ಎ. ಮಂಜು ಕಾಂಗ್ರೆಸ್ ಸೇರ್ಪಡೆ; ಬಂತು ಸ್ಫೋಟಕ ಸುದ್ದಿ!
ಹಾಸನ, ಡಿಸೆಂಬರ್ 01; "ಮಾಜಿ ಸಚಿವ ಎ. ಮಂಜು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಎ. ಮಂಜು ಜೊತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ" ಎಂದು ವಿಧಾನ ಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿ ಹೊಸ ಬಾಂಬ್ ಸಿಡಿಸಿದರು.
ಬುಧವಾರ ಹಾಸನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಮಾಜಿ ಸಚಿವ ಎ. ಮಂಜು ಪುತ್ರ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿರುವುದರಿಂದ ಬಿಜೆಪಿಯಲ್ಲಿನ ಹೈಕಮಾಂಡ್ ತೀರ್ಮಾನದಂತೆ ಕೆಲ ನಿರ್ಬಂಧಗಳನ್ನು ಮೀರಿದ್ದಾರೆ" ಎಂದರು.
"ನಮ್ಮ ಪಕ್ಷದಲ್ಲಿ ಸಚಿವರಾಗಿದ್ದರು. ನಂತರ ಬಿಜೆಪಿ ಪಕ್ಷಕ್ಕೆ ಪಲಾಯನ ಮಾಡಿದ್ದಾರೆ. ಪಕ್ಷಕ್ಕೆ ಮತ್ತೆ ಬಂದರೇ ಸ್ವಾಗತ ಮಾಡಲೇಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ಸೀಟು ಗೆದ್ದು ಸರಕಾರ ರಚಿಸುತ್ತೇವೆ. ನಮ್ಮ ಪಕ್ಷದ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾವುಗಳು ಬದ್ಧರಾಗಿರುತ್ತೇವೆ. ಈಗಾಗಲೇ ಮಾತುಕತೆ ನಡೆದಿರುವುದು ಸತ್ಯ. ಅನೇಕರು ಜೆಡಿಎಸ್ ಪಕ್ಷದಿಂದಲೂ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ" ಎಂದು ಹೇಳಿದರು.

"ಹಾಸನ ಜಿಲ್ಲೆ ಎಂದರೇ ಇಲ್ಲಿ ರೇವಣ್ಣಅವರದ್ದೇ ಸರ್ಕಾರವಾಗಿ ಭಯದ ವಾತಾವರಣ ಉಂಟಾಗಿದ್ದು, ಇದಕ್ಕೆ ಮುಂದೆ ಎಲ್ಲಾ ಸಾಕ್ಷಿ ಬಿಡುಗಡೆ ಮಾಡಲಾಗುವುದು. ಜಿಲ್ಲೆಯಲ್ಲಿ ಎಲ್ಲಾ ಶಾಸಕರು ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಲೋಕಾಸಭಾ ಸದಸ್ಯರ ನಿವಾಸದಲ್ಲಿ ಸಭೆ ಮಾಡುವ ಹಾಗಿಲ್ಲ. ಆದರೇ ಸದಸ್ಯರ ಸಭೆಯನ್ನು ಜೆಡಿಎಸ್ ನಾಯಕರು ಮಾಡಿದ್ದಾರೆ" ಎಂದರು.
"ನಾನು ಎಂಎಲ್ಸಿ, ನನ್ನ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಸಭೆಯಲಿ ಭಾಗವಹಿಸಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನನಗೆ ವರ್ಷಕ್ಕೆ ಎರಡು ಕೋಟಿ ಅನುದಾನ ಬರುತ್ತದೆ. ಆದರೆ ಕೊರೋನಾ ವೇಳೆ ಅನುದಾನದ ಬಾಕಿ ಹಣ ಬಂದಿರುವುದಿಲ್ಲ" ಎಂದು ಎಂ. ಎ. ಗೋಪಾಲಸ್ವಾಮಿ ದೂರಿದರು.
"ಈ ಬಾರಿಯೂ ಕಾಂಗ್ರೆಸ್ನಿಂದ ಒಂದು ಹೊಸ ಮುಖ ಹಾಕಲು ಮುಖಂಡರು ನಿರ್ಧರಿಸದಂತೆ ಆಗಿದೆ. ನಮ್ಮದು ರಾಷ್ಟ್ರೀಯ ಪಕ್ಷ, ಹೊಸ ಹೊಸ ಮುಖಗಳಿಗೆ ಅವಕಾಶಗಳಿವೆ. ನಮ್ಮ ಅಭ್ಯರ್ಥಿ ಶಂಕರ್ ಅವರು 400 ಮತಗಳ ಅಂತರದಲ್ಲಿ ಜಯಗಳಿಸಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಜಿಲ್ಲೆಯಲ್ಲಿ ಜೆಡಿಎಸ್ ಕುಟುಂಬ ರಾಜಕಾರಣ ನಡೆಯುತ್ತಿದೆ. ಎಂಎಲ್ಸಿ ಚುನಾವಣೆಯಲ್ಲಿ ಮತದಾನ ಗೌಪ್ಯವಾಗಿ ಆಗಬೇಕು. ನೂರು ಮೀಟರ್ ದೂರ ಇಡಬೇಕು. ಮೊಬೈಲ್ ಬಳಕೆ ನಿಷೇಧ ಮಾಡಬೇಕು. ಎಂಪಿ ನಿವಾಸದಲ್ಲಿ ಸಭೆ ಮಾಡುವುದರ ಬಗ್ಗೆ ಸೇರಿದಂತೆ ದೂರು ಕೊಡಲಾಗುವುದು" ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್ ಮಾತಾನಾಡಿ, "ಸಂಸದರ ನಿವಾಸದಲ್ಲಿ ಜೆಡಿಎಸ್ ಸದಸ್ಯರ ಸಭೆ, ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣ ಸೇರಿದಂತೆ ಇತರೆ ವಿಚಾರವನ್ನಿಟ್ಟುಕೊಂಡು ಗುರುವಾರ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ" ತಿಳಿಸಿದರು.
"ನಾನಾ ವಿಚಾರವನ್ನಿಟ್ಟುಕೊಂಡು ಜೆಡಿಎಸ್ ವಿರುದ್ದ ಚುನಾವಣಾಧಿಕಾರಿಗೆ ದೂರು ಕೊಡಲಾಗುವುದು. ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಲು ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಸೇರಿ 3612 ಸದಸ್ಯರು ಇದ್ದಾರೆ. ಪ್ರಚಾರದ ವೇಳೆ ಇತರೆ ಎರಡು ಪಕ್ಷಗಳು ನಮ್ಮ ಪಕ್ಷದವರ ಸದಸ್ಯರು ಹೆಚ್ಚು ಇದ್ದಾರೆ ಎಂದು ಹೇಳುತ್ತಿದ್ದಾರೆ" ಎಂದರು.
"ನಮ್ಮ ಪಕ್ಷದಲ್ಲಿ ತಾವೇ ಅಭ್ಯರ್ಥಿ ಎಂದು ಎಲ್ಲರು ಕೆಲಸ ಮಾಡುತ್ತಿದ್ದಾರೆ. ನಮ್ಮ ಯುಪಿಎ ಸರಕಾರದಲ್ಲಿ ನರೇಗಾ ಯೋಜನೆ ಬಂದಿದ್ದು. ಸಿದ್ದರಾಮಯ್ಯ ಕಾಲದ ವೇಳೆ ಹಸಿವು ಮುಕ್ತ ಕರ್ನಾಟಕ ಮಾಡಿದೆ. ಹೀಗೆ ಹಲವಾರು ಕೊಡುಗೆ ನೀಡಿದೆ" ಎಂದರು.
"ನಾಯಕರಾದ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸಧೃಡವಾಗಿದ್ದು, ಹಿಂದಿನ ಗೆಲುವಿನಂತೆ ಈ ಬಾರಿಯೂ ಗೆಲುವು ಸಿಗಲಿದೆ. ಡಿಸೆಂಬರ್ 2 ಮತ್ತು 3ರಂದು ಡಿ. ಕೆ. ಸುರೇಶ್ ಮತ್ತು ಧ್ರುವನಾರಾಯಣ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ" ಎಂದು ಜಾವಗಲ್ ಮಂಜುನಾಥ್ ಹೇಳಿದರು.
"ಇಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದ್ದು, ಈ ಬಗ್ಗೆ ಜನರೇ ಮಾತನಾಡಿಕೊಳ್ಳುತ್ತಿದ್ದು, ಈಗ ಮತದಾರರು ಜಾಗೃತರಾಗಿದ್ದಾರೆ. ಮೊದಲು ಮತಗಟ್ಟೆಗೆ ಹೆಚ್ಚಿನ ಭದ್ರತೆ ನೀಡಿ, ಒಳಗೆ ಮೊಬೈಲ್ ಬಳಕೆ ಮಾಡಬಾರದು, ಶಾಂತಿಯುತವಾದ ಮತದಾನ ನಡೆಯಬೇಕು ಎಂಬುದು ನಮ್ಮ ಬೇಡಿಕೆಗಳಾಗಿವೆ" ಎಂದು ತಿಳಿಸಿದರು.












Click it and Unblock the Notifications