ತಂಗಿ ಮದುವೆಗೆ ರಜಾ ಕೊಡದ ಕಾರಣ ಹರ್ಯಾಣದಲ್ಲಿ ಧಾರವಾಡದ ವೈದ್ಯನ ಆತ್ಮಹತ್ಯೆ
ರೋಹ್ಟಕ್, ಜೂನ್ 15: ತಂಗಿಯ ಮದುವೆಗೆ ಮೇಲಧಿಕಾರಿ ರಜಾ ನೀಡದ ಕಾರಣ ಕರ್ನಾಟಕದ ವೈದ್ಯರೊಬ್ಬರು ಹರ್ಯಾಣದಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ನಡೆದಿದೆ.
ಹರ್ಯಾಣದ ರೋಹ್ಟಕ್ ನ ಪೋಸ್ಟ್ ಗ್ರಾಜ್ಯುಯೇಟ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಎಂಡಿ ಓದುತ್ತಿದ್ದ 30 ವರ್ಷ ವಯಸ್ಸಿನ ಓಂಕಾರ್ ಕರ್ನಾಟಕದ ಧಾರವಾಡ ಮೂಲದವರಾಗಿದ್ದರು.
ಮೇಲಧಿಕಾರಿಯ ಕಿರುಕುಳವೇ ಅವರ ಆತ್ಮಹತ್ಯೆಗೆ ಕಾರಣ ಎನ್ನಲಾಗಿತ್ತು, ಅವರು ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ ಎನ್ನಲಾಗಿದೆ. ಜೂನ್ 13 ರ ರಾತ್ರಿ ತಮ್ಮ ಹಾಸ್ಟೇಲ್ ನ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಓಂಕಾರ್ ಮೃತರಾಗಿದ್ದು, ಅವರ ಸಾವಿನ ನಂತರ ಹರ್ಯಾಣದಲ್ಲಿ ವೈದ್ಯರು ಮುಷ್ಕರ ಆರಂಭಿಸಿದ್ದಾರೆ.

ತಂಗಿಯ ಮದುವೆಗೆಂದು ಓಂಕಾರ್ ಮೇಲಧಿಕಾರಿಯ ಬಳಿ ರಜೆ ಕೇಳಿದ್ದರು. ಆದರೆ ಪರಿಪರಿಯಾಗಿ ಕೇಳಿದರೂ ಮೇಲಧಿಕಾರಿ ಅವರಿಗೆ ರಜೆ ನೀಡಿರಲಿಲ್ಲ. ಮತ್ತು ನಿರಂತರವಾಗಿ ಕಿರುಕುಳ ನೀಡುತ್ತಿದ್ದರಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸ್ನೇಹಿತರು ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ.
ರೋಹ್ಟಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಯುತ್ತಿದೆ. ಮೇಲಧಿಕಾರಿಗಳ ಕಿರುಕುಳ ವಿರೋಧಿಸಿ ವೈದ್ಯರು ಹರ್ಯಾಣದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಇತ್ತ ಕೋಲ್ಕತ್ತಾದಲ್ಲೂ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಡೆಯುತ್ತಿರುವ ವೈದ್ಯರ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.












Click it and Unblock the Notifications