ಅಮಾವಾಸ್ಯೆಯಂದು ಅರಸೀಕರೆ ಪೊಲೀಸ್ ಠಾಣೆಯಲ್ಲಿ ಕೋಳಿ ಬಲಿ!
ಹಾಸನ,ಜು1: ಗ್ರಾಮೀಣ ಭಾಗದಲ್ಲಿ ಮಕ್ಕಳು, ಯುವಕರು ಅಥವಾ ದೊಡ್ಡವರು ನಡೆಯುವಾಗ ಅಥವಾ ಒಂದೇ ಸ್ಥಳದಲ್ಲಿ 2-3 ಬಾರಿ ಎಡವಿ ಬಿದ್ದಾಗ ಅಥವಾ ಗ್ರಾಮಕ್ಕೆ ಹೊಸಬರು ಯಾರಾದರೂ ಬಂದರೇ ಕೋಳಿ ಅಥವಾ ಕುರಿ ಬಲಿಕೊಟ್ಟು ಶಾಂತಿ ಮಾಡಿಸುವ ಪದ್ಧತಿಯಿದೆ.
ಹಾಸನ ಜಿಲ್ಲೆಯ ಅರಸೀಕೆರೆಯ ಗ್ರಾಮೀಣ ಠಾಣೆ ಪೊಲೀಸರು ಪೊಲೀಸ್ ಠಾಣೆಯಲ್ಲಿ ಕೋಳಿ ಬಲಿ ನೀಡಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಬಲಿ ಯಾಕೆ ಕೊಟ್ಟರು?, ಯಾರಾದರೂ ಎಡವಿ ಬಿದ್ದಿದ್ದಾರ?, ಅಥವಾ ಜಿಲ್ಲೆಗೆ ಯಾರಾದರೂ ಹೊಸಬರು ಬಂದರಾ? ಎಂದು ಜನ ಕೇಳುತ್ತಿದ್ದಾರೆ.
ಕಪ್ಪು ಕೋಳಿಯನ್ನು ಬಲಿಕೊಟ್ಟ ಪೊಲೀಸರ ಮೌಢ್ಯತೆ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಣ್ಣೆತ್ತಿನ ಅಮಾವಾಸ್ಯೆಯ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಈ ರೀತಿಯ ಕೋಳಿ ಬಲಿ ನಡೆದಿದೆ.

ಮೂಢನಂಬಿಕೆ ಜೀವಂತ; ಗ್ರಾಮೀಣ ಭಾಗದಲ್ಲಿ ಇಂದಿಗೂ ಮೂಢನಂಬಿಕೆ ಜೀವಂತವಾಗಿದೆ. ಇದನ್ನು ಕೆಲವರು ಸಂಪ್ರದಾಯ ಎಂದು ನಡೆಸಿಕೊಂಡು ಬರುತ್ತಿದ್ದರೆ, ಕೆಲವರು ಮಾತ್ರ ಇಂತಹ ಪದ್ಧತಿ ಆಚರಿಸದಿದ್ದರೆ ಗ್ರಾಮಕ್ಕೆ ಕೆಡುಕಾಗುತ್ತದೆ ಎಂದು ನಂಬಿದ್ದಾರೆ.
ಊರಿಗೆ ಮಾರಿ ಬರುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ ಪೊಲೀಸ್ ಠಾಣೆಗೆ ಅದೇನು ಬಂತು? ಎಂದು ಜನರಿಗೆ ಗೊತ್ತಿಲ್ಲ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೌಢ್ಯತೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಕಪ್ಪು ಕೋಳಿಯ ಬಲಿ ಘಟನೆಯೇ ಸಾಕ್ಷಿ. ಈ ಕುರಿತ ವಿಡಿಯೋವೊಂದು ಸಹ ಹರಿದಾಡುತ್ತಿದೆ.

ಅರಸೀಕೆರೆ ಪಟ್ಟಣದ ಡಿವೈಎಸ್ಪಿ ಕಚೇರಿಯ ಕಟ್ಟಡದಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭಾನಾಮತಿ ಮಾಡಿಸೋ ವ್ಯಕ್ತಿಯನ್ನು ಕರೆಸಿ ಕರಿ ಕೋಳಿಯನ್ನು ಬಾಗಿಲಿಗೆ ಮೂರು ಬಾರಿ ನೀವಳಿಸಿ, ನಿಂಬೆಹಣ್ಣು, ಒಣ ಮೆಣಸಿನಕಾಯಿ, ಇದ್ದಿಲುಗಳ ಮೂಲಕ ದೃಷ್ಟಿ ತೆಗೆದು ಬಾಗಿಲಿನಲ್ಲಿಯೇ ಕೋಳಿ ಬಲಿಕೊಟ್ಟಿದ್ದಾರೆ ಎಂಬ ಸುದ್ದಿ ಇದೆ. ಇದು ನಿಜವೋ?. ಇಲ್ಲವೋ? ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಬೇಕಿದೆ.












Click it and Unblock the Notifications