ತೆಂಗಿನಕಾಯಿ ಗೊನೆ ಬಿದ್ದು ಬಾಲಕ ಸಾವು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಹಾಸನ, ಜೂನ್ 23: ತೆಂಗಿನಕಾಯಿ ಗೊನೆ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಬಿ.ಚೋಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಜ್ವಲ್ (16) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಶ್ರವಣಬೆಳಗೊಳ ಹೊರವಲಯದ ಉತ್ತೇನಹಳ್ಳಿ ಗ್ರಾಮದ ರವಿ ಮತ್ತು ಅನಸೂಯ ದಂಪತಿ ಬಿ.ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ಶ್ರವಣಬೆಳಗೊಳದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಪ್ರಜ್ವಲ್ ಪ್ರತಿನಿತ್ಯ ತೋಟದ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ.

ನಿನ್ನೆ ರಾತ್ರಿ ಸುರಿದ ಭಾರೀ ಮಳೆ-ಗಾಳಿಯಿಂದ ಮರದಿಂದ ತೆಂಗಿನಕಾಯಿಗಳು ಬಿದ್ದಿದ್ದವು. ಹೀಗಾಗಿ ಪ್ರಜ್ವಲ್ ಬೆಳಗ್ಗೆ ಬಿದ್ದಿದ್ದ ತೆಂಗಿನಕಾಯಿಗಳನ್ನು ಒಂದೆಡೆ ಸಂಗ್ರಹಿಸುತ್ತಿದ್ದ ಈ ವೇಳೆ ಏಕಾಏಕಿ ತೆಂಗಿನಮರದಿಂದ ತೆಂಗಿನಕಾಯಿ ಗೊನೆ ಬಾಲಕನ ಮೇಲೆ ಬಿದ್ದಿದೆ. ಪ್ರಜ್ವಲ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಸ್ಥಳದಲ್ಲಿದ್ದವರು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಪ್ರಜ್ವಲ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಬಾಲಕನ ಸಾವಿನ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ನಿಧಿಗಾಗಿ ನಿರ್ಜನ ಪ್ರದೇಶದಲ್ಲಿ ಗುಂಡಿ ತೋಡಿದ ಕಿಡಿಗೇಡಿಗಳು
ಚಿಕ್ಕಮಗಳೂರು: ದುಷ್ಕರ್ಮಿಗಳು ನಿಧಿಗಾಗಿ ನಿರ್ಜನ ಪ್ರದೇಶದಲ್ಲಿ 10 ಅಡಿ ಅಗಲ, 15 ಅಡಿ ಆಳ ಗುಂಡಿ ತೋಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಆಣೂರು ಸಮೀಪದ ಕೆಸರಿಕೆ ಗ್ರಾಮದಲ್ಲಿ ನಡೆದಿದೆ.
ಉಡುಪಿ ನೋಂದಣಿ ಸಂಖ್ಯೆ ಇರುವ ಎರಡು ಕಾರಿನಲ್ಲಿ ಬಂದಿದ್ದ ನಿಧಿ ಶೋಧದ ತಂಡ, ನಿಧಿಗಾಗಿ ಮಧ್ಯರಾತ್ರಿಯಲ್ಲಿ ಪೂಜೆ ಮಾಡಿ 10 ಅಡಿ ಅಗಲ, 15 ಅಡಿ ಆಳದ ಗುಂಡಿ ತೆಗೆದಿದ್ದಾರೆ. ನಿರ್ಜನ ಪ್ರದೇಶದಲ್ಲಿ ಬೆಳಕು ಕಂಡು ಗ್ರಾಮಸ್ಥರು ಸ್ಥಳಕ್ಕೆ ತೆರಳಿದ್ದಾರೆ. ಗ್ರಾಮಸ್ಥರು ಸ್ಥಳಕ್ಕೆ ಬರುತ್ತಿದ್ದಂತೆ ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ನಿಧಿಗಾಗಿ ಶೋಧ ನಡೆಸಿದ ಸ್ಥಳದಲ್ಲಿ ಅರಿಶಿಣ-ಕುಂಕುಮ, ಕುಂಬಳಕಾಯಿ, ಕೋಳಿ, ಕಾಯಿ, ಸೇರಿ ವಿವಿಧ ವಸ್ತುಗಳು ಪತ್ತೆಯಾಗಿವೆ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗ್ರಾಮದಲ್ಲಿ ನಿಧಿಗಾಗಿ ನಡೆದ ಪೂಜೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.












Click it and Unblock the Notifications