ದೇವೇಗೌಡರು ಪ್ರಧಾನಿಯಾಗಲು ಕಾಂಗ್ರೆಸ್ ಕಾರಣ; ಡಿ.ಕೆ. ಶಿವಕುಮಾರ್
ಹಾಸನ, ಡಿಸೆಂಬರ್ 25: "ಜೆಡಿಎಸ್ನ ಎಚ್.ಡಿ. ದೇವೇಗೌಡರನ್ನು ಪ್ರಧಾನಿ ಮಾಡಲು ಕಾಂಗ್ರೆಸ್ ಪಕ್ಷ ಕಾರಣ," ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಹೇಳಿದ್ದಾರೆ.
ಹೊಳೆನರಸೀಪುರದಲ್ಲಿ ಮೇಕೆದಾಟು ಯೋಜನೆ ಸಂಬಂಧ ಪಾದಯಾತ್ರೆ ಹಮ್ಮಿಕೊಳ್ಳುವ ಬಗ್ಗೆ ಕರೆದಿರುವುದು ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ರೇವಣ್ಣ ಯಾವಾಗಲೂ ನಿಂಬೆಹಣ್ಣು ಇಟ್ಟುಕೊಂಡಿರುತ್ತಾರೆ ನೋಡಿದ್ದೀರಾ ಎಂದು ಕಾರ್ಯಕರ್ತರಿಗೆ ಕೇಳಿದರು.
"ಎಲ್ಲಾ ಹುಳಿಗಿಂತ ನಿಂಬೆಹಣ್ಣಿನ ಹುಳಿ ಶ್ರೇಷ್ಠ, ಎಲ್ಲ ದೇವರಲ್ಲಿ ಪರಮ ದೇವರು ಈಶ್ವರ. ಆದರೆ ಜನರ ನಂಬಿಕೆಗಿಂತ ದೊಡ್ಡಗುಣ ಬೇರೆ ಇಲ್ಲ. ಇನ್ನು ಈ ಡಿ.ಕೆ. ಶಿವಕುಮಾರ್ ಜೊತೆ ನೀವು ನಿಲ್ಲುತ್ತೀರಿ ಎಂದು ಹೊಳೆನರಸೀಪುರಕ್ಕೆ ನಂಬಿಕೆಯಿಂದ ಬಂದಿದ್ದೇನೆ," ಎಂದರು.

"ಹೊಳೆನರಸೀಪುರದ ಜನರ ಜೊತೆ ರಾಜಕೀಯವಾಗಿ ನಿಲ್ಲಲು ನಿಮ್ಮ ಮುಂದೆ ಭಿಕ್ಷೆ ಕೇಳಲು ಬಂದಿದ್ದೇನೆ, ನಾವು ಸರಿಯಾಗಿ ಅಧಿಕಾರ ನಡೆಸಲಿಲ್ಲ ಎಂದು ಸೋಲಿಸಿದರು, ನಾನು ಸೋತಿದ್ದೇನೆ, ಇದೆಲ್ಲ ರಾಜಕಾರಣದ ಇತಿಹಾಸದಲ್ಲಿ ಬೇಕಾದಷ್ಟು ಆಗಿದೆ. ದೇವೇಗೌಡರು, ಶ್ರೀಕಂಠಯ್ಯ, ಪುಟ್ಟಸ್ವಾಮಿಗೌಡ ಎಲ್ಲರೂ ಈ ಜಿಲ್ಲೆಯಲ್ಲಿ ರಾಜಕಾರಣ ಮಾಡಿದ್ದಾರೆ," ಎಂದು ಹೇಳಿದರು.
"ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಯಾವುದೋ ಒಂದು ವರ್ಗ ಅಧಿಕಾರಕ್ಕೆ ಬಂದ ಹಾಗೆ, ನಿಮ್ಮ ನೋವನ್ನು ಅನೇಕ ನಾಯಕರು ನಮ್ಮ ಬಳಿ ಬಂದು ಹೇಳುತ್ತಿದ್ದಾರೆ. ನಿಮ್ಮ ರಕ್ಷಣೆ ಮಾಡುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಲಿದೆ," ಎಂದರು.
ಇನ್ನು ಬೆಂಗಳೂರಿನಿಂದ ಮೇಕೆದಾಟುವರೆಗೂ ಪಾದಯಾತ್ರೆ ಮಾಡಲು ಹೇಳಲು ಇಲ್ಲಿಗೆ ಬಂದಿದ್ದೇನೆ, ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ. ನೀವೆಲ್ಲ ದೊಡ್ಡ ಮನಸ್ಸು ಮಾಡಿ ನೀವು ನನಗೆ ಆಶೀರ್ವಾದ ಮಾಡಬೇಕು, ನೀವೆಲ್ಲ ಮೇಕೆದಾಟು ಪಾದಯಾತ್ರೆಗೆ ಬರಬೇಕು ಎಂದು ಕೈಮುಗಿದು ಹೊಳೆನರಸೀಪುರದ ಜನರಲ್ಲಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

ನೀವು ಯಾರಿಗೂ ಹೆದರಬೇಡಿ, ವಿಚಲಿತರಾಗಬೇಡಿ, ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಹೊಳೆನರಸೀಪುರ ಕ್ಷೇತ್ರ ಬೇರೆಯಲ್ಲ ಎಂದು ನಾನು ಅಭಿಮಾನದಿಂದ ನೋಡುತ್ತೇನೆ. ಈ ವೇಳೆ ಪದೇ ಪದೇ ಜೈಕಾರ ಕೂಗುತ್ತಾ, ಶಿಳ್ಳೆ ಹಾಕುತ್ತಿದ್ದ ಕಾರ್ಯಕರ್ತರಿಗೆ ಸುಮ್ಮನಿರುವಂತೆ ಗದರಿದರು.
ಇದಕ್ಕೂ ಮೊದಲು ಅರಕಲಗೂಡಿನಲ್ಲಿ ಡಿ.ಕೆ. ಶಿವಕುಮಾರ್ ರೋಡ್ ಶೋನಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿ, ಬೃಹತ್ ಹೂವಿನ ಹಾರ ಹಾಕಿದರು. ಕಾರ್ಯಕರ್ತರ ನಡುವೆ ನೂಕುನುಗ್ಗಲು ಉಂಟಾಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಡಿಕೆ.. ಡಿಕೆ.. ಎಂದು ಕೂಗಿದ ಅಭಿಮಾನಿಗಳಿಗೆ ನೀವು ಕೂಗಾಟ ನಿಲ್ಲಿಸದಿದ್ದರೆ ನಾನು ಮಾತಾನಾಡದೆ ಇಲ್ಲಿಂದ ಹೊರಟು ಹೋಗುತ್ತೇನೆ ಎಂದರು.
ನಂತರ ಮಾತನಾಡಿದ ಡಿಕೆಶಿ, ನಾನು ಕಷ್ಟದಲ್ಲಿ ಇದ್ದಾಗ, ಇಡಿ ತಿಹಾರ್ ಜೈಲಿಗೆ ಕಳುಹಿಸಿದಾಗ ನೀವು ನನಗೆ ಒಳ್ಳೆಯದಾಗಲಿ ಎಂದು ಬಯಸಿದ್ದೀರಿ. ನಿಮ್ಮ ಪ್ರಾರ್ಥನೆಯ ಋಣವನ್ನು ಯಾವ ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ. ಹಾಸನ ಜನ, ಅರಕಲಗೂಡು ಜನ ಬಹಳ ಪ್ರಬುದ್ಧರಿದ್ದೀರಿ, ಕುಮಾರಸ್ವಾಮಿ, ದೇವೇಗೌಡರಿಗೆ ರಾಜಕೀಯವಾಗಿ ಜನ್ಮಕೊಟ್ಟ ಜಿಲ್ಲೆ ನಮ್ಮ ರಾಮನಗರ ಎಂದು ಹೇಳಿದರು.
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ, ನಿಮ್ಮ ಸೇವೆ ಮಾಡುತ್ತೇವೆ. ಈ ಡಿ.ಕೆ ಶಿವಕುಮಾರ್ ಸೇರಿ, ನಾವೆಲ್ಲ ಒಗ್ಗಟ್ಟಾಗಿ ಸೇರಿ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿ ಉತ್ತಮ ಸರ್ಕಾರ ನಡೆಸಿದ್ದೇವೆ. ಕಾಸು ಕೊಟ್ಟರೆ ಏನು ಬೇಕಾದರು ಸಿಗುತ್ತದೆ, ಆದರೆ ನೀರು ಸಿಗಲ್ಲ ಎಂದು ತಿಳಿಸಿದರು.

ನಾನು, ಸಿದ್ದರಾಮಯ್ಯ ಹಿಂದೆ ಅಧಿಕಾರದಲ್ಲಿದ್ದಾಗ ಈ ಯೋಜನೆಗಾಗಿ ಕೆಲಸ ಮಾಡಿದ್ದೇವೆ, ಈಗ ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕರೆ ಈ ಯೋಜನೆ ಆಗುತ್ತದೆ. ಹೀಗಾಗಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು. ಅದಕ್ಕೆ ನೀವೂ ಸಾಕ್ಷಿಯಾಗಬೇಕು, ನೀವೆಲ್ಲ ಬರಬೇಕು, ನೂರು ಜನ ಶಾಸಕರು, ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಇದು ಪಕ್ಷಾತೀತ ಕಾರ್ಯಕ್ರಮ ಇದರ ನಾಯಕತ್ವವನ್ನು ಮಾತ್ರ ನಾವು ವಹಿಸಿಕೊಂಡಿದ್ದೇವೆ ಎಂದರು.
ಮೇಕೆದಾಟು ಪಾದಯಾತ್ರೆಯ ಸಭೆಯಲ್ಲಿ ಇಷ್ಟು ಜನ ನಮಗೆ ಉತ್ಸಾಹ ತೋರಿಸುತ್ತಿರುವುದನ್ನು ನೋಡಿದರೆ ಇಡೀ ದೇಶ, ರಾಜ್ಯದಲ್ಲಿ ಬದಲಾವಣೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಜನ ಬಯಸಿದ್ದಾರೆ. ಎಲ್ಲಾ ವರ್ಗದ ಜನರನ್ನು ರಕ್ಷಣೆ ಮಾಡುವಂತ ಕೆಲಸವನ್ನು ಮಾಡುತ್ತೇವೆ, ಒಂದು ಉತ್ತಮವಾದಂತಹ ಸರ್ಕಾರವನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಮೇಕೆದಾಟು ಯೋಜನೆಯಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ, ಅದರ ಪರವಾಗಿ ಹೋರಾಟ ಮಾಡಲು ಕಾರ್ಯಕ್ರಮವನ್ನು ರೂಪಿಸುತ್ತಿದ್ದೇವೆ. ಪಕ್ಷ ಭೇದ ಮರೆತು ಸಂಘ ಸಂಸ್ಥೆಗಳು ಪಾಲ್ಗೊಳ್ಳಬೇಕು, ಬೆಳಗಾವಿ ಅಧಿವೇಶನದಲ್ಲಿ ನಮಗೆ ಸಮಯ ಸಾಲದು ಸರಿಯಾದ ರೀತಿಯಲ್ಲಿ ನಮಗೆ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂದು ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ತೊಂದರೆ ಉಂಟುಮಾಡಿ ಎರಡು ದಿನ ಕಲಾಪ ಅಡ್ಡಿಯಾಯಿತು. ಮತಾಂತರ ಮಸೂದೆ ತಂದರು, ಆದರೆ ಚರ್ಚೆಗೆ ಅವಕಾಶ ಕೊಡಲಿಲ್ಲ. ನಾಲ್ಕು ದಿನ ನೆರೆ ಬಗ್ಗೆ ಮಾತನಾಡಲು ಅವಕಾಶವನ್ನೂ ಕೊಡಲಿಲ್ಲ, ಮತಾಂತರ ನಿಷೇಧದ ಬಗ್ಗೆ ಯಾರೋ ಅಧಿಕಾರಿಗಳು ಪ್ರಸ್ತಾವನೆ ತೆಗೆದುಕೊಂಡು ಬಂದಿದ್ದರು, ನಮ್ಮ ಸರ್ಕಾರ ಒಪ್ಪಲಿಲ್ಲ ಅದಕ್ಕೆ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.












Click it and Unblock the Notifications