ಜಿಂದಾಲ್ ವಿರುದ್ಧ ಜನಾಂದೋಲನಕ್ಕೆ ತೋಂಟದ ಶ್ರೀಗಳಿಗೆ ಆಹ್ವಾನ
ಗದಗ, ಜೂನ್ 18: ಜಿಂದಾಲ್ ಕಂಪೆನಿಗೆ ಭೂಮಿ ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಉತ್ತರ ಕರ್ನಾಟಕ ಮಹಾಸಭಾ ಜನಾಂದೋಲನಕ್ಕೆ ಮುಂದಾಗಿದೆ. ಜನಾಂದೋಲನಕ್ಕೆ ಬೆಂಬಲ ಕೋರಿ ಸಂಘದ ವತಿಯಿಂದ ಇಂದು ತೋಂಟದ ಸಿದ್ಧರಾಮ ಮಹಾಸ್ವಾಮಿಗಳಿಗೆ ಮನವಿ ಸಲ್ಲಿಸಿ ಹೋರಾಟಕ್ಕೆ ಆಹ್ವಾನಿಸಲಾಯಿತು.
ಈ ವೇಳೆ ಮಾತನಾಡಿದ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ, ಸರ್ಕಾರದ ಈ ಕ್ರಮದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಮತ್ತೆ ಸಚಿವ ಸಂಪುಟ ಉಪ ಸಮಿತಿ ರಚಿಸಲು ಮುಂದಾಗಿದೆ. ಈ ಹಿಂದಿನ ಉಪಸಮಿತಿ ನೀಡಿದ ವರದಿ ಅಂಶಗಳನ್ನೇ ಜಾರಿಗೊಳಿಸದೆ ಮತ್ತೊಂದು ಉಪಸಮಿತಿಯ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದರು.
ಗೋಕಾಕ್ ಚಳವಳಿಯಿಂದ ಹಿಡಿದು ಇತ್ತೀಚಿನ ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ನಡೆದ ಹೋರಾಟದವರೆಗೆ ಶ್ರೀಮಠದ ಕಾಳಜಿ ಅದ್ಭುತ. ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಜನಪರ ಕಾಳಜಿ ಅತ್ಯಂತ ಮಹತ್ವದ್ದಾಗಿತ್ತು. ಪೂಜ್ಯರ ನಂತರ ಬಂದ ತಾವು ಆ ಕಾಳಜಿಗೆ ನೀರೆರೆದು ಪೋಷಿಸುತ್ತಿರಿ ಎಂಬ ವಿಶ್ವಾಸವಿದೆ. ಇದಕ್ಕೆ ನಿಮ್ಮ ಮಾರ್ಗದರ್ಶನದ ಅವಶ್ಯಕತೆಯಿದೆ ಎಂದು ತೋಂಟದ ಸಿದ್ಧರಾಮ ಶ್ರೀಗಳಿಗೆ ಮನವಿ ಸಲ್ಲಿಸಿದರು.

ಒಡಿಶಾದಂತಹ ರಾಜ್ಯದಲ್ಲಿ ಪರಿಸರ ಮಾಲಿನ್ಯದ ಕಾರಣವೊಡ್ಡಿ ಜಿಂದಾಲ್ ಅನ್ನು ಓಡಿಸಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಭೂಮಿ ಕೊಟ್ಟು ಮತ್ತಷ್ಟು ಪರಿಸರ ಮಾಲಿನ್ಯ ಹಾಗೂ ಸಂಪತ್ತು ಲೂಟಿಗೆ ಸರ್ಕಾರವೇ ಅವಕಾಶ ನೀಡುತ್ತಿದೆ. ಇದನ್ನು ಹೀಗೇ ಬಿಟ್ಟರೆ ನಮ್ಮ ಕಪ್ಪತ್ತಗುಡ್ಡಕ್ಕೂ ಜಿಂದಾಲ್ ನಿಂದ ಆತಂಕ ತಪ್ಪಿದ್ದಲ್ಲ. ಹೀಗಾಗಿ ನಾವೆಲ್ಲ ಜಿಂದಾಲ್ ವಿರುದ್ಧ ಜನಾಂದೋಲನ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ತೋಂಟದ ಸಿದ್ಧರಾಮ ಶ್ರೀಗಳು, ಈ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ತೋರಬೇಕಿದೆ. ತಾವು ವಿವಿಧ ಮಠಾಧೀಶರೊಂದಿಗೆ ಚರ್ಚಿಸಿ ಮುಂದಿನ ನಡೆಯ ಕುರಿತು ತೀರ್ಮಾನಿಸಲಾಗುವುದು. ಜೊತೆಗೆ ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸಲಾಗುವುದು ಎಂದು ಸೂಚಿಸಿದರು. ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, ಜಯ ಕರ್ನಾಟಕ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಕಾಂತ್ ಚೌವ್ಹಾಣ್, ನ್ಯಾಯವಾದಿ ಎಸ್.ಕೆ.ನದಾಫ್ ಸೇರಿದಂತೆ ಇತರರು ಇದ್ದರು.












Click it and Unblock the Notifications