Breaking; ದಿಂಗಾಲೇಶ್ವರ ಸ್ವಾಮೀಜಿಗೆ ತಡೆ ಹಾಕಿದ ನರಗುಂದ ಪೊಲೀಸ್
ಗದಗ, ಏಪ್ರಿಲ್ 27; ಶಿರಹಟ್ಟಿಯ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ನರಗುಂದ ಪ್ರವೇಶಿಸದಂತೆ ಪೊಲೀಸರು ತಡೆದರು. ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ನಿವಾಸದ ಮುಂದೆ ಮಂಗಳವಾರ ಧರಣಿ ನಡೆಸಲು ಸ್ವಾಮೀಜಿ ಬೆಂಬಲಿಗರ ಜೊತೆ ಆಗಮಿಸಿದ್ದರು.
ಗದಗ ನರಗುಂದ ಪಟ್ಟಣದಲ್ಲಿರುವ ಸಚಿವ ಸಿ. ಟಿ. ಪಾಟೀಲ್ ನಿವಾಸದ ಮುಂದೆ ದಿಂಗಾಲೇಶ್ವರ ಸ್ವಾಮೀಜಿ ಧರಣಿ ನಡೆಸಲು ಆಗಮಿಸಿದ್ದರು. ಆದರೆ ಪಟ್ಟಣ ಪ್ರವೇಶ ಮಾಡಲು ಪೊಲೀಸರು ಅವಕಾಶ ನೀಡಲಿಲ್ಲ.
ಬುಧವಾರ ನರಗುಂದ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಸಚಿವರ ನಿವಾಸದ ಮುಂದೆ ಸ್ವಾಮೀಜಿ ಪ್ರತಿಭಟನೆ ನಡೆಸಲು ಆಗಮಿಸುವುದನ್ನು ತಿಳಿದು ಸಚಿವರ ಬೆಂಬಲಿಗರು ಸಹ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ದಿಂಗಾಲೇಶ್ವರ ಸ್ವಾಮೀಜಿ ಮತ್ತು ಅವರ ಭಕ್ತರು, ಸಚಿವ ಸಿ. ಸಿ. ಪಾಟೀಲ್ ಬೆಂಬಗರ ಜಮಾವಣೆಯಿಂದ ನರಗುಂದದಲ್ಲಿ ಹೈಡ್ರಾಮ ನಡೆಯಿತು. ಅಂತಿಮವಾಗಿ ದಿಂಗಾಲೇಶ್ವರ ಸ್ವಾಮೀಜಿ ಪಟ್ಟಣ ಪ್ರವೇಶಿಸದೆ ವಾಪಸ್ ಹೋದ ಮೇಲೆ ಪರಿಸ್ಥಿತಿ ತಿಳಿಯಾಯಿತು.
ದಿಂಗಾಲೇಶ್ವರ ಸ್ವಾಮೀಜಿ, "ಮಠಗಳಿಗೆ ಮಂಜೂರಾದ ಅನುದಾನ ಪಡೆಯಲು ಶೇ 30ರಷ್ಟು ಕಮೀಷನ್ ನೀಡಬೇಕು" ಎಂದು ಹೇಳಿಕೆ ಕೊಟ್ಟಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಸಚಿವ ಸಿ. ಸಿ. ಪಾಟೀಲ್, "ದಿಂಗಾಲೇಶ್ವರ ಸ್ವಾಮೀಜಿ ಬಳಿ ಯಾರಾದರೂ ಕಮೀಷನ್ ಕೇಳಿದ್ದರೆ ದಾಖಲೆಗಳನ್ನು ಕೊಡಲಿ. ಮುಖ್ಯಮಂತ್ರಿಗಳು ತನಿಖೆ ಮಾಡಿಸುತ್ತೇವೆ ಎಂದು ಹೇಳಿದ್ದಾರೆ. ಕೇವಲ ಆರೋಪ ಮಾಡುವುದು ಬೇಡ. ಸ್ವಾಮೀಜಿಗಳು ರಾಜಕಾರಣಿಗಳಾಗಿ ಮಾತನಾಡಬಾರದು" ಎಂದು ಹೇಳಿದ್ದರು.
ನರಗುಂದಲ್ಲಿ ಬುಧವಾರ ನಡೆದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸಿ. ಸಿ. ಪಾಟೀಲ್, "ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ನಾನು ಮಾಡಿದ ಆರೋಪಕ್ಕೆ ಬದ್ಧನಾಗಿದ್ದೇನೆ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಆರೋಪ ದೃಢಪಡಿಸುವ ಕೆಲಸ ನನ್ನದಲ್ಲ" ಎಂದರು.












Click it and Unblock the Notifications