ಹಾಸನದ ಗೆಂಡೆಕಟ್ಟೆಯಲ್ಲಿ ಜೀವವೈವಿಧ್ಯ ವನ ನಿರ್ಮಾಣ: ಅನಂತ ಹೆಗಡೆ ಅಶೀಸರ
ಹಾಸನ, ಆಗಸ್ಟ್ 20: ನಗರದ ಹೊರವಲಯದಲ್ಲಿರುವ ಗೆಂಡೆಕಟ್ಟೆ ಅರಣ್ಯವನ್ನು ವಿಶೇಷ ಜೀವ ವೈವಿಧ್ಯ ವನವನ್ನಾಗಿ ಮಾರ್ಪಾಡು ಮಾಡಲು ಯೋಜನೆ ರೂಪುಗೊಂಡಿದ್ದು, ಮುಂದಿನ ದಿನಗಳಲ್ಲಿ ಅದು ಜಾರಿಯಾಗಲಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅವರು ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅಧಿಕಾರಿಗಳಿಂದ ವರದಿ ಪಡೆದು, ಸುಮಾರು 308 ಎಕರೆ ಪ್ರದೇಶದಲ್ಲಿರುವ ಗೆಂಡೆಕಟ್ಟೆ ಅರಣ್ಯ ಪ್ರದೇಶವನ್ನು ವಿಶೇಷ ಯೋಜನೆಯಡಿ ಜೀವ ವೈವಿಧ್ಯ ವನವನ್ನಾಗಿ ಮಾರ್ಪಾಡು ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ಅದರಂತೆಯೇ ನದಿ ಮೂಲಗಳು, ಪುರಾತನ ಕೆರೆಗಳು ಹಾಗೂ ಅರಣ್ಯ ಪರಿಸರ ಇವುಗಳ ಪುನಶ್ಚೇತನಕ್ಕೆ ವಿಶೇಷ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಅಳಿವಿನಂಚಿನ ಜೀವವೈವಿಧ್ಯದ ಉಳಿವಿಗೆ...
ದಿನೇ ದಿನೇ ಅರಣ್ಯ ಹಾಗೂ ಕೆರೆಗಳ ಒತ್ತುವರಿಯಾಗಿ, ಕಣ್ಮರೆಯಾಗುತ್ತಿವೆ. ಅಳಿವಿನಂಚಿನಲ್ಲಿರುವ ಜೀವ ವೈವಿಧ್ಯವನ್ನು, ಪರಿಸರವನ್ನು ಉಳಿಸುವ ದೃಷ್ಟಿಯಿಂದ ಮೂರು ಹಂತಗಳಲ್ಲಿ ಸಮಿತಿಗಳನ್ನು ರಚಿಸಿ, ಅವುಗಳ ಮೂಲಕ ಸ್ಥಳೀಯ ಸಂಸ್ಥೆಗಳನ್ನು ಒಗ್ಗೂಡಿಸಿ, ದಾಖಲಾತಿಗಳ ಅಧ್ಯಯನ ಹಾಗೂ ವರದಿ ಮಾಡುವುದು ಅಗತ್ಯವಿದೆ. ಜಿಲ್ಲೆಯಲ್ಲಿ ಈಗಾಗಲೇ ಪರಿಣಾಮಕಾರಿಯಾಗಿ ಇದರ ಅನುಷ್ಠಾನ ಪ್ರಾರಂಭಿಸಲಾಗಿದೆ ಎಂದರು. ಪ್ರತಿ ಗ್ರಾಮದಲ್ಲಿ ಜನತಾ ಜೀವ ವೈವಿಧ್ಯ ದಾಖಲಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದ ಅವರು, ಅದರ ಅನುಕೂಲಗಳು ಹಾಗೂ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಗಳ ಬಗ್ಗೆ ವಿವರಿಸಿ, ಈ ಬಗ್ಗೆ ಸಾರ್ವಜನಿಕರಿಗೂ ಅರಿವು ಮೂಡಿಸಿ ಸಮುದಾಯದ ಸಹಭಾಗಿತ್ವ ಪಡೆಯಿರಿ ಎಂದರು.

ಪಾರಂಪರಿಕ ಮಹತ್ವದ ಆಹಾರ ಪದಾರ್ಥಗಳಿಗೆ ಉತ್ತೇಜನ
ಮಲೆನಾಡು ಪ್ರದೇಶಗಳಲ್ಲಿ ವಿವಿಧ ಬಗೆಯ ಔಷಧೀಯ ಗುಣಗಳುಳ್ಳ ಸಸ್ಯ ಸಂಪತ್ತು, ಬಹು ಬೇಡಿಕೆ ಇದ್ದ ವಿಶೇಷ ಮಸಾಲೆ ಪದಾರ್ಥಗಳಾದ ಏಲಕ್ಕಿ, ಜಾಯಿಕಾಯಿ ಹಾಗೂ ಇತರೆ ಸಾಂಬಾರ ಪದಾರ್ಥಗಳ ಉತ್ಪಾದನೆ ದಿನೇ ದಿನೇ ಕ್ಷೀಣಿಸುತ್ತಿವೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅವುಗಳ ಉತ್ಪಾದನೆಯನ್ನು ಹೆಚ್ಚಿಸಲು ವಿಶೇಷ ಯೋಜನೆಗಳನ್ನು ಸರ್ಕಾರಕ್ಕೆ ಮಂಡಿಸಬೇಕು ಎಂದರು.
ಸ್ಥಳೀಯ ಪ್ರದೇಶಗಳಲ್ಲಿ ಪಾರಂಪರಿಕವಾಗಿ ಮಹತ್ವವುಳ್ಳ ಆಹಾರ ಪದಾರ್ಥಗಳು ಹಾಗೂ ವಿಶೇಷ ತಳಿಗಳ ಹಣ್ಣುಗಳನ್ನು ಬೆಳೆಯಲು, ಜಾನುವಾರುಗಳನ್ನು ಸಾಕಲು ಉತ್ತೇಜನ ನೀಡಬೇಕು. ಜೊತೆಗೆ ಇದಕ್ಕೆ ಜಿಯೋ ಟ್ಯಾಗ್ ಪಡೆಯಲು ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಶ್ರಮಿಸಬೇಕು ಎಂದರು. ರಾಜ್ಯದಾದ್ಯಂತ ಸುಮಾರು 29 ಕೃಷಿ ರಾಸಾಯನಿಕಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದರೂ ಅವುಗಳ ಮಾರಾಟ ಹಾಗೂ ಬಳಕೆ ನಿಂತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕೆರೆಗಳಿಗೆ ಶಾಶ್ವತ ಬೇಲಿ ಹಾಕಿಸಲು ಸಲಹೆ
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, "ಜಿಲ್ಲೆಯಲ್ಲಿ ಸುಮಾರು 1,100 ಕೆರೆಗಳನ್ನು ಸರ್ವೆ ಮಾಡಲಾಗಿದ್ದು, ಅವುಗಳಿಗೆ ಶಾಶ್ವತ ಬೇಲಿ ಹಾಕದಿದ್ದಲ್ಲಿ ಒತ್ತುವರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ನಗರದ ಹೊರವಲಯದ ಸುಮಾರು 124 ಹೆಕ್ಟೇರ್ ಗೂ ಅಧಿಕ ವಿಸ್ತೀರ್ಣವುಳ್ಳ ಹುಣಸಿನ ಕೆರೆಯನ್ನು ಪುನಶ್ಚೇತನಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಗರ ವಿಸ್ತೀರ್ಣಗೊಂಡಂತೆ ಕೆರೆ ಒತ್ತುವರಿಯಾಗುವ ಸಾಧ್ಯತೆ ಇದೆ ಎಂದರು. ಆನೆ ಕಾರಿಡಾರ್ ಸಮಸ್ಯೆ, ಎತ್ತಿನಹೊಳೆ ಯೋಜನೆಯಿಂದಾಗಿರುವ ಅರಣ್ಯ ನಾಶ ಹಾಗೂ ಪರ್ಯಾಯ ವನಸಂವರ್ಧನಾ ಯೊಜನೆಗಳ ಬಗ್ಗೆಯೂ ಜಲ್ಲಾಧಿಕಾರಿ ವಿವರಿಸಿದರು.

ಜೀವವೈವಿಧ್ಯ ಸಮಿತಿಗಳ ರಚನೆ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸೇರಿದಂತೆ 267 ಗ್ರಾಮ ಪಂಚಾಯ್ತಿಗಳು, 8 ತಾಲ್ಲೂಕು ಪಂಚಾಯ್ತಿಗಳಲ್ಲಿ ಜೀವ ವೈವಿಧ್ಯ ಸಮಿತಿಗಳನ್ನು ರಚಿಸಲಾಗಿದ್ದು, ಸಂಬಂಧಪಟ್ಟ ದಾಖಲಾತಿ ಹಾಗೂ ವರದಿಗಳನ್ನು ಪ್ರತಿ ತಿಂಗಳ ಕೊನೆಯಲ್ಲಿ ಸಲ್ಲಿಸಲಾಗುತ್ತಿದೆ ಎಂದರು. ಹಾಸನ ತಳಿ ಮೇಕೆ ಹಾಗೂ ಆಲೂರು ಸಣ್ಣ ಅಕ್ಕಿ ತಳಿಯ ಬಗ್ಗೆ ಸಭೆಯ ಗಮನಕ್ಕೆ ತಂದ ಅವರು, ಇವುಗಳ ಸಂವರ್ಧನೆಗೆ ಹೆಚ್ಚಿನ ಪ್ರಾಮುಖ್ಯ ನೀಡಬೇಕು ಎಂದರು.












Click it and Unblock the Notifications