10 ದಿನಗಳ ನಂತರ ಬಾಗಿಲು ಮುಚ್ಚಿದ ಹಾಸನಾಂಬ ದೇವಾಲಯ
ಹಾಸನ, ನವೆಂಬರ್ 6: ಹಾಸನ ನಗರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಸನಾಂಬೆ ದೇವಿಯ ದರ್ಶನಕ್ಕೆ ಇಂದು (ನವೆಂಬರ್ 6) 1 ಗಂಟೆ 4 ನಿಮಿಷಕ್ಕೆ ತೆರೆಬಿದ್ದಿದೆ. ಮಧ್ಯಾಹ್ನ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಹಾಸನಾಂಬೆ ದೇಗುಲದ ಒಳಗೆ ಪೂಜಾ ಕೈಂಕರ್ಯ ನಡೆಸಲಾಗಿದೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಹಾಸನದ ಜಿಲ್ಲಾಧಿಕಾರಿ, ಎಸ್ಪಿ, ಆಡಳಿತಾಧಿಕಾರಿ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಹಾಸನಾಂಬೆ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಮುಂದಿನ 1 ವರ್ಷದವರೆಗೆ ಹಾಸನಾಂಬೆ ದೇಗುಲದ ಬಾಗಿಲು ಮುಚ್ಚಿರಲಿದೆ. ಕಳೆದ 10 ದಿನಗಳಿಂದ ಲಕ್ಷಾಂತರ ಭಕ್ತರಿಂದ ಹಾಸನಾಂಬೆ ದರ್ಶನ ಪಡೆಯಲಾಗಿದ್ದು, 10ನೇ ದಿನವಾದ ಶನಿವಾರ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಹಿತ ಹಲವು ಪ್ರಮುಖರು ಶನಿವಾರದಂದು ಹಾಸನಾಂಬೆ ದರ್ಶನ ಪಡೆದಿದ್ದಾರೆ. ದೇವರ ದರ್ಶನ ಪಡೆದ ಬಳಿಕ ಪ್ರವೀಣ್ ಸೂದ್ ಮಾತನಾಡಿದ್ದು, 'ಕಾನೂನುಬಾಹಿರ ಚಟುವಟಿಕೆ ಕಂಡುಬಂದರೆ ಮಾಹಿತಿ ನೀಡಿ. ಪೊಲೀಸರು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಜನರು ಕಾನೂನು ಕೈಗೆತ್ತಿಕೊಳ್ಳಬಾರದು, ಅದು ತಪ್ಪಾಗುತ್ತದೆ' ಎಂದು ತಿಳಿಸಿದ್ದಾರೆ.
ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಬೇಕು ಅನ್ನುವುದು ಬಹಳ ದಿನದಿಂದ ಮನಸ್ಸಿನಲ್ಲಿ ಇತ್ತು. ಇಂದು ಪತ್ನಿ ಜೊತೆಗೆ ಬಂದು ಮುಖ್ಯವಾದ ದಿನ ದರ್ಶನ ಮಾಡಿದ್ದು ಖುಷಿಯಾಗಿದೆ. ಹಾಸನಾಂಬೆ ಎಲ್ಲರಿಗೂ ಶುಭ ತರಲಿ ಎಂದು ಹಾರೈಸುತ್ತೇನೆ. ಕಳೆದ ಹತ್ತು ದಿನಗಳಿಂದ ಹಾಸನಾಂಬೆ ಉತ್ಸವ ಚೆನ್ನಾಗಿ ಆಗಿದೆ. ಲಕ್ಷಾಂತರ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಎಲ್ಲರಿಗೂ ಒಳಿತಾಗಲಿ ಎಂದು ಹಾಸನಾಂಬೆ ದರ್ಶನದ ಬಳಿಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿಕೆ ನೀಡಿದ್ದಾರೆ.
ಮಧ್ಯಾಹ್ನ 1 ಗಂಟೆ 4 ನಿಮಿಷಕ್ಕೆ ಹಾಸನಾಂಬೆ ದೇಗುಲ ಮುಚ್ಚಲಾಗಿದೆ. ಹಾಸನಾಂಬೆ ದರ್ಶನ ಪಡೆಯಲು ಇಂದು ಅವಕಾಶ ಇರುವುದಿಲ್ಲ. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಕೆ ಮಾಡಿದ ಬಳಿಕ ಸಿಬ್ಬಂದಿ ದೇಗುಲದ ಬಾಗಿಲು ಮುಚ್ಚಿದ್ದಾರೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಜಿಲ್ಲಾಧಿಕಾರಿ, ಶಾಸಕ ಪ್ರೀತಂಗೌಡ, ಜಿಲ್ಲಾಧಿಕಾರಿ ಆರ್. ಗಿರೀಶ್, ಎಸ್ಪಿ ಆರ್. ಶ್ರೀನಿವಾಸಗೌಡ ಮತ್ತು ಗಣ್ಯರ ಸಮ್ಮುಖದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು ದೇಗುಲದ ಬಾಗಿಲು ಮುಚ್ಚಿದರು. ಪ್ರಸಕ್ತ ವರ್ಷ ಅಕ್ಟೋಬರ್ 28 ರಂದು ದೇವಾಲಯ ತೆರೆಯಲಾಗಿತ್ತು. ಈವರೆಗೆ ಲಕ್ಷಾಂತರ ಭಕ್ತರಿಂದ ದೇವಿ ದರ್ಶನ ಮಾಡಿದ್ದಾರೆ.
Recommended Video