ಹಾಸನದ ಹುತಾತ್ಮ ಯೋಧ ಸಂದೀಪ್ ಕುಟುಂಬಕ್ಕೆ 25 ಲಕ್ಷ ಪರಿಹಾರ
ಹಾಸನ: ಜಮ್ಮು ಕಾಶ್ಮೀರದ ಗುರೇಜ್ ನಲ್ಲಿ ಹುತಾತ್ಮರಾದ ಜಿಲ್ಲೆಯ ದೇವಿಹಳ್ಳಿಯ ಯೋಧ ಸಂದೀಪ್ ಶೆಟ್ಟಿ ಅವರ ಕುಟುಂಬಕ್ಕೆ ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಎ.ಮಂಜು ಅವರು ರಾಜ್ಯ ಸರಕಾರದ ಪರವಾಗಿ 25 ಲಕ್ಷ ರುಪಾಯಿಗಳ ಪರಿಹಾರ ಧನದ ಚೆಕ್ ವಿತರಿಸಿದರು.
ಸಂದೀಪ್ ಶೆಟ್ಟಿಯವರ ನಿವಾಸಕ್ಕೆ ಭೇಟಿ ನೀಡಿ ಪರಿಹಾರದ ಚೆಕ್ ಹಸ್ತಾಂತರಿಸಿದ ಸಚಿವರು, ಫೆಬ್ರವರಿ 1ರಂದು ಹುತಾತ್ಮ ಸೇನಾನಿಯ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಹಾಗೂ ಸೇನಾ ಗೌರವದೊಂದಿಗೆ ಅವರ ಸ್ವಗ್ರಾಮದಲ್ಲಿ ನೆರವೇರಿಸಲಾಗುವುದು ಎಂದರು.[ಹಾಸನ: ಹಿಮಕುಸಿತದಲ್ಲಿ ಹುತಾತ್ಮನಾದ ಯೋಧನಿಗೆ ಕಂಬನಿ]
ಪಾರ್ಥಿವ ಶರೀರ ಈಗಾಗಲೇ ದೆಹಲಿ ತಲುಪಿದೆ. ಬೆಳಗ್ಗೆಯೊಳಗೆ ಹಾಸನ ತಲುಪಲಿದೆ. ಜಿಲ್ಲಾಡಳಿತದ ಮುಂಭಾಗ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಆ ನಂತರ ಕುಟುಂಬ ವರ್ಗದವರ ನಿರ್ಧಾರದಂತೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ಹುತಾತ್ಮ ಯೋಧನ ಕುಟುಂಬ ವರ್ಗ ಹಾಗೂ ಗ್ರಾಮಸ್ಥರ ಆಶಯದಂತೆ ಡೈರಿ ವೃತ್ತಕ್ಕೆ ಸಂದೀಪ್ ಶೆಟ್ಟಿ ಹೆಸರಿಡಲಾಗುವುದು. ಕೃಷ್ಣಾ ನಗರ ಬಡಾವಣೆಯಲ್ಲಿ ನಿವೇಶನ ನೀಡಲಾಗುವುದು ಎಂದು ಅವರು ಹೇಳಿದರು.[ಹಿಮ ಕುಸಿತಕ್ಕೆ 6 ಸೈನಿಕರ ದಾರುಣ ಅಂತ್ಯ]
ಸರಕಾರವು ಸೇನಾ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಆದಷ್ಟು ಶೀಘ್ರವಾಗಿ ಪಾರ್ಥಿವ ಶರೀರವನ್ನು ಮೃತರ ಮನೆಗೆ ತಲುಪಿಸಲು ಕೋರಲಾಗಿದೆ. ಸೇನಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾದೇವರಾಜ್, ತಹಸೀಲ್ದಾರ್ ಶಿವಶಂಕರಪ್ಪ ಮತ್ತಿತರರು ಹಾಜರಿದ್ದರು.
ಎಚ್.ಡಿ.ರೇವಣ್ಣ ಸಂತಾಪ: ಹೊಳೆನರಸೀಪುರ ಕ್ಷೇತ್ರದ ಶಾಸಕರಾದ ಎಚ್.ಡಿ ರೇವಣ್ಣ ಅವರು ವೀರ ಯೋಧನ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಬಜೆಟ್ ಅಧಿವೇಶನಕ್ಕಾಗಿ ದೆಹಲಿಗೆ ತೆರಳಿದ್ದಾರೆ. ಅಲ್ಲಿಯೇ ಅವರು ಸಂದೀಪ್ ಶೆಟ್ಟಿಯವರ ಪಾರ್ಥಿವ ಶರೀರಕ್ಕೆ ಗೌರವ ನಮನ ಅರ್ಪಿಸಿದ್ದಾರೆ ಎಂದು ತಿಳಿಸಿದರು.