ಹಾಸನದಲ್ಲಿ ಕಾಡಾನೆ ಉಪಟಳ; ಲಕ್ಷಾಂತರ ರೂ. ಬೆಳೆ ನಾಶ
ಹಾಸನ, ಮಾರ್ಚ್ 12; ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿಮೀರಿ ಹೋಗಿದೆ. ಶುಕ್ರವಾರ ಇಬ್ಬರು ಕೂಲಿ ಕಾರ್ಮಿಕರನ್ನು ಬಲಿ ಪಡೆದಿದ್ದ ಕಾಡಾನೆಗಳು ಶನಿವಾರ ಸಹ ತಮ್ಮ ಉಪಟಳವನ್ನು ಮುಂದುವರೆಸಿವೆ.
ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಮಾಡಿರುವ ಕಾಡಾನೆ ಹಾವಳಿಯಿಂದ ರೈತರು ಬೇಸತ್ತು ಹೋಗಿದ್ದಾರೆ. ಶೀಘ್ರವೇ ಪರಿಹಾರ ನೀಡದಿದ್ದರೆ ನಾವೇ ಆತ್ಮಹತ್ಯೆಗೆ ಶರಣಾಗುತ್ತೇವೆ ಎಂದು ನೋವಿನಿಂದ ಅರಣ್ಯಾಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಶುಕ್ರವಾರ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಡೇಗರ್ಜೆ ಗ್ರಾಮದಲ್ಲಿ ಇಬ್ಬರು ಕೂಲಿ ಕಾರ್ಮಿಕರನ್ನು ಬಲಿ ಪಡೆದಿದ್ದ ಗಜಪಡೆ ಶನಿವಾರ ತಾಲೂಕಿನ ಮತ್ತಾವರ, ಹಳೇ ಬಿಕ್ಕೋಡು ಗ್ರಾಮದಲ್ಲಿ ದಾಂಧಲೆ ನಡೆಸಿವೆ. ರೈತರಾದ ದಿನೇಶ್ ಮತ್ತು ಪ್ರಕಾಶ್ಗೆ ಸೇರಿದ ಲಕ್ಷಾಂತರ ಮೌಲ್ಯದ ಬಾಳೆ, ಅಡಕೆ, ಕಾಫಿ ಬೆಳೆಯನ್ನು ನಾಶಮಾಡಿವೆ.
ಇದರಿಂದ ಮನನೊಂದಿರುವ ರೈತರು ಕೃಷಿಯನ್ನು ನಂಬಿ ಬದುಕುತ್ತಿರುವ ನಾವು ಬೆಳೆ ಕಳೆದುಕೊಂಡು ಬದುಕಲು ಸಾಧ್ಯವಿಲ್ಲ. ಇಷ್ಟೆಲ್ಲಾ ಅವಾಂತರವಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಸರ್ಕಾರ ಶೀಘ್ರವಾಗಿ ಕಾಡಾನೆ ಸಮಸ್ಯೆಗೆ ಪರಿಹಾರ ನೀಡದಿದ್ದರೆ ನಾವೇ ವಿಷ ಸೇವಿಸಿ ಜೀವ ಬಿಡುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ
ಶುಕ್ರವಾರ ಆನೆ ದಾಳಿಯಿಂದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಈ ಘಟನೆಯಿಂದ ರೈತರು ಕಂಗಾಲಾಗಿದ್ದಾರೆ. ಕಾಫಿ ತೋಟ ಮತ್ತಿತರ ಕೆಲಸಗಳಿಗೆ ಕೂಲಿ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿರುವುದರಿಂದ ಕೆಲಸಗಾರರಿಲ್ಲದೆ ಕೃಷಿಯನ್ನೇ ಕೈಚೆಲ್ಲುವ ಹಂತಕ್ಕೆ ಬಂದಿದ್ದಾರೆ. ಇದೇ ರೀತಿ ಮುಂದುವರೆದರೆ ಕೃಷಿಯನ್ನೇ ನಂಬಿ ಬದುಕುತ್ತಿರುವ ಮಲೆನಾಡಿಗರು ಕೃಷಿ ಬಿಟ್ಟು ಬೇರೆಡೆಗೆ ಸ್ಥಳಾಂತರವಾಗುವುದೊಂದೇ ದಾರಿ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅಡಕೆ ತೋಟ ಆನೆಗಳಿಗೆ ಆಹುತಿ
ರೈತ ಪ್ರಕಾಶ್ ಮಾತಾನಾಡಿ, "ಹತ್ತಾರು ವರ್ಷದಿಂದ ಕಷ್ಟ ಪಟ್ಟು ಬೆಳೆದ ಅಡಿಕೆ ತೋಟ ಕಾಡಾನೆಗಳ ಹಾವಳಿಯಿಂದ ನೆಲಕಚ್ಚಿ ಹೋಗಿದೆ. ಕಾಡಾನೆಗಳನ್ನು ಸ್ಥಳಾಂತರ ಮಾಡದಿದ್ದರೆ ನಾವೇ ಸಾಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕಾಡಾನೆ ಸಾಯಿಸಿ, ಇಲ್ಲ ನಮ್ಮಗೆ ಸ್ವಲ್ಪ ವಿಷ ಕೊಟ್ಟು ಬಿಡಿ ನಾವೇ ಸತ್ತು ಹೋಗುತ್ತೇವೆ" ಎಂದು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
"ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾದರೇ ಮೂರು ಕಾಸಿನ ಪರಿಹಾರ ಕೊಟ್ಟರೆ ನಾವು ಏನು ಮಾಡುವುದು?. ನಮ್ಮಗೆ ಶಾಶ್ವತ ಪರಿಹಾರ ಮಾಡಿಕೊಡಿ" ಎಂದು ಒತ್ತಾಯಿಸಿದರು.

ಅರಣ್ಯ ಇಲಾಖೆ ಕಾರ್ಯಾಚರಣೆ ಮಾಡಲಿ
ಬೆಳೆ ಕಳೆದುಕೊಂಡ ಮತ್ತೊಬ್ಬ ರೈತ ರಾಜು ಮಾತಾನಾಡಿ, "ಈ ಭಾಗದಲ್ಲಿ ಕಾಡಾನೆಗಳ ಉಪಟಳ ಜೋರಾಗಿದೆ, ಪ್ರತಿನಿತ್ಯ ಜೀವ ಭಯದಲ್ಲೇ ನಾವು ಬದುಕುತ್ತಿದ್ದೇವೆ. ಬೆಳೆಗಳನ್ನು ನಾಶ ಮಾಡುತ್ತಿರುವ ಕಾಡಾನೆಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು" ಎಂದು ಒತ್ತಾಯಿಸಿದರು.

ಸರ್ಕಾರ ತೀರ್ಮಾನ ಮಾಡಲಿ
ಕಾಡಾನೆ ಸಮಸ್ಯೆಯಿಂದ ಹೈರಾಣಾಗಿರುವ ಹಾಸನ ಜಿಲ್ಲೆಯ ಜನರು ಸರ್ಕಾರದ ನಿರ್ಧಾರಕ್ಕಾಗಿ ಕಾದು ಕುಳಿತಿದ್ದಾರೆ. ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಶೀಘ್ರವೇ ಶಾಶ್ವತ ಪರಿಹಾರ ಘೋಷಣೆ ಮಾಡಬೇಕಿದೆ. ಆನೆಗಳ ದಾಳಿ ಹೀಗೆಯೇ ಮುಂದುವರೆದರೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಅನೇಕರು ಕಾಡಾನೆ ದಾಳಿಗೆ ಬಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.












Click it and Unblock the Notifications