ಅಳಿಯನ ಮನೆ ಮುಂದೆ ನೇಣು ಹಾಕಿಕೊಂಡ ಮಾವ!
ಹಾಸನ, ಡಿಸೆಂಬರ್ 09; ಮಗಳ ತಿಂಗಳ ತಿಥಿ ಮಾಡಲು ಬಂದಿದ್ದ ಅಪ್ಪ ಅಳಿಯನ ಮನೆ ಬಾಗಿಲಿಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೊಡ್ಡಗದ್ದವಳ್ಳಿ ಗ್ರಾಮದ ನಾಗರಾಜ್ (55) ಆತ್ಮಹತ್ಯೆ ಮಾಡಿಕೊಂಡವರು. ಅಕ್ಟೋಬರ್ 30ರಂದು ಸಾವನ್ನಪ್ಪಿದ್ದ ಮಗಳು ಹೇಮಶ್ರೀಯ ತಿಂಗಳ ತಿಥಿ ಕಾರ್ಯ ಮಾಡಲು ನಾಗರಾಜ್ ಆಗಮಿಸಿದ್ದರು.
ಆದರೆ ಮನೆಗೆ ಬೀಗ ಹಾಕಿಕೊಂಡು ಅಳಿಯ ಪ್ರವೀಣ್ ಹಾಗೂ ಕುಟುಂಬಸ್ಥರು ಹೊರಹೋಗಿದ್ದರು. ಬೆಳಿಗ್ಗೆಯಿಂದ ಕಾದಿದ್ದ ನಾಗರಾಜ್ ಬಳಿಕ ಮೊಬೈಲ್ನಲ್ಲಿ ವಿಡಿಯೋ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನ್ನ ಮಗಳ ಸಾವಿಗೆ ಪ್ರವೀಣ್, ಅತ್ತೆ ಭದ್ರಮ್ಮ, ಸೋಮಣ್ಣ ಕಾರಣ ಎಂದು ವಿಡಿಯೋದಲ್ಲಿ ದೂರಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ ಕೊಂದಿದ್ದಾರೆ. ನನಗೆ, ನನ್ನ ಮಗಳಿಗೆ ಆದ ಪರಿಸ್ಥಿತಿ ಇನ್ಯಾರಿಗೂ ಆಗಬಾರದು ಸಾಯುವವರೆಗೂ ಅವರನ್ನು ಜೈಲಿಗೆ ಹಾಕಿ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ಒಂದೂವರೆ ವರ್ಷದ ಹಿಂದೆ ಮಾಳೆಗೆರೆ ಗ್ರಾಮದ ಪ್ರವೀಣ್-ಹೇಮಶ್ರೀ ವಿವಾಹ ನಡೆದಿತ್ತು. 1.50 ಲಕ್ಷ ನಗದು, 40 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆಂಧ್ರಪ್ರದೇಶದಲ್ಲಿ ಬೇಕರಿ ಇಟ್ಟುಕೊಂಡಿದ್ದ ಪ್ರವೀಣ್ ಮದುವೆಯಾದಗಿನಿಂದಲೂ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ.
ಅತ್ತೆ ಭದ್ರಮ್ಮ ಗರ್ಭಿಣಿಯಾಗಿದ್ದ ಹೇಮಶ್ರೀಯನ್ನು ತವರು ಮನೆಗೆ ಕಳುಹಿಸಿದ್ದರು. ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿತ್ತು. ಇದಾದ ಎರಡೇ ದಿನಗಳ ಬಳಿಕ ಹೇಮಶ್ರೀ ಸಾವನ್ನಪ್ಪಿದ್ದಳು. ಗಂಡನ ಊರು ಮಾಳೆಗೆರೆಯಲ್ಲಿ ಹೇಮಶ್ರೀ ಅಂತ್ಯಕ್ರಿಯೆ ನಡೆಸಲಾಗುತ್ತು.
11ನೇ ದಿನದ ತಿಥಿ ಕಾರ್ಯದ ಬಳಿಕ ಗ್ರಾಮದ ಹಿರಿಯರು ಪಂಚಾಯಿತಿ ನಡೆಸಿದ್ದರು. ವರದಕ್ಷಿಣೆಯಾಗಿ ನೀಡಿದ್ದ ಹಣ, ಒಡವೆಯನ್ನು ತಿಂಗಳ ತಿಥಿಯಂದ ವಾಪಾಸ್ ನೀಡುವಂತೆ ತೀರ್ಮಾನ ಮಾಡಿದ್ದರು. ಇದಕ್ಕೆ ಪ್ರವೀಣ್ ಹಾಗೂ ತಾಯಿ ಭದ್ರಮ್ಮ ಒಪ್ಪಿದ್ದರು.
ತಿಂಗಳ ತಿಥಿ ಕಾರ್ಯ ಮಾಡಲು ನಾಗರಾಜ್ ಬುಧವಾರ ಆಗಮಿಸಿದ್ದಾರೆ. ಎಲ್ಲಾ ಸಾಮಗ್ರಿಗಳನ್ನು ತಂದಿದ್ದರು. ಆದರೆ ಮನೆಗೆ ಬೀಗ ಹಾಕಿಕೊಂಡು ತೆರಳಿದ್ದ ಪ್ರವೀಣ್ ಮಧ್ಯಾಹ್ನದವರೆಗೂ ವಾಪಸ್ ಆಗಿರಲಿಲ್ಲ. ಅಳಿಯನ ಮನೆ ಮುಂದೆಯೇ ಕಾಯುತ್ತಿದ್ದ ನಾಗರಾಜ್ ಬಾಗಿಲು ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ; ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications