ಕಾಂಗ್ರೆಸ್-ಬಿಜೆಪಿ ಹೊಂದಾಣಿಕೆ ರಾಜಕೀಯ; ರೇವಣ್ಣ ಹೊಸ ಬಾಂಬ್
ಹಾಸನ, ಅಕ್ಟೋಬರ್ 12: "2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಮತ್ತು ತುಮಕೂರಿನಲ್ಲಿ ಜೆಡಿಎಸ್ ಸೋಲಲು ಕಾಂಗ್ರೆಸ್ ಮತ್ತು ಬಿಜೆಪಿಯ ಹೊಂದಾಣಿಕೆಯೇ ಕಾರಣ" ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಆರೋಪಿಸಿದರು.
ಹಾಸನದಲ್ಲಿ ಸೋಮವಾರ ಮಾತನಾಡಿದ ಮಾಜಿ ಸಚಿವರು, "150 ವರ್ಷಗಳ ಇತಿಹಾಸ ಹೊಂದಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸಿದೆ" ಎಂದು ದೂರಿದರು.
"ರಾಜ್ಯದಲ್ಲಿ ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷರ ಚುನಾವಣೆ ನಡೆಸುವುದು ಎಷ್ಟು ಸರಿ?" ಎಂದು ಜೆಡಿಎಸ್ ನಾಯಕ ರೇವಣ್ಣ ಪ್ರಶ್ನೆ ಮಾಡಿದರು.

"ಸ್ಥಳೀಯ ಸಂಸ್ಥೆಗಳ ಮೀಸಲಾತಿಗೆ ಸಂಬಂಧಿಸಿದಂತೆ 2ನೇ ಶನಿವಾರವೂ ಅಧಿಕಾರಿಗಳು ಕಾರ್ಯ ನಿರ್ವಹಣೆ ಮಾಡಿ ಇದಕ್ಕೆ ಸಂಬಂಧಿಸಿದ ಕಡತ ವಿಲೇವಾರಿ ಮಾಡಿದ್ದಾರೆ. ಯಡಿಯೂರಪ್ಪ ಮತ್ತು ಕಾನೂನು ಸಚಿವರಿಗೆ ಈ ಬಗ್ಗೆ ತಿಳಿದಿಲ್ಲವೇ?" ಎಂದು ರೇವಣ್ಣ ಪ್ರಶ್ನಿಸಿದರು.
"ಮೀಸಲಾತಿ ಪಟ್ಟಿ ರೋಸ್ಟರ್ ಪದ್ಧತಿಯಲ್ಲಿ ಹಂಚಿಕೆಯಾಗುತ್ತದೆ. ಆದರೆ, 42ನೇ ಪಟ್ಟಿಯಲ್ಲಿರುವ ಅರಸೀಕೆರೆ 52ನೇ ಪಟ್ಟಿಯಲ್ಲಿರುವ ಹಾಸನಕ್ಕೆ ಎಸ್ಟಿ ಮೀಸಲಾತಿಯನ್ನು ನೀಡಲಾಗಿದೆ. ಇದು ಕಾನೂನು ಬಾಹಿರ ನಿರ್ಣಯವಾಗಿದೆ" ಎಂದು ರೇವಣ್ಣ ಹೇಳಿದರು.
ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿಯನ್ನು ಕರ್ನಾಟಕ ಸರ್ಕಾರ ಕಳೆದ ಗುರುವಾರ ಪ್ರಕಟಿಸಿತ್ತು. ಹಾಸನ ಜಿಲ್ಲೆಯ ಹಾಸನ ಮತ್ತು ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನವನ್ನು ಎಸ್ಟಿ ಅಭ್ಯರ್ಥಿಗೆ ಮೀಸಲಿಡಲಾಗಿತ್ತು.
ಇದರಿಂದಾಗಿ ಹಾಸನ ಮತ್ತು ಅರಸೀಕೆರೆ ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್ಗೆ ಅವಕಾಶ ಇಲ್ಲದಂತಾಗಿದೆ. ಎರಡೂ ಕಡೆ ಎಸ್ಟಿ ವರ್ಗದಿಂದ ಅಧ್ಯಕ್ಷರಾಗಲು ಯಾವುದೇ ಸದಸ್ಯರು ಇಲ್ಲ. ಇದರಿಂದಾಗಿ ಬಹುಮತ ಇಲ್ಲದಿದ್ದರೂ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಲಿದೆ.
ಹಾಸನ ನಗರ ಸಭೆ ಸದಸ್ಯ ಬಲ 35. ಜೆಡಿಎಸ್ 17 ಸ್ಥಾನದಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆದಿದೆ. ಅರಸೀಕರೆ ನಗರಸಭೆಯಲ್ಲೂ ಜೆಡಿಎಸ್ 22 ಸ್ಥಾನದಲ್ಲಿ ಗೆದ್ದಿದೆ. ಬಿಜೆಪಿ ಐದು ಸ್ಥಾನ ಗೆದ್ದರೂ ಅಧ್ಯಕ್ಷ ಸ್ಥಾನ ಅವರಿಗೆ ಸಿಗಲಿದೆ.












Click it and Unblock the Notifications