ಮುಚ್ಚಿದ ಹಾಸನಾಂಬೆ ದೇವಾಲಯ; 10 ದಿನದ ಜಾತ್ರೆಗೆ ವಿದ್ಯುಕ್ತ ತೆರೆ
ಹಾಸನ, ನವೆಂಬರ್ 07; ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ತೆರೆಬಿದ್ದಿದೆ. ಶನಿವಾರ ಮಧ್ಯಾಹ್ನ 1 ಗಂಟೆ 4 ನಿಮಿಷಕ್ಕೆ ಗರ್ಭಗುಡಿಯ ಬಾಗಿಲನ್ನು ಹಾಕಲಾಯಿತು. ತಾಯಿಯ ದರ್ಶನಕ್ಕೆ ಮುಂದಿನ ಒಂದು ವರ್ಷದವರೆಗೂ ಕಾಯಬೇಕಿದೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿವಿಧಾನಗಳ ನಡೆಸಿ ದೇವಾಲಯದ ಬಾಗಿಲನ್ನು ಬಂದ್ ಮಾಡಲಾಯಿತು. 4 ಲಕ್ಷಕ್ಕೂ ಅಧಿಕ ಮಂದಿ ಈ ಬಾರಿ ದೇವಿಯ ದರ್ಶನ ಪಡೆದಿದ್ದು, ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಜಿಲ್ಲಾಡಳಿತ ಧನ್ಯವಾದ ತಿಳಿಸಿದೆ.
ಕೊನೆಯ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದರೂ ನೂರಾರು ಮಂದಿ ಬಂದು ಕ್ಯೂನಲ್ಲಿ ನಿಂತಿದ್ದರು. ಜಿಲ್ಲಾಡಳಿತ ಬಂದಿದ್ದವರಿಗೆ ನಿರಾಶೆ ಮಾಡದೇ ಎಲ್ಲಾರಿಗೂ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಬಳಿಕವೇ ದೇವಾಲಯದ ಬಾಗಿಲನ್ನು ಮುಚ್ಚಲಾಯಿತು.

ಡಿಜಿ ಪ್ರವೀಣ್ ಸೂದ್ ಕೂಡಾ ದಂಪತಿ ಸಮೇತ ಆಗಮಿಸಿ ಕೊನೆ ದಿನ ತಾಯಿಯ ದರ್ಶನ ಪಡೆದುಕೊಂಡರು. ಬೆಳಗ್ಗೆಯಿಂದಲೇ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನದ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಜಿಲ್ಲಾಧಿಕಾರಿ ಆರ್. ಗಿರೀಶ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪೂಜೆಯಲ್ಲಿ ಭಾಗಿಯಾದರು.
ತಡರಾತ್ರಿ ದೇವಾಲಯದ ಆವರಣದಲ್ಲಿ ಸಿದ್ದೇಶ್ವರ ಸ್ವಾಮಿಯ ಉತ್ಸವ ನಡೆಸಲಾಯಿತು. ಕಳೆದ ಐದು ದಿನದ ಹಿಂದೆಯಷ್ಟೇ ಮದುವೆಯಾಗಿದ್ದ ಎಸ್ಪಿ ಶ್ರೀನಿವಾಸಗೌಡ ದಂಪತಿ ಸಮೇತ ಅಡ್ಡೆ ಉತ್ಸವದಲ್ಲಿ ಭಾಗಿಯಾಗಿದರು. ಗರ್ಭಗುಡಿಯ ಬಾಗಿಲನ್ನು ಬಂದ್ ಮಾಡಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಆರ್. ಗಿರೀಶ್, "ಹತ್ತು ದಿನದ ಉತ್ಸವದಲ್ಲಿ 4 ಲಕ್ಷಕ್ಕೂ ಅಧಿಕ ಮಂದಿ ತಾಯಿಯ ದರ್ಶನ ಪಡೆದಿದ್ದು, ಇದಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ" ಎಂದರು.
ಇನ್ನು ಇದೇ ವೇಳೆ ಉಸ್ತುವಾರಿ ಸಚಿವ ಗೋಪಾಲಯ್ಯ ಮಾತಾನಾಡಿ, "ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ, 4 ಲಕ್ಷಕ್ಕಿಂತ ಹೆಚ್ಚು ಭಕ್ತರು ದೇವಿ ದರ್ಶನ ಪಡೆದಿದ್ದಾರೆ, ಭಕ್ತರು ಯಾರೂ ನಿರಾಸೆಯಿಂದ ವಾಪಸ್ಸು ಹೋಗಿಲ್ಲ, ಕಳೆದ ಬಾರಿ ಕೊರೊನದಿಂದ ಸಾರ್ವಜನಿಕರಿಗೆ ದರ್ಶನ ಸಿಕ್ಕಿರಲಿಲ್ಲ, ಈ ಬಾರಿ ಎಲ್ಲರಿಗೂ ಅವಕಾಶ ಕಲ್ಪಿಸಲಾಯಿತು" ಎಂದು ಹೇಳಿದರು.
"ಎಲ್ಲಾ ವರ್ಗದ ನೌಕರರು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದರು. ಅದರಂತೆ ಎಲ್ಲರಿಗೂ ಅವಕಾಶ ನೀಡಲಾಗಿತ್ತು, ಯಶಸ್ವಿಯಾಗಿ ಜಾತ್ರಾ ಮಹೋತ್ಸವ ನಡೆಸಲು ಸಹಕರಿಸಿದ ಜಿಲ್ಲಾಡಳಿತದ ಹಾಗೂ ಎಲ್ಲಾ ಅಧಿಕಾರಿಗಳಿಗೂ ಧನ್ಯವಾದಗಳು. ರಾಜ್ಯದ, ಜಿಲ್ಲೆಯ ಜನತೆಗೆ ಒಳ್ಳೆಯದಾಗಲಿ, ರಾಜ್ಯದ ಜನತೆಗೆ ಸಿಎಂ ಒಳ್ಳೆಯ ಆಡಳಿತ ಕೊಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ" ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
ಕರ್ನಾಟಕದ ಭಕ್ತರು ಮಾತ್ರವಲ್ಲ ಹೊರ ರಾಜ್ಯಗಳಿಂದ ಬಂದಂತಹ ಭಕ್ತಾದಿಗಳಿಗೆ ಸಹ ಹಾಸನಾಂಬೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮುಂದಿನ ಬಾರಿ ಇನ್ನು ಹೆಚ್ಚು ವ್ಯವಸ್ಥಿತವಾಗಿ ದರ್ಶನಕ್ಕೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತ ಭರವಸೆ ನೀಡಿದೆ.

ಇನ್ನೆರಡು ದಿನದಲ್ಲಿ ಹುಂಡಿ ಹಣವನ್ನು ಎಣಿಸಿ, ಹಾಸನಾಂಬೆ ಉತ್ಸವದ ಲೆಕ್ಕವನ್ನು ಸಾರ್ವಜನಿಕರಿಗೆ ಜಿಲ್ಲಾಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ನೀಡಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ. ಕೊರೊನಾ ಆತಂಕದ ನಡುವೆಯೂ ಹಾಸನಾಂಬೆಯ 10 ದಿನದ ಉತ್ಸವ ಯಶಸ್ವಿಯಾಗಿ ಮುಗಿದಿದ್ದು, ತಾಯಿದ ದರ್ಶನಕ್ಕೆ ಮುಂದಿನ ಒಂದು ವರ್ಷದವರೆಗೂ ಕಾಯಲೇಬೇಕು.












Click it and Unblock the Notifications