ಸೇರ್ಪಡೆಗೊಳಿಸುವುದು ಕಷ್ಟ ಸಾಧ್ಯವೇ. ಆದರೂ ಇದಕ್ಕಾಗಿ ಹಸಿರುಭೂಮಿ ಪ್ರತಿಷ್ಠಾನ ತನ್ನದೇ ಆದ ಹಲವು ರೀತಿಯ ಪ್ರಯತ್ನಕ್ಕೆ ಕೈ ಹಾಕಿದೆ.

ಶಾಲಾ ಮಕ್ಕಳೊಂದಿಗೆ ಪ್ರತಿಭಟನೆ
ಮಾರ್ಚ್ 25 ರೊಳಗಾಗಿ ರಾಜ್ಯದ ಪರಿಸರ ಪ್ರೇಮಿಗಳು ಸೇರಿದಂತೆ ಸಾಮಾಜಿಕ ಕಾರ್ಯಕರ್ತರು ಬೆಂಗಳೂರಿನಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ.ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸ್ವೀಡನ್ನಿನ ಗ್ರೆಟಾ ಎಂಬ ಪುಟ್ಟ ಬಾಲಕಿ ಅಲ್ಲಿನ ಸಂಸತ್ ಭವನದ ಎದುರು ನಡೆಸಿದ ಪ್ರತಿಭಟನೆಯ ಮಾದರಿಯಲ್ಲಿ ಮಾ. 15 ರಂದು ಶುಕ್ರವಾರ ಹಾಸನದ ತಾಲ್ಲೂಕು ಕಚೇರಿ ಸಮೀಪ ಹಾಸನದ ಶಾಲಾ ಮಕ್ಕಳೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.

ಮನವಿ ಸಲ್ಲಿಸಲು ತೀರ್ಮಾನ
ಇದಲ್ಲದೆ, ಹಾಸನ ಸಮೀಪದ ಬುರಡಾಳು ಬೋರೆಯಲ್ಲಿ ಜೀವವೈವಿಧ್ಯದ ಕಾಡು ಬೆಳೆಸಲು ನೂರು ಎಕರೆ ಪ್ರದೇಶವನ್ನು ದತ್ತು ಪಡೆಯಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲು ಕೂಡ ತೀರ್ಮಾನಿಸಲಾಗಿದೆ.

ಪರಿಹಾರೋಪಾಯದ ಬಗ್ಗೆ ಜನಜಾಗೃತಿ
ರಾಜಕೀಯ ಪಕ್ಷಗಳು ಕೇವಲ ಮತಕ್ಕಾಗಿ ಜನರನ್ನು ಓಲೈಕೆ ಮಾಡುವುದು ಮಾತ್ರವಲ್ಲದೆ, ಪರಿಸರ ನಾಶದಿಂದಾಗುತ್ತಿರುವ ದುಸ್ಥಿತಿಯನ್ನು ಅರಿತು ಅದಕ್ಕೆ ತಕ್ಕಂತೆ ಪರಿಹಾರೋಪಾಯದ ಬಗ್ಗೆಯೂ ಜನಜಾಗೃತಿಗೆ ಅಡಿಗಲ್ಲು ಹಾಕಬೇಕಿದೆ.

ಹಸಿರು ಪ್ರತಿಷ್ಠಾನ ಮುಂದು
ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ನಾಯಕರ ಗಮನಸೆಳೆಯುವ ಪ್ರಯತ್ನವನ್ನು ಹಸಿರು ಪ್ರತಿಷ್ಠಾನ ಮಾಡಲು ಮುಂದಾಗಿದೆ. ಆದರೆ ಇದಕ್ಕೆ ನಮ್ಮ ರಾಜಕೀಯ ಪಕ್ಷಗಳು ಯಾವ ರೀತಿಯಲ್ಲಿ ಸ್ಪಂದಿಸುತ್ತವೆ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.












Click it and Unblock the Notifications