ಗದಗ; ಪತ್ನಿ ಕೊಂದ ಆರೋಪಿ 17 ವರ್ಷಗಳ ಬಳಿಕ ಬಂಧನ!
ಗದಗ, ಫೆಬ್ರವರಿ 10: ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗದಗ ಪೊಲೀಸರು 17 ವರ್ಷಗಳ ಬಳಿಕ ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ನೇತೃತ್ವದಲ್ಲಿ ತನಿಖೆ ನಡೆಸಿದ ಲಕ್ಷ್ಮೇಶ್ವರ ಪೋಲಿಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ವೀರಯ್ಯ ಹಿರೇಮಠ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ವೀರಯ್ಯ ಹಿರೇಮಠ 2004ರ ಡಿಸೆಂಬರ್ 16ರಂದು ಶಿರಹಟ್ಟಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಪತ್ನಿ ಈರಮ್ಮಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ವೀರಯ್ಯ ಹಳ್ಳದ ಹತ್ತಿರ ಕರೆದುಕೊಂಡು ಹೋಗಿ ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿದ್ದನು. ಕೊಲೆಯಾಗುವಾಗ ಈರಮ್ಮ ಗರ್ಭಿಣಿಯಾಗಿದ್ದಳು.

ಗ್ರಾಮದ ಜನರು ವೀರಯ್ಯ ಪತ್ನಿ ಜೊತೆ ಊರಿಗೆ ಹೋಗಿರಬಹುದು ಎಂದು ಶಂಕಿಸಿದ್ದರು. ಆದರೆ, 9 ದಿನಗಳ ಬಳಿಕ ಈರಮ್ಮ ಶವ ಪತ್ತೆಯಾಗಿತ್ತು. ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆದರೆ, ವೀರಯ್ಯ ಮಾತ್ರ ನಾಪತ್ತೆಯಾಗಿದ್ದ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪೋಲಿಸ್ ಠಾಣೆಯ ಸಿಪಿಐ ವಿಕಾಸ ಲಮಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೀರಯ್ಯ ಹಿರೇಮಠ ಬಂಧಿಸಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಹಿರೇಮಲ್ಲಾಪುರದ ವೀರಯ್ಯನನ್ನು ಸಂಬಂಧಿಕರಾದ ಫಕ್ಕೀರಯ್ಯ ಮತ್ತು ನೀಲಮ್ಮ ದಂಪತಿಗಳು 10 ವರ್ಷವಿರುವಾಗಲೇ ಮನೆಗೆ ಕರೆತಂದು ಸಾಕಿದ್ದರು. ಮನೆಯಲ್ಲಿಯೇ ಇಟ್ಟುಕೊಂಡು ಮಗಳು ಈರಮ್ಮಳನ್ನು ಮದುವೆ ಮಾಡಿಕೊಟ್ಟಿದ್ದರು.
ವೀರಯ್ಯ ಬಂಧಿಸಿದ್ದರಿಂದ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಈರಮ್ಮ ತಾಯಿ ನೀಲಮ್ಮ ಹೇಳಿದ್ದಾರೆ. 17 ವರ್ಷಗಳ ಬಳಿಕ ಕೊಲೆ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.











Click it and Unblock the Notifications