'ಎತ್ತಿನಹೊಳೆ ಬಗ್ಗೆ ಹಾಸನ ಜಿಲ್ಲಾ ಅರಣ್ಯಾಧಿಕಾರಿಗಳಿಂದ ಸುಳ್ಳು ಮಾಹಿತಿ'
ಹಾಸನ, ಜನವರಿ. 06 : ನೇತ್ರಾವತಿಯ ಉಪನದಿಗಳಲ್ಲಿ ಒಂದಾದ ಎತ್ತಿನಹೊಳೆ ಯೋಜನೆಗೆ ಸ್ಥಳೀಯರಿಂದ ವ್ಯಾಪಕ ವಿರೋಧವಿದೆ ಎಂದು ಕೇಂದ್ರ ಅರಣ್ಯ ಇಲಾಖೆ ಅಧಿಕಾರಿ ಮತ್ತು ತಜ್ಞರ ತಂಡಕ್ಕೆ ಹಾಸನ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಪಶ್ಚಿಮ ಘಟ್ಟ ಸಂರಕ್ಷಣಾ ಹೋರಾಟ ವೇದಿಕೆಯ ರಾಜ್ಯ ಸಂಚಾಲಕ ಕೆ. ಎನ್ ಸೋಮಶೇಖರ್ ಆರೋಪಿಸಿದ್ದಾರೆ.
ಎತ್ತಿನಹೊಳೆ ಯೋಜನೆ ವೇಳೆ ಸಾವಿರಾರು ಗಿಡ ಮರಗಳನ್ನು ಹಾನಿ ಮಾಡುತ್ತಿರುವ ಹಿನ್ನಲೆಯಲ್ಲಿ ನ್ಯಾಯಾಲಯ 2016ರ ಡಿಸೆಂಬರ್ನಲ್ಲಿ ಸ್ಥಳ ವೀಕ್ಷಣೆ ಮಾಡುವಂತೆ ಸೂಚನೆ ನೀಡಿತ್ತು.
ಅದೇ ರೀತಿ ಜನವರಿ 2 ಮತ್ತು 3ರಂದು ಕೇಂದ್ರದ ತಂಡಗಳು ಜಿಲ್ಲೆಯ ಎತ್ತಿನಹೊಳೆ ಯೋಜನೆಯ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ವೇಳೆ ಅವರಿಗೆ ಸುಳ್ಳು ಮಾಹಿತಿ ನೀಡಲಾಗಿದ್ದು, ಸೂಕ್ತ ವರದಿ ಕೊಟ್ಟಿಲ್ಲ ಎಂದು ಸೋಮಶೇಖರ್ ದೂರಿದ್ದಾರೆ.
ರಾಜ್ಯ ಸರ್ಕಾರ ಈ ಯೋಜನೆಯಲ್ಲಿ ಆರು ಸಾವಿರ ಮರಗಳು ಹಾನಿಯಾಗಲಿದೆ ಎಂದು ವರದಿಯಲ್ಲಿ ಸಲ್ಲಿಸಿದ್ದು. ಈಗಾಗಲೇ ಒಂಬತ್ತು ಸಾವಿರ ಮರಗಳನ್ನು ಹಾನಿ ಮಾಡಲಾಗಿದೆ ಎಂದರು.
ಇದಲ್ಲದೆ ಕೇಂದ್ರ ತಂಡ ಯೋಜನಾ ಪ್ರದೇಶದ ಒಟ್ಟು 20 ಸ್ಥಳಗಳಿಗೆ ಭೇಟಿ ನೀಡುವ ಹಾಗೂ ಮಾರ್ಗಸೂಚಿ ಪ್ರಕಾರ ಸಮೀಕ್ಷೆ ಆಗಿಲ್ಲ. ಜಿಲ್ಲಾ ಅರಣ್ಯಾಧಿಕಾರಿಗಳು ಕೇಂದ್ರಕ್ಕೆ ಮರ ಕಡಿದಿರುವ ಬಗ್ಗೆ ಯಾವುದೇ ದಾಖಲೆಗಳನ್ನು ನೀಡಿಲ್ಲ.
ಪ್ರತಿಯೊಂದು ಪ್ರದೇಶದಲ್ಲೂ ಗುಡ್ಡಗಳನ್ನು ಕಡಿದು ಮರಗಳನ್ನು ಬುಡ ಸಮೇತ ಮಣ್ಣಿನಲ್ಲಿ ಮುಚ್ಚಿ ಹಾಕಲಾಗಿದೆ ಎಂದು ಆರೋಪಿಸಿದರು.