ಹಾಸನದ ಪರಿಸರ ಪ್ರೇಮಿಗಳಿಗೆ ಜಯ; ನೀಲಗಿರಿ ತೋಪು ತೆರವು
ಹಾಸನ, ಮೇ 29 : ಹಾಸನ ಜಿಲ್ಲೆಯ ಪರಿಸರ ಪ್ರೇಮಿಗಳ ಬಹು ದಿನದ ಬೇಡಿಕೆಗೆ ಫಲ ಸಿಕ್ಕಿದೆ. ಬುರುಡಾಳು ಬೋರೆಯಲ್ಲಿ ಬೆಳೆಯಲಾಗಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ, ಜೈವಿಕ ಅರಣ್ಯ ಬೆಳೆಸಲು ಅಗತ್ಯವಾದ ಗಿಡಗಳನ್ನು ನೆಡಲು ಒಪ್ಪಿಗೆ ಸಿಕ್ಕಿದೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸುವ ಬಗ್ಗೆ ಚರ್ಚೆ ನಡೆಯಿತು. ಅರಣ್ಯ ಇಲಾಖೆ ಅಧಿಕಾರಿಗಳು, ಪರಿಸರ ಪ್ರೇಮಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೊದಲ ಹಂತದಲ್ಲಿ ಬುರಡಾಳು ಬೋರೆಯಲ್ಲಿ 125 ಎಕರೆ ಪ್ರದೇಶದಲ್ಲಿ ಬೆಳೆದಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಲು ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ. ಜೈವಿಕ ಅರಣ್ಯವನ್ನು ಬೆಳೆಸಲು ಅಗತ್ಯ ಅನುದಾನವನ್ನು ಸರ್ಕಾರದಿಂದ ಕೊಡಿಸುವುದಾಗಿ ಹಾಸನ ಶಾಸಕ ಪ್ರೀತಂ ಗೌಡ ಭರವಸೆ ಕೊಟ್ಟಿದ್ದಾರೆ.
ಪರಿಸರಕ್ಕೆ ಮಾರಕವಾಗಿರುವ ನೀಲಗಿರಿ, ಅಕೆಶಿಯಾ ಮರಗಳನ್ನು ತೆರವುಗೊಳಿಸಿ ಜೈವಿಕ ಅರಣ್ಯ ಬೆಳೆಸಲು ಅಗತ್ಯವಾದ ಗಿಡಗಳನ್ನು ಬೆಳೆಸಬೇಕು ಎಂಬ ಕೂಗು ವಿವಿಧ ಜಿಲ್ಲೆಗಳಲ್ಲಿ ಕೇಳಿ ಬರುತ್ತಿದೆ. ಹಾಸನದಲ್ಲಿಯೂ ಕಳೆದ ಒಂದು ವರ್ಷದಿಂದ ಈ ಕುರಿತು ಚರ್ಚೆಗಳು ನಡೆದಿದ್ದವು.

ಅರಣ್ಯ ಇಲಾಖೆಗೆ ಸತತ ಮನವಿ
ಹಾಸನ ಜಿಲ್ಲೆಯ ಪರಿಸರ ಪ್ರೇಮಿಗಳು ಹಾಸನ ನಗರದ ಸಮೀಪದಲ್ಲಿ ಸುಮಾರು 1 ಸಾವಿರ ಎಕರೆ ವಿಸ್ತೀರ್ಣದಲ್ಲಿರುವ ಬುರುಡಾಳು ಬೋರೆಯಲ್ಲಿ ಬೆಳೆಯಲಾಗಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ ಎಂದು ಅರಣ್ಯ ಇಲಾಖೆಗೆ ಹಲವು ದಿನಗಳಿಂದ ಮನವಿಯನ್ನು ಮಾಡುತ್ತಿದ್ದರು.

ಸ್ಥಳೀಯ ಜಾತಿ ಮರ ಬೆಳೆಯಲಿದೆ
ಅರಣ್ಯ ಇಲಾಖೆ ಬುರಡಾಳು ಬೋರೆಯಲ್ಲಿ ಹಂತ ಹಂತವಾಗಿ ನೀಲಗಿರಿ ಮರಗಳನ್ನು ತೆರವುಗೊಳಿಸಿ ಸ್ಥಳೀಯ ಜಾತಿಯ ವಿವಿಧ ಮರಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟಿದೆ. ಈ ವರ್ಷ 50 ಹೆಕ್ಟೇರ್ ಪ್ರದೇಶದಲ್ಲಿರುವ ಮರಗಳನ್ನು ಕಡಿದು, 2021-22ನೇ ಸಾಲಿನಲ್ಲಿ ಗಿಡಗಳನ್ನು ನಡೆಲು ಸರ್ಕಾರದಿಂದ ಒಪ್ಪಿಗೆ ಪಡೆಯಲಾಗುತ್ತದೆ.

10 ವರ್ಷ ಕಡಿಯುವಂತಿಲ್ಲ
"ನೀಲಗಿರಿ ತೋಪಿನ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ನಿಯಮಾವಳಿಗಳ ಅನ್ವಯ ನೀಲಗಿರಿ ಗಿಡ ನೆಟ್ಟು 10 ವರ್ಷಗಳಾಗುವ ಮೊದಲು ಅವುಗಳನ್ನು ಕಡಿಯುವಂತಿಲ್ಲ. ಬುರಡಾಳು ಬೋರೆಯಲ್ಲಿ ನೆಟ್ಟಿರುವ ಮರಗಳಿಗೆ ಪ್ರಸ್ತುತ ವರ್ಷ 10 ವರ್ಷ ಆಗಿದ್ದು, ಕಡಿಯಬಹುದು" ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ಹೇಳಿದ್ದಾರೆ.

ಎಲ್ಲರ ಸಹಕಾರ ಅಗತ್ಯ
ನೀಲಗಿರಿ ಬದಲು ನೈಸರ್ಗಿಕ ಗಿಡಗಳನ್ನು ಬೆಳೆಸಿ ಜೀವ ವೈವಿಧ್ಯತೆಯ ತಾಣ ಮಾಡುವ ಕಾರ್ಯದಲ್ಲಿ, ಗಿಡ ನೆಡಲು, ಅವುಗಳನ್ನು ಪೋಷಿಸಲು ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಹಾಗು ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಹಕಾರವನ್ನು ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.












Click it and Unblock the Notifications