ಹಾಸನ: ಪತ್ನಿಗೆ ಕರೆ ಮಾಡಿದ ಒಂದೇ ಕಾರಣಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿದ ಪತಿ!
ಹಾಸನ, ಡಿಸೆಂಬರ್ 27: ತನ್ನ ಹೆಂಡತಿಗೆ ಫೋನ್ ಕರೆ ಮಾಡಿದ ಎಂಬ ಒಂದೇ ಕಾರಣಕ್ಕೆ ಪತಿಯೊಬ್ಬ ವ್ಯಕ್ತಿಯ ಜೀವವನ್ನೇ ತೆಗೆದಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನಲ್ಲಿ ನಡೆದಿದೆ.
ಮಹಿಳೆಯ ಪತಿ ಹಾಗೂ ಇತರರು ಸೇರಿ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಕುಪ್ಪೆಮುದ್ದನಹಳ್ಳಿ ಗ್ರಾಮದ ರವಿ (46) ಎಂಬಾತನನ್ನು ಕೊಲೆ ಮಾಡಿದ್ದಾರೆ. ಮೃತ ರವಿ ಹಳ್ಳಿಮೈಸೂರು ಗ್ರಾಮದ ನಿರ್ವಾಣಿ ಕ್ವಾಟ್ರಸ್ ನಿವಾಸಿ. ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಅಕ್ಕನ ಮನೆಯಲ್ಲಿ ತಿಂಡಿ ತಿಂದು ನಂತರ ಮನೆಯಿಂದ ಹೊರಗೆ ಹೋಗಿದ್ದಾನೆ.
ಮಧ್ಯಾಹ್ನ 12.30ರಲ್ಲಿ ಅಕ್ಕ ಮಂಜುಳಾಗೆ ಕರೆ ಮಾಡಿದ ಅವರ ತಾಯಿ, ರವಿಗೆ ಯಾರೋ ಹಲ್ಲೆ ಮಾಡುತ್ತಿದ್ದಾರೆ ಎಂದು ಫೋನ್ ಮಾಡಿದ್ದರು ಎಂದು ಹೇಳಿದ್ದಾರೆ. ಇದನ್ನು ತಿಳಿದ ಕೂಡಲೇ ಮಂಜುಳಾ, ರವಿ ಮೊಬೈಲ್ಗೆ ಕರೆ ಮಾಡಿದ್ದಾರೆ. ರವಿಯ ಫೋನ್ ರಿಸೀವ್ ಮಾಡಿದ ಬಳೆಮಂಜ ಎಂಬ ವ್ಯಕ್ತಿ, ನಾವು ನಾಲ್ಕು ಜನರು ಇಲ್ಲೇ ಇದ್ದೇವೆ. ರವಿಯನ್ನು ಕರೆದುಕೊಂಡು ಮನೆ ಬಳಿಗೆ ಬರುತ್ತೇವೆ ಎಂದು ತಿಳಿಸಿದ್ದಾನೆ.
ಇದಾದ ಬಳಿಕ ಹಳ್ಳಿ ಮೈಸೂರು ಗ್ರಾಮದ ಬಳೆಮಂಜ, ಟಿ. ಮಾಯಿಗೌಡನಹಳ್ಳಿಯ ಹೊಯ್ಸಳ, ಗುಡ್ಡೇನಹಳ್ಳಿಯ ಶ್ರೀಜಿತ್ ಮತ್ತು ಶೆಟ್ಟರಕೊಪ್ಪಲು ಗ್ರಾಮದ ಸಾಗರ್ ಎಂಬುವವರು ಮಂಜುಳಾ ಮನೆ ಬಳಿ ಬಂದಿದ್ದಾರೆ. ಆದರೆ ಅವರ ಜೊತೆ ರವಿ ಇರಲಿಲ್ಲ. ಈ ವೇಳೆ ಹೊಯ್ಸಳ ಎಂಬಾತನ ಪತ್ನಿ ಸುಮಾಳಿಗೆ ರವಿ ನಿತ್ಯವೂ ಫೋನ್ ಮಾಡಿ ತೊಂದರೆ ಕೊಡುತ್ತಿದ್ದಾನೆ ಎಂದು ದೂರಿದ್ದಾರೆ. ಜೊತೆಗೆ ರವಿಯ ಮೊಬೈಲ್ನಲ್ಲಿದ್ದ ಸುಮಾಳ ನಂಬರ್ ಸಹ ತೋರಿಸಿದ್ದಾರೆ.
ಆ ಸುದ್ದಿ ತಿಳಿದು ಮನೆಯವರು ಹೊಯ್ಸಳನ ಮನೆ ಹತ್ತಿರ ದೌಡಾಯಿಸಿದಾಗ ರವಿಯನ್ನು ಕೊಲೆ ಮಾಡಲಾಗಿತ್ತು. ಮೃತನ ಕುತ್ತಿಗೆ ಬಲಭಾಗ ಮತ್ತು ಬಲಗೈಯಲ್ಲಿ ತರಚಿದ ಗಾಯವಾಗಿದ್ದು, ಟೀ ಶರ್ಟ್ ಬಲತೋಳು ಹರಿದಿತ್ತು. ಹೊಯ್ಸಳನ ಪತ್ನಿ ಮೊಬೈಲ್ಗೆ ಕರೆ ಮಾಡಿದ ಎಂಬ ಒಂದೇ ಕಾರಣಕ್ಕೆ ಮನೆಯೊಳಗೆ ಕೂಡಿಹಾಕಿ ನೇಣು ಬಿಗಿದಿದ್ದಾರೆ. ಅಲ್ಲದೇ ಬಲವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಹಳ್ಳಿ ಮೈಸೂರು ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ನನ್ನ ತಮ್ಮನನ್ನು ಕೊಲೆ ಮಾಡಿದ್ದಾರೆ ಎಂದು ರವಿ ಸಹೋದರ ಪೊಲೀಸ್ ಠಾಣೆ ದೂರು ನೀಡಿದ್ದಾರೆ.
ಒಟ್ಟಾರೆ ಮೃತ ರವಿ ವಿವಾಹಿತೆಗೆ ಫೋನ್ ಕರೆ ಮಾಡಿದ್ದಾನಾ ಅಥವಾ ಮಾಡಿಲ್ಲವೋ ಎಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ. ಮೃತ ತಪ್ಪು ಮಾಡಿದರೆ ಬುದ್ದಿ ಹೇಳಿದ್ದರೆ ಸರಿಹೋಗುತ್ತಿದ್ದನೋ ಗೊತ್ತಿಲ್ಲ, ಕೋಪದ ಕೈಗೆ ಬುದ್ದಿ ಕೊಟ್ಟು ಕೊಲೆ ಮಾಡಲು ಮುಂದಾಗಿರುವುದು ನಿಜಕ್ಕೂ ಸಮಾಜವೇ ತಲೆ ತಗ್ಗಿಸುವಂತಹದ್ದು. ಪ್ರಕರಣದ ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.
Recommended Video