ಕುಟುಂಬದ 46 ಜನ ಸದಸ್ಯರ ಹೆಸರಿನಲ್ಲಿ ಮಾಜಿ ಪ್ರಧಾನಿ H.D.ದೇವೇಗೌಡ ದಂಪತಿ ಪೂಜೆ, ಎಲ್ಲಿ?, ಇಲ್ಲಿದೆ ಮಾಹಿತಿ
ಹಾಸನ, ಸೆಪ್ಟೆಂಬರ್, 03: ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಕರ್ನಾಟಕ ಹೈಕೋರ್ಟ್ ಇತ್ತೀಚೆಗಷ್ಟೇ ಆದೇಶ ಹೊರಡಿಸಿತ್ತು. ಮತ್ತೊಂದೆಡೆ ಎಚ್.ಡಿ.ಕುಮಾರಸ್ವಾಮಿ ಅವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು, ಇಂದು ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಇದೀಗ ಇಂದು ಹಾಸನ ತಾಲೂಕಿನ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಶ್ರೇಯಸ್ಸಿಗಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ದಂಪತಿ ಪೂಜೆ ಸಲ್ಲಿಸಿ ಗಮನ ಸೆಳೆದಿದ್ದಾರೆ.
ಹಾಸನ ತಾಲೂಕಿನ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ತಮ್ಮ ಕುಟುಂಬದ ಬರೊಬ್ಬರಿ 46 ಜನ ಸದಸ್ಯರ ಹೆಸರಿನಲ್ಲಿ ಎಚ್.ಡಿ.ದೇವೇಗೌಡ ದಂಪತಿ ಅರ್ಚನೆ ಮಾಡಿಸಿ ಗಮನ ಸೆಳೆದಿದ್ದಾರೆ. ದೇವಸ್ಥಾನದಲ್ಲಿ ಅರ್ಚನೆಗಾಗಿ ಅರ್ಚಕರ ಕೈಗೆ 42 ಜನರ ಪಟ್ಟಿ ಹೆಸರನ್ನು ಕೊಟ್ಟಿದ್ದು, ಇನ್ನೂ ಕೆಲವರ ಹೆಸರನ್ನು ತಾವೇ ಖುದ್ದು ಹೇಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವೇಗೌಡ ಚೆನ್ನಮ್ಮ ದಂಪತಿ ತಮ್ನ ಕುಟುಂಬದ ಶ್ರೇಯಸ್ಸಿಗಾಗಿ ನಿನ್ನೆಯಿಂದಲೂ ಹಾಸನದಲ್ಲಿರುವ ವಿವಿಧ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಒಂದು ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ಅರ್ಚನೆ ಮಾಡಿಸಿದ್ದಾರೆ ಎನ್ನಲಾಗಿದೆ.
ಕಾವೇರಿ ವಿವಾದದ ಬಗ್ಗೆ HDD ಹೇಳಿದ್ದೇನು?
ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲಾಗಿದ್ದು, ಈ ನಿಲುವಿನ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ. ಹಾಗೆಯೇ ಹಾಸನ ತಾಲೂಕಿನ ಬೈಲಹಳ್ಳಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ನೀರಿನ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಸಿದ್ದರಾಮಯ್ಯ ಅವರ ಸಭೆಯಲ್ಲಿ ಮಾತನಾಡಿದ್ದು, ಸಭೆಯಲ್ಲಿ ನಡೆದ ಮಾತಿನ ಸಾರಾಂಶವನ್ನು ಹೇಳಿದ್ದಾರೆ. ಒಂದು ಕಡೆ ಸುಪ್ರೀಂ ಕೋರ್ಟ್ನಲ್ಲಿ ತೀರ್ಮಾನವನ್ನು ಕೊಡಲಿಲ್ಲ. ಮತ್ತೊಂದೆಡೆ ಪ್ರಾಧಿಕಾರ ಇನ್ನೂ ಏನೂ ತೀರ್ಮಾನ ಮಾಡಿಲ್ಲ. ಹಾಗೆಯೇ ಮಂಡ್ಯದಲ್ಲಿ ಕಾವೇರಿ ಹೋರಾಟ ನೆಡೆಯುತ್ತಿದೆ. ಈಗ ನಾನು ಏನೂ ಮಾತನಾಡುವುದಿಲ್ಲ, ಸಮಯ ಬಂದಾಗ ಮಾತನಾಡುತ್ತೇನೆ. ಪ್ರಧಾನ ಮಂತ್ರಿವರೆಗೂ ನಾನೇ ಹೋಗಬೇಕು ಎಂಬ ಸನ್ನೀವೇಶ ಬಂದಾಗ ಮಾತನಾಡುತ್ತೇನೆ ಎಂದರು.
ಇನ್ನು ಅವಧಿ ಪೂರ್ವ ಲೋಕಸಭಾ ಚುನಾವಣೆ ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರು ಮಾತನಾಡಿ, ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬಾಂಬೆಯಲ್ಲಿ 28 ಸದಸ್ಯರ ಗುಂಪಿನ ಒಂದು ದೊಡ್ಡ ಮಹಾಸಭೆ ನಡೆಯಿತು. ಆಗ ಸೆಪ್ಟೆಂಬರ್ 30ರೊಳಗೆ ಎಲ್ಲಾ ಸೀಟ್ ನಿಗಧಿ ಮಾಡುತ್ತೇವೆ ಅಂತಾ ಹೇಳಿದ್ದು ಏನಾಗುತ್ತದೆಯೋ ನೋಡೋಣ ಎಂದು INDIA ಕಮಿಟಿಯ ವಿರುದ್ಧ ವಾಗ್ದಾಳಿ ನಡೆಸಿದರು.
ಈಗಾಗಲೇ ಒಂದು ಕಮಿಟಿ ಮಾಡಿದ್ದಾರೆ, ಅದರ ಲೀಡರ್ ಯಾರು? ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಹೆಸರು ಹೇಳಿದ್ದಾರಾ? ಅಥವಾ ಆ ಒಕ್ಕೂಟದ ಸಂಚಾಲಕರು ಯಾರು ಅಂತ ಹೇಳಿದ್ದಾರಾ?, ಆ ಕಮಿಟಿಯವರು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಬೇಕು. ಎರಡು ದಿನ ಮೀಟಿಂಗ್ ನಡಿಯಿತು. ಇನ್ನೂ ಚುನಾವಣೆ ಏಳು-ಎಂಟು ತಿಂಗಳು ಇದೆ. ನೋಡೋಣ ಬನ್ನಿ ನಾನು ಬದುಕಿದ್ದೀನಿ ಎಂದು ಹೇಳುವ ಮೂಲಕ ಅಸಮಾಧಾನ ಹೊರ ಹಾಕಿದರು.












Click it and Unblock the Notifications