ಹಾಸನಾಂಬ ದೇವಿಗೆ ಭಕ್ತಾದಿಗಳು ಬರೆದಿರುವ ಚಿತ್ರವಿಚಿತ್ರ ಪತ್ರಗಳು
ಹಾಸನ, ನವೆಂಬರ್ 10 : ಹಾಸನಾಂಬ ದೇವಿಯ ಗರ್ಭಗುಡಿಯ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚುವ ಮೂಲಕ ಕಳೆದ ಏಳು ದಿನಗಳಿಂದ ನಡೆದ ಹಾಸನಾಂಬ ಉತ್ಸವಕ್ಕೆ ವಿಧ್ಯುಕ್ತವಾಗಿ ತೆರೆ ಎಳೆಯಲಾಗಿದೆ.
ನವೆಂಬರ್ 1ರಂದು ಹಾಸನಾಂಬ ದೇವಿಯಗರ್ಭಗುಡಿಯ ಬಾಗಿಲು ತೆರೆಯುವುದರೊಂದಿಗೆ ಹಾಸನಾಂಬ ಉತ್ಸವ ಆರಂಭವಾಗಿತ್ತು. ಪ್ರತಿದಿನವೂ ಸಾವಿರಾರು ಭಕ್ತರು ಆಗಮಿಸುವ ಮೂಲಕ ಹಾಸನಾಂಬ ದೇವಿಯ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾಗಿದ್ದರು.
ಹಾಸನಾಂಬೆ, ಹಸನ್ಮುಖಿ ಮಾತೆ ಕುರಿತ ಸ್ಥಳ ಪುರಾಣ
ಹಾಸನಾಂಬ ದೇವಿಯ ದರ್ಶನದ ಕೊನೆಯ ದಿನವಾದ ಶುಕ್ರವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಪ್ರಕಾಶ್ಗೌಡ ಅವರ ಸಮ್ಮುಖದಲ್ಲಿ ಹಾಸನಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಿಯ ಆಭರಣಗಳನ್ನು ಪಡೆದು ಬಳಿಕ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು.

ಮುಂದಿನ ವರ್ಷ ಅಕ್ಟೋಬರ್ನಲ್ಲಿ ದರ್ಶನ
ಮುಂದಿನ ವರ್ಷ ಹಾಸನಾಂಬೆ ಉತ್ಸವವು ಅಕ್ಟೋಬರ್ 17ರಿಂದ 29ರವರೆಗೆ ಜರುಗಲಿರುವುದಾಗಿ ದೇವಸ್ಥಾನದ ಅರ್ಚಕರು ಖಚಿತಪಡಿಸಿದ್ದಾರೆ. ಪಂಚಾಂಗದ ಪ್ರಕಾರ ಮುಂದಿನ ವರ್ಷ 12 ದಿನಗಳ ಕಾಲ ಹಾಸನಾಂಬ ಉತ್ಸವ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ನಡೆದ ಹಾಸನದ ಹಾಸನಾಂಬೆ ಉತ್ಸವದಲ್ಲಿ ಯಾವುದೇ ಗೊಂದಲಗಳಿಲ್ಲದೆ ಶಾಂತಿ ಸೌಹಾರ್ದತೆಯಿಂದ ಮುಕ್ತಾಯಗೊಂಡಿತು. ಇದಕ್ಕಾಗಿ ಹಗಲಿರುಳು ಶ್ರಮಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಎಸ್ಪಿ ಪ್ರಕಾಶ್ಗೌಡ ಅವರು ಅಭಿನಂದಿಸಿದ್ದಾರೆ. ಈ ಬಾರಿ ಹಾಸನಾಂಬ ಉತ್ಸವಕ್ಕೆ 3ರಿಂದ 5 ಲಕ್ಷದಷ್ಟು ಭಕ್ತರು ಆಗಮಿಸಿ ದರ್ಶನ ಪಡೆದಿರಬಹುದೆಂದು ಹೇಳಲಾಗಿದೆ.

ದೇವಿಗೆ ಭಕ್ತರು ಬರೆದಿರುವ ವಿಶಿಷ್ಟ ಪತ್ರಗಳು
ಕಾಣಿಕೆ ಹುಂಡಿಯಲ್ಲಿ ಕಾಣಿಕೆ ಹಣದೊಂದಿಗೆ ಕೆಲ ಭಕ್ತರು ದೇವಿಗೆ ಪತ್ರ ಬರೆಯುವ ಮೂಲಕ ಬೇಡಿಕೆ ಈಡೇರಿಸುವಂತೆ ಕೇಳಿಕೊಂಡಿರುವುದು ಕಂಡು ಬಂದಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ, ಕೆಲ ಭಕ್ತರು ಆಸ್ತಿ ವಿವಾದ, ಕುಟುಂಬ ವ್ಯಾಜ್ಯ ನಿವಾರಣೆಯಾಗಲೆಂದು, ಮಕ್ಕಳನ್ನು ಕಳೆದುಕೊಂಡಿರುವ ಕೆಲ ಭಕ್ತರು ನಮಗೆ ಮಕ್ಕಳನ್ನು ಕರುಣಿಸುವಂತೆ ಬೇಡಿಕೊಂಡಿರುವ ಪತ್ರಗಳು ದೊರಕಿವೆ.

ನನ್ನ ಜನ್ಮಕ್ಕೊಂದು ಮುಕ್ತಿ ಕೊಡು!
ಭಕ್ತರೊಬ್ಬರು ಮನಮಿಡಿಯುವ ಪತ್ರವೊಂದನ್ನು ಬರೆದಿದ್ದಾರೆ. ಅದು ಹೀಗಿದೆ. 2016ರಲ್ಲಿ ಗಂಗೆಯಲ್ಲಿ ನನ್ನ ಮಗ ನಿನ್ನ ಪಾದ ಸೇರಿದ. ಆತ ಬದುಕಿದ್ದರೆ ಇವತ್ತಿಗೆ 23 ವರ್ಷವಾಗುತ್ತಿತ್ತು. ನಾನು ನಿನ್ನಲ್ಲಿ ಆಸ್ತಿ, ಅಂತಸ್ತು, ಐಶ್ವರ್ಯವನ್ನು ಕೇಳಲಿಲ್ಲ. ಅವನಿಲ್ಲದೆ ಮೂರು ವರ್ಷದಲ್ಲಿ ನರಕಯಾತನೆ ಅನುಭವಿಸಿದ್ದೇನೆ. ನನಗೆ ನನ್ನ ಮಗನನ್ನು ಯಾವ ರೂಪದಲ್ಲಾದರೂ ಕರುಣಿಸು ಇಲ್ಲವೆ? ನನಗೆ ಈ ಜನ್ಮಕ್ಕೆ ಮುಕ್ತಿ ಕೊಡು ಎಂದು ಬೇಡಿ ಪತ್ರ ಬರೆದಿದ್ದಾರೆ.

ಮಗನ ಪ್ರೀತಿ ದಕ್ಕದಂತೆ ಹರಸು..!
ಇನ್ನೊಬ್ಬ ಭಕ್ತರು ಪತ್ರ ಬರೆದು ನಮ್ಮ ಮಗ ಪ್ರೀತಿಸಿರುವ ಹುಡುಗಿಯನ್ನು ಬಿಟ್ಟು ನಾವು ನೋಡಿರುವ ಹುಡುಗಿಯನ್ನು ಮದುವೆಯಾಗುವಂತೆ ಮಗನಿಗೆ ಮನಸ್ಸು ನೀಡುವಂತೆ ದೇವಿಯಲ್ಲಿ ಮೊರೆಯಿಟ್ಟಿದ್ದಾರೆ.
ರಘು ಎಂಬ ಭಕ್ತನೊಬ್ಬ ದೇವಿಗೆ ಪತ್ರ ಬರೆದು ತನ್ನ ಹಳೆಯ ವಾಹನ ಮನೆಯ ಹತ್ತಿರವೇ ಕೆಟ್ಟು ನಿಂತಿದೆ. ಅದರ ರಿಪೇರಿ ಒಂದು ತಿಂಗಳಲ್ಲಿಯೇ ಪೂರ್ಣಗೊಂಡು ಜೀವನ ಸಾಗಿಸಲು ದಾರಿ ಮಾಡಿಕೊಡು ಎಂದು ಪತ್ರ ಬರೆದಿದ್ದಾನೆ.

ಕುಡುಕ ಗಂಡನಿಂದ ನನ್ನ ಕಾಪಾಡು
ನನ್ನ ಗಂಡ ಕುಡುಕ ಹಗಲಿರುಳು ಎನ್ನದೆ ಕುಡಿದು ತೊಂದರೆ ಕೊಡುತ್ತಿದ್ದಾನೆ. ಸಂಸಾರ ನೊಗ ದಿಕ್ಕು ತಪ್ಪಿದೆ. ಆದ್ದರಿಂದ ನನ್ನ ಗಂಡನಿಗೆ ಕುಡಿಯದಂತೆ ಮನಸ್ಸನ್ನು ಕೊಡು, ನನ್ನ ಮಕ್ಕಳಿಗೆ ಒಳ್ಳೆಯ ತಂದೆಯನ್ನಾಗಿ ಮಾಡು ಎಂದು ದೇವರಲ್ಲಿ ಭಕ್ತೆಯೊಬ್ಬರು ಮನವಿ ಮಾಡಿದ್ದಾರೆ.
ಇದೆಲ್ಲದರ ನಡುವೆ ಕಾಣಿಕೆ ಹುಂಡಿಯಲ್ಲಿ ಹಳೆಯ 500, 1,000 ರು.ಗಳ ನೋಟುಗಳು ಕೂಡ ಪತ್ತೆಯಾಗಿರುವುದು ವಿಶೇಷವಾಗಿವೆ. ಇದೆಲ್ಲ, ಅಪನಗದೀಕರಣವಾಗಿ ಎರಡು ವರ್ಷ ಕಳೆದಿರುವ ಹೊತ್ತಿನಲ್ಲಿಯೇ ದೇವರ ಹುಂಡಿಗೆ ಬಂದು ಬಿದ್ದಿರುವುದು ಇನ್ನೂ ವಿಶೇಷ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications