ಅಸ್ಸಾಂ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಗುವಾಹಟಿ, ಮಾರ್ಚ್ 23: ಅಸ್ಸಾಂ ಸುರಕ್ಷತೆ ದೃಷ್ಟಿಯಿಂದ ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ತಿದ್ದುಪಡಿಗೊಳಿಸುವ ಕೆಲಸ ಮಾಡಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜಯಪ್ರಕಾಶ್ ನಡ್ಡಾ ಆಶ್ವಾಸನೆ ನೀಡಿದ್ದಾರೆ.
ಗುವಾಹಟಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದ್ದಾರೆ. ನುಸುಳುಕೋರರನ್ನು ತಡೆಯಲು ಭಾರತೀಯ ಮೂಲ ನಿವಾಸಿಗಳನ್ನು ರಕ್ಷಿಸುವುದಾಗಿ ಭರವಸೆ ನೀಡಿದರು.
ಬಿಜೆಪಿ ಇಲ್ಲಿ ಸರ್ಕಾರವನ್ನು ಮಾಫಿಯಾದಂತೆ ನಡೆಸುತ್ತಿದೆ: ಪ್ರಿಯಾಂಕಾ ಗಾಂಧಿ
ಅಸ್ಸಾಂ ಮೂಲ ನಿವಾಸಿಗಳ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ಒಳನುಸುಳುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಇದರ ಜೊತೆಗೆ ಗಡಿ ನಿರ್ಧಾರಗಳಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಇತ್ಯರ್ಥಗೊಳಿಸಲಾಗುವುದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಆಶ್ವಾಸನೆ ನೀಡಿದ್ದಾರೆ.
ಅರುಣೋದಯ ಯೋಜನೆ ಅಡಿ ಗೌರವ ಧನ:
ಬ್ರಹ್ಮಪುತ್ರ ಯೋಜನೆ ಅಡಿಯಲ್ಲಿ ಪ್ರವಾಹವನ್ನು ತಡೆಯುವ ಉದ್ದೇಶದಿಂದ ಬ್ರಹ್ಮಪುತ್ರ ನದಿಗೆ ಜಲಾಶಯವನ್ನು ನಿರ್ಮಿಸಲಾಗುವುದು ಎಂದು ಬಿಜೆಪಿ ಭರವಸೆ ನೀಡಿದೆ. ಇದರ ಜೊತೆಗೆ ಪ್ರವಾಹಕ್ಕೆ ಸಿಲುಕಿದ 30 ಲಕ್ಷ ಸಂತ್ರಸ್ತರಿಗೆ ಅರುಣೋದಯ ಯೋಜನೆ ಅಡಿ ಪ್ರತಿ ತಿಂಗಳೂ 3,000 ರೂಪಾಯಿ ಸಹಾಯಧನ ನೀಡಲಾಗುವುದು ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಅಸ್ಸಾಂನಲ್ಲಿ ಮೂರು ಹಂತದ ಚುನಾವಣೆ:
ಅಸ್ಸಾಂ ವಿಧಾನಸಭೆಯ 126 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಮೊದಲ ಹಂತದಲ್ಲಿ 47 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಏಪ್ರಿಲ್.1ರಂದು 39 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ಏಪ್ರಿಲ್ 6ರಂದು 40 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೇ.2ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ.