ಹದ್ಲಿ ಗ್ರಾಮದಲ್ಲಿ ಅತಿಥಿ ಶಿಕ್ಷಕನಿಂದ ಹಲ್ಲೆಗೊಳಗಾದ ಶಿಕ್ಷಕಿ ಸಾವು
ಗದಗ, ಡಿಸೆಂಬರ್ 22: ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿಯಿಂದ ಹಲ್ಲೆಗೊಳಗಾಗಿದ್ದ ಅತಿಥಿ ಶಿಕ್ಷಕಿ ಗೀತಾ ಬಾರಕೇರ ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅತಿಥಿ ಶಿಕ್ಷನ ಹಲ್ಲೆಯಿಂದ ಬಾಲಕ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ಡಿಸೆಂಬರ್ 19ರಂದು ನಡೆದಿತ್ತು. ಈ ವೇಳೆ ಆರೋಪಿ ಗೀತಾ ಬಾರಕೇರ ಮೇಲೆ ಕೂಡ ಸಲಾಕೆಯಿಂದ ಮನಬಂದಂತೆ ಹಲ್ಲೆ ನಡಸಿದ್ದ, ಕೂಡಲೇ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗೀತಾ ಬಾರಕೇರ ಗುರುವಾರ ಸಾವನ್ನಪ್ಪಿದ್ದಾರೆ.
ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ಅತಿಥಿ ಶಿಕ್ಷಕನಿಂದ ಹಲ್ಲೆ, ವಿದ್ಯಾರ್ಥಿ ಸಾವು
ಆರೋಪಿ ಮುತ್ತಪ್ಪ ಹಾಗೂ ಶಿಕ್ಷಕಿ ಗೀತಾ ನಡುವೆ ಮೊದಲಿನಿಂದಲೂ ಸಂಬಂಧ ಇತ್ತು ಎನ್ನಲಾಗಿದೆ. ಇತ್ತೀಚಿಗೆ ಶಾಲಾ ಪ್ರವಾಸದ ವೇಳೆ ಗೀತಾ ಬೇರೆ ಶಿಕ್ಷಕನ ಜೊತೆ ಸಲುಗೆಯಿಂದ ಇರುವುದನ್ನು ಕಂಡು ಮುತ್ತಪ್ಪ ಕೋಪಗೊಂಡಿದ್ದಾನೆ. ಹೀಗಾಗಿ ಗೀತಾಗೆ ಸಂಬಂಧಿಸಿದ ಯಾವ ವ್ಯಕ್ತಿ ಸಿಕ್ಕರೂ ಹೊಡೆಯಬೇಕು ಎಂದುಕೊಂಡಿದ್ದಾನೆ.
ಹೀಗಾಗಿ ಡಿಸೆಂಬರ್ 19 ಬೆಳಗ್ಗೆ 11:30 ಗಂಟೆ ಸುಮಾರಿಗೆ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಬಂದಿದ್ದ ಆರೋಪಿ ಮುತ್ತಪ್ಪ, ಮೊದಲ ಮಹಡಿಯಲ್ಲಿದ್ದ ಭರತ್ ತರಗತಿಗೆ ಹೋಗಿ ಹೊರಗಡೆ ಕರೆದುಕೊಂಡು ಬಂದು ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಬಳಿಕ ಬಾಲಕನನ್ನು ಮೊದಲನೇ ಮಹಡಿಯಿಂದ ಕೆಳಗೆ ಎಸೆದಿದ್ದಾನೆ. ಗಂಭೀರ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ, ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾನೆ. ಬಳಿಕ ಭರತ್ ತಾಯಿಯ ಗೀತಾ ಬಾರಕೇರ ಮೇಲೆ ಸಲಾಕೆಯಿಂದ ಹಲ್ಲೆ ನಡೆಸಿದ್ದಾನೆ.
ಘಟನೆ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಮುತ್ತಪ್ಪನ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಿದ್ದರು. ಮಂಗಳವಾರ ಆರೋಪಿಯನ್ನು ಬಂಧಿಸಲಾಗಿತ್ತು. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದು, ವಿಚಾರಣೆ ತೀವ್ರಗೊಂಡಿದೆ.
ಘಟನೆ ಬಳಿಕ ಶಾಲೆಗೆ ಬರಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ನರಗುಂದ ತಾಲೂಕಿನ ಹದ್ಲಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ತರಗತಿಯಲ್ಲಿ ಒಟ್ಟು 427 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಹಾಗೂ ಪೋಷಕರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.