ಪ್ರದ್ಯುಮ್ನ ಹತ್ಯೆ : ಪೊಲೀಸ್ ಬ್ಯಾಂಕ್ ಬ್ಯಾಲನ್ಸ್ ಮೇಲೆ ಸಿಬಿಐ ಕಣ್ಣು
ಗುರ್ ಗಾಂವ್, ನವೆಂಬರ್ 25 : ರಯನ್ ಅಂತಾರಾಷ್ಟ್ರೀಯ ಶಾಲೆಯ ಪ್ರದ್ಯುಮ್ನ ಠಾಕೂರ್ ಹತ್ಯೆಯ ಪ್ರಕರಣದಲ್ಲಿ ಸರಿಯಾಗಿ ತನಿಖೆ ಮಾಡದೆ, ತನಿಖೆಯನ್ನು ಹಳ್ಳ ಹಿಡಿಸಿ ವಿವಾದದ ಸುಳಿಯಲ್ಲಿ ಸಿಲುಕಿರುವ ಗುರ್ಗಾಂವ್ ಪೊಲೀಸರು ಈಗ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಪ್ರದ್ಯಮ್ನ ಕೊಲೆ ಆರೋಪಿಯ ರಕ್ಷಣೆಗೆ ನಿಂತ 'ತಲ್ವಾರ್' ವಕೀಲ!
ಈ ಹತ್ಯೆಗಾಗಿ ಮೊದಲು ಬಸ್ ನಿರ್ವಾಹಕ ಅಶೋಕ್ ಕುಮಾರ್ ನನ್ನು ಬಂಧಿಸಿದ್ದ ವಿಶೇಷ ತನಿಖಾ ದಳದ ಪೊಲೀಸರ ವಿಚಾರಣೆಯನ್ನು ನಡೆಸಿದ ಬಳಿಕ, ತನಿಖಾ ತಂಡದಲ್ಲಿದ್ದ ಪೊಲೀಸರ ಮೊಬೈಲ್ ಕರೆಗಳನ್ನು ಪರಿಶೀಲಿಸಲು ಮತ್ತು ಅವರು ಬ್ಯಾಂಕ್ ಬ್ಯಾಲನ್ಸ್ ಚೆಕ್ ಮಾಡಲು ಸಿಬಿಐ ಮುಂದಾಗಿದೆ.
ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಪ್ರಕರಣವನ್ನು ಎಲ್ಲ ಮಗ್ಗಲುಗಳಿಂದ ತನಿಖೆ ನಡೆಸುತ್ತಿರುವ ಸಿಬಿಐ ಗುರ್ಗಾಂವ್ ಪೊಲೀಸರ ಜನ್ಮ ಜಾಲಾಡುತ್ತಿದೆ. ಸಿಸಿಟಿವಿ ಫುಟೇಜ್ ಇದ್ದರೂ ಅಶೋಕ್ ನನ್ನು ಬಂಧಿಸಿದ್ದ ಪೊಲೀಸರ ತನಿಖಾ ವರಸೆಯಲ್ಲಿ ಹಲವಾರು ಹುಳುಕುಗಳು ಕಂಡು ಬರುತ್ತಲೇ ಇವೆ.
ಪ್ರದ್ಯುಮ್ನ ಠಾಕೂರ್ ಹತ್ಯೆಯ ಬೆಚ್ಚಿ ಬೀಳಿಸುವ ವಿವರಗಳು
ಯಾವುದೇ ಸಾಕ್ಷ್ಯವಿಲ್ಲದೆ ಅಶೋಕ್ ನನ್ನು ಬಂಧಿಸಿ, ಆತನಿಂದ ಬಲವಂತವಾಗಿ ಕೊಲೆ ಮಾಡಿರುವ ಹೇಳಿಕೆ ಪಡೆದಿದ್ದಲ್ಲದೆ, ಆತನ ವಾಹನದಲ್ಲಿ ಚಾಕುವನ್ನು ಇರಿಸಲಾಗಿತ್ತು. ಅಲ್ಲದೆ, ಪ್ರಮುಖ ಸಾಕ್ಷಿಯಾಗಿರುವ ಸಿಸಿಟಿವಿ ಫುಟೇಜನ್ನು ಸರಿಯಾಗಿ ಅಧ್ಯಯನ ಮಾಡದೆ ಪೊಲೀಸರು ಭಾರೀ ಪ್ರಮಾದವೆಸಗಿರುವುದು ಕಣ್ಣಿಗೆ ರಾಚುತ್ತಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಪ್ರದ್ಯುಮ್ನ ಹತ್ಯೆ : ಮತ್ತೆ ಕಗ್ಗಂಟಾಗಿರುವ ಪ್ರಕರಣ
ವಿಶೇಷ ತನಿಖಾ ದಳದ ಎಲ್ಲ ಸದಸ್ಯರಿಗೆ ನೋಟೀಸ್ ನೀಡುವುದರ ಜೊತೆಗೆ, ಅವರು ಊರು ಬಿಟ್ಟು ಎಲ್ಲೂ ತೆರಳದಂತೆ ತಿಳಿಸಲಾಗುತ್ತಿದೆ. ಇದರಲ್ಲಿ ಭಾಗಿಯಾದವರ ಯಾರ ಹೆಸರನ್ನು ಕೂಡ ಪ್ರಸ್ತಾಪಿಸದೆ, ಈ ಪ್ರಕರಣವನ್ನು ಹಳ್ಳಹಿಡಿಸಲು ಕಾರಣಗಳೇನಿರಬಹುದು ಎಂದು ತಿಳಿದುಕೊಳ್ಳಲು ಯತ್ನಿಸುತ್ತಿರುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಹನ್ನೊಂದನೇ ತರಗತಿ ವಿದ್ಯಾರ್ಥಿಯ ಬಂಧನ
ಇಡೀ ದೇಶವನ್ನೇ ಕಲಕಿದ್ದ ಈ ಭೀಕರ ಹತ್ಯೆಗೆ ಸಂಬಂಧಿಸಿದಂತೆ, ಸಿಸಿಟಿವಿ ಫುಟೇಜ್ ಆಧಾರದ ಮೇಲೆ ಅದೇ ಶಾಲೆಯಲ್ಲಿ ಹನ್ನೊಂದನೇ ತರಗತಿಯಲ್ಲಿ ಓದುತ್ತಿದ್ದ, ಪ್ರದ್ಯುಮ್ನನಿಗೆ ಪರಿಚಯವಿದ್ದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಆರಂಭಿಕ ವಿಚಾರಣೆಯಲ್ಲಿ ತಾನೇ ಈ ಕೊಲೆಯನ್ನು ಮಾಡಿರುವುದಾಗಿ ಆತ ಒಪ್ಪಿಗೆ ನೀಡಿದ್ದಾನೆ.
ಅತ್ಯಂತ ವ್ಯವಸ್ಥಿತವಾಗಿ ಪ್ರದ್ಯುಮ್ನನ ಹತ್ಯೆ
ಅಚ್ಚರಿಯ ಸಂಗತಿಯೆಂದರೆ, ಇದೇ ವಿದ್ಯಾರ್ಥಿಯನ್ನು ಎಸ್ಐಟಿ ಪೊಲೀಸರು ಸಾಕ್ಷಿಯನ್ನಾಗಿ ಪರಿಗಣಿಸಿದ್ದರು. ಸರಿಯಾಗಿ ವಿಚಾರಣೆ ನಡೆಸಿದಾಗ, ಪ್ರದ್ಯುಮ್ನನ ಕೊಲೆ ಮಾಡಲು ತಾನು ಹೇಗೆ ಸಿದ್ಧತೆ ಮಾಡಿಕೊಂಡಿದ್ದೆ, ಯಾವ ರೀತಿ ಚಾಕಚಕ್ಯತೆಯಿಂದ ಶೌಚಾಲಯಕ್ಕೆ ಆತನನ್ನು ಕರೆಯಿಸಿಕೊಂಡು ಹೇಗೆ ಹತ್ಯೆ ಮಾಡಿದೆ ಎಂಬೆಲ್ಲ ವಿವರಣೆಗಳನ್ನು ಆತ ನೀಡಿದ್ದಾನೆ.
ವಿಚಾರಣೆಯ ನಂತರ ಅಶೋಕ್ ಬಿಡುಗಡೆ
ಪ್ರದ್ಯುಮ್ನ ಹತ್ಯೆಯಾದ ದಿನದಂದೇ ಬಸ್ ನಿರ್ವಾಹಕನಾದ ಅಶೋಕ್ ನನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದರು. ಆತನ ಬಂಧನದ ಹಿಂದೆ ಯಾರದೋ ಕೈವಾಡವಿದೆ ಎಂದು ಪ್ರದ್ಯುಮ್ನನ ತಂದೆ ವಾದಿಸುತ್ತಲೇ ಬಂದಿದ್ದರು ಮತ್ತು ಸಿಬಿಐ ತನಿಖೆ ನಡೆಯಲೇಬೇಕೆಂದು ಪಟ್ಟು ಹಿಡಿದಿದ್ದರು. ಅವರು ನಡೆಸಿದ ಹೋರಾಟದಿಂದಲೇ ಈಗ ಅಶೋಕ್ ಕೈವಾಡವಿಲ್ಲವೆಂದು ತಿಳಿದುಬಂದಿದೆ. ಇದೀಗ ಅಶೋಕ್ ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಕತ್ತು ಕೊಯ್ದು ಪ್ರದ್ಯುಮ್ನನ ಭೀಕರ ಹತ್ಯೆ
ಪ್ರದ್ಯುಮ್ನನನ್ನು ಲೈಂಗಿಕವಾಗಿ ಹಿಂಸಿಸುವ ಉದ್ದೇಶದಿಂದ ಬಸ್ ನಿರ್ವಾಹಕ ಅಶೋಕ್ ಶೌಚಾಲಯದೊಳಗೆ ಹೋಗಿದ್ದ. ಅದನ್ನು ಪ್ರದ್ಯುಮ್ನ ವಿರೋಧಿಸಿದ್ದರಿಂದ ಆತನನ್ನು ಚಾಕುವಿನಿಂದ ಕತ್ತು ಕೊಯ್ದು ಅಶೋಕ್ ಭೀಕರವಾಗಿ ಹತ್ಯೆಗೈದಿದ್ದ ಎಂದೆಲ್ಲ ವಿಶೇಷ ತನಿಖಾ ದಳದ ಪೊಲೀಸರು ಕಥೆ ಕಟ್ಟಿದ್ದರು. ಇದರ ಹಿಂದೆ ಶಾಲೆಯ ಮಂಡಳಿಯ ಕೈವಾಡವೂ ಇರಬಹುದೆಂದು ಸಿಬಿಐ ಅಧಿಕಾರಿಗಳು ಶಂಕಿಸಿದ್ದಾರೆ.
ಪ್ರಕರಣಕ್ಕೆ ಮತ್ತೆ ತಿರುವು
ವಿಚಾರಣೆಯ ಸಮಯದಲ್ಲಿ ಪರೀಕ್ಷೆಯನ್ನು ಮತ್ತು ಪೋಷಕರ ಶಿಕ್ಷಕರ ಭೇಟಿಯನ್ನು ಮುಂದೂಡಿಸುವ ಉದ್ದೇಶದಿಂದ ತಾನು ಹೀನ ಕೃತ್ಯ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆದರೆ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಲಾಗುತ್ತಿದೆ ಎಂದು ಆತ ಈ ಪ್ರಕರಣಕ್ಕೆ ಮತ್ತೆ ತಿರುವು ನೀಡಿದ್ದಾನೆ.