ರಾಜಕೀಯ ನಿವೃತ್ತಿಯ ಮಾತನ್ನಾಡಿದ ಎಚ್ ಡಿ ಕುಮಾರಸ್ವಾಮಿ
Recommended Video
ಹಾಸನ, ಆಗಸ್ಟ್ 3: ಮೈತ್ರಿ ಸರ್ಕಾರ ಪತನದಿಂದ ಬೇಸರಗೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪುನಃ ರಾಜಕೀಯ ನಿವೃತ್ತಿಯ ಮಾತನ್ನಾಡಿದ್ದಾರೆ.
ಹಾಸನದಲ್ಲಿ ಶನಿವಾರ ಮಾತನಾಡಿದ ಅವರು, 'ಜಾತಿ ಪ್ರಭಾವದಿಂದ ರಾಜಕೀಯ ನಡೆಯುತ್ತಿದೆ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಒಳ್ಳೆಯವರಿಗೆ ಕಾಲವಿಲ್ಲ. ನನಗೆ ರಾಜಕೀಯದಲ್ಲಿ ಮುಂದುವರಿಯಬೇಕೆಂಬ ಹುಚ್ಚಿಲ್ಲ. ರಾಜಕೀಯದಿಂದ ನಾನೇ ಹಿಂದಕ್ಕೆ ಸರಿಯಬೇಕು ಎಂದುಕೊಂಡಿದ್ದೇನೆ' ಎಂದು ಹೇಳಿದರು.
'ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾದವನು. ದೇವರು ಕೊಟ್ಟ ಆಶೀರ್ವಾದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಸಿಎಂ ಸ್ಥಾನದಲ್ಲಿ ಕುಳಿತು ಮಾಡಿದ ಕೆಲಸಗಳ ಬಗ್ಗೆ ತೃಪ್ತಿ ಇದೆ. ರಾಜಕೀಯದಲ್ಲಿ ನಾನೇನು ಗೂಟ ಹೊಡೆದುಕೊಂಡು ಕೂರುವುದಿಲ್ಲ. ಈ ಹಿಂದೆಯೇ ರಾಜಕೀಯದಿಂದ ನಿವೃತ್ತಿಯಾಗಿವ ಚಿಂತನೆ ಮಾಡಿದ್ದೆ' ಎಂದರು.
ನನಗೆ ಮುಖ್ಯಮಂತ್ರಿ ಹುದ್ದೆ ಮೇಲೆ ವ್ಯಾಮೋಹವಿಲ್ಲ. ನನಗೆ ಬೇಕಿರುವುದು ನಾಡಿನ ಜನರ ಹೃದಯದಲ್ಲಿ ಸ್ಥಾನ ಮಾತ್ರ ಎಂದು ಹೇಳಿದರು.
ಈ ಹಿಂದೆಯೂ ಅವರು ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದರು. 20-20 ಸರ್ಕಾರ ಪತನಗೊಂಡಾಗಲೂ ರಾಜಕೀಯ ನಿವೃತ್ತಿಗೆ ಚಿಂತನೆ ನಡೆಸಿದ್ದೆ ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು.

ನಮ್ಮದು ಪಾಪದ ಸರ್ಕಾರ ಅವರದು ಪುಣ್ಯದ್ದು
ಸಮ್ಮಿಶ್ರ ಸರ್ಕಾರವಿದ್ದಾಗ ಬಿಜೆಪಿಯವರು ನಮ್ಮದು ಪಾಪದ ಸರ್ಕಾರ ಎನ್ನುತ್ತಿದ್ದರು. ಈಗ ಪುಣ್ಯದ ಸರ್ಕಾರ ಅಧಿಕಾರ ನಡೆಸುತ್ತಿದೆ. ನಮ್ಮದು ಪಾಪದ ಸರ್ಕಾರ ಅವರದು ಪುಣ್ಯದ ಸರ್ಕಾರ. ಪವಿತ್ರ ಸರ್ಕಾರ ಅಧಿಕಾರ ನಡೆಸುತ್ತಿದೆ, ನಡೆಸಲಿ ನೋಡೋಣ. ಯಾರನ್ನೆಲ್ಲಾ ಪವಿತ್ರ ಮಾಡುತ್ತಾರೋ ನಾವೂ ನೋಡುತ್ತೇವೆ. ಎಲ್ಲವನ್ನೂ ನೋಡಿರುವ ರಾಜ್ಯದ ಜನರೇ ತೀರ್ಮಾನಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ವರ್ಗಾವಣೆ ಸಿಎಂ ವಿವೇಚನಾಧಿಕಾರ
ವರ್ಗಾವಣೆ ಮಾಡುವುದು ಸಿಎಂ ವಿವೇಚನಾಧಿಕಾರ. ಯಡಿಯೂರಪ್ಪ ಅವರು ಇದರ ಬಗ್ಗೆ ಮಾತನಾಡುತ್ತಾರೆಂದು ನಾನು ಮಾತನಾಡುವುದಿಲ್ಲ. ಆದರೆ ಕೆಲವರನ್ನು ಟಾರ್ಗೆಟ್ ಮಾಡಿ ವರ್ಗಾವಣೆ ಮಾಡಲಾಗುತ್ತಿದೆ. ಮತ್ತೆ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರೂ ಸ್ಥಳ ನಿಯೋಜಿಸಿಲ್ಲ. ಬಿಎಸ್ವೈ ಒಬ್ಬರೇ ಸಾಕು, ಇನ್ನೂ ಆರು ತಿಂಗಳು ಸರ್ಕಾರ ನಡೆಸಲಿ ಎಂದು ಸಂಪುಟ ವಿಸ್ತರಣೆ ಕುರಿತು ವ್ಯಂಗ್ಯವಾಡಿದರು.

ವಾಮಮಾರ್ಗದಿಂದ ಅಧಿಕಾರ
ನಮ್ಮ ಸರ್ಕಾರ ಅಪವಿತ್ರ ಮೈತ್ರಿ ಎನ್ನುತ್ತಿದ್ದರು. ಈಗ ಬಹುಮತ ಇಲ್ಲದೆಯೇ ವಾಮಮಾರ್ಗದಿಂದ ಬಿಜೆಪಿ ಅಧಿಕಾರ ಹಿಡಿದಿದೆ. ಸರ್ಕಾರವನ್ನು ಉರುಳಿಸುವಲ್ಲಿ ಮಾಧ್ಯಮದ ಪಾತ್ರವೂ ಇದೆ. ರಾಜ್ಯದಲ್ಲಿ ಕುತಂತ್ರ ರಾಜಕಾರಣ ನಡೆಯುತ್ತಿದೆ. ಮಾಧ್ಯಮಗಳು ಈಗಲೂ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿವೆ ಎಂದು ಹೇಳಿದರು.

ಸುಳ್ಳು ಸುದ್ದಿ ಏಕೆ ಹಬ್ಬಿಸುತ್ತೀರಿ?
ಹುಣಸೂರಿನಿಂದ ಪ್ರಜ್ವಲ್ ರೇವಣ್ಣ, ಕೆಆರ್ ಪೇಟೆಯಿಂದ ನಿಖಿಲ್ ಸ್ಪರ್ಧೆ ಮಾಡುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದನ್ನು ಕಳೆದ ನಾಲ್ಕು ದಿನಗಳಿಂದ ನೋಡುತ್ತಿದ್ದೇನೆ. ಯಾಕೆ ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಕು? ಕಳೆದ ಲೋಕಸಭೆ ಚುನಾವಣೆಯಲ್ಲಿಯೇ ನಿಖಿಲ್ ಸ್ಪರ್ಧೆ ನನಗೆ ಇಷ್ಟವಿರಲಿಲ್ಲ. ಆಗಲೂ ಅಪಪ್ರಚಾರ ಮಾಡುವ ಸುದ್ದಿಗಳನ್ನು ಹಬ್ಬಿಸಲಾಗಿತ್ತು. ಈಗ ಕೂಡ ಅದೇ ರೀತಿ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಕಿಡಿಕಾರಿದರು.












Click it and Unblock the Notifications