ಕಾಂಗ್ರೆಸ್ ಟಿಕೆಟ್ಗಾಗಿ ಹೆಚ್ಚಿದ ಪೈಪೋಟಿ: 4 ವಿಧಾನಸಭಾ ಕ್ಷೇತ್ರದಿಂದ 23 ಜನ ಅರ್ಜಿ
ಗದಗ, ನವೆಂಬರ್ 29: ಜಿಲ್ಲೆಯ ನರಗುಂದ ವಿಧಾನಸಭೆ ಮತಕ್ಷೇತ್ರ ಹೊರತುಪಡಿಸಿ, ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಬೆಳೆಯುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ನಲ್ಲಿಯೂ ಟಿಕೆಟ್ ಆಕಾಂಕ್ಷಿಗಳ ದೊಡ್ಡ ದಂಡು ಕೂಡ ಸೃಷ್ಟಿಯಾಗಿದೆ.
2023ರ ವಿಧಾನಸಭೆ ಚುನಾವಣೆಗೆ ಇನ್ನೂ ಆರು ತಿಂಗಳು ಬಾಕಿ ಇರುವಾಗಲೇ ಗದಗ ಜಿಲ್ಲೆಯಲ್ಲಿ ಟಿಕೆಟ್ಗಾಗಿ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಜೋರಾಗಿಯೇ ನಡೆಯುತ್ತಿದೆ. ಜಿಲ್ಲೆಯ ಒಟ್ಟು ನಾಲ್ಕು ವಿಧಾನಸಭೆ ಟಿಕೆಟ್ಗಳಿಗಾಗಿ ಒಟ್ಟು 23 ಜನರು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬಯಸುವ ಆಕಾಂಕ್ಷಿಗಳು 2 ಲಕ್ಷ ರೂಪಾಯಿ ಠೇವಣಿ ಸಹಿತ ಅರ್ಜಿ ಸಲ್ಲಿಸಬೇಕು ಎಂದು ಕೆಪಿಸಿಸಿ ಸೂಚನೆ ನೀಡುತ್ತಿದ್ದಂತೆ, ಜಿಲ್ಲೆಯ ಆಕಾಂಕ್ಷಿಗಳು ಬೆಂಗಳೂರಿನತ್ತ ದೌಡಾಯಿಸಿದ್ದಾರೆ. ಕೆಲ ಆಕಾಂಕ್ಷಿಗಳು ಖುದ್ದಾಗಿ, ಮತ್ತೆ ಕೆಲವರು ತಮ್ಮ ಆಪ್ತರ ಮೂಲಕ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ನಿಗದಿತ ದಿನಾಂಕಕ್ಕಿಂತ ಮುಂಚೆಯೇ ಅರ್ಜಿ ಸಲ್ಲಿಸಿದ್ದಾರೆ.

ಭಾರಿ ಬೇಡಿಕೆಯ ಕ್ಷೇತ್ರವಾದ ಶಿರಹಟ್ಟಿ
ಜಿಲ್ಲೆಯ ನಾಲ್ಕು ವಿಧಾನಸಭೆ ಮತಕ್ಷೇತ್ರಗಳ ಪೈಕಿ ಶಿರಹಟ್ಟಿ ಕಾಂಗ್ರೆಸ್ ಟಿಕೆಟ್ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ಸಿನ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸಹಿತ ಒಟ್ಟು 12 ಜನ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ನರಗುಂದ ಮತಕ್ಷೇತ್ರದ ಟಿಕೆಟ್ಗಾಗಿ ಮಾಜಿ ಶಾಸಕ ಬಿ.ಆರ್. ಯಾವಗಲ್ ಸಹಿತ ಆರು ಜನ ಅರ್ಜಿ ಸಲ್ಲಿಸಿದ್ದಾರೆ. ರೋಣ ಕ್ಷೇತ್ರದಿಂದ ಇಬ್ಬರು ಮತ್ತು ಗದಗ ಕ್ಷೇತ್ರದಿಂದ ಹಾಲಿ ಶಾಸಕ ಎಚ್.ಕೆ ಪಾಟೀಲ್ ಸಹಿತ ಮೂವರು ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಪೈಪೋಟಿ ಜೋರಾಗಿದೆ.

ಅರ್ಜಿ ಸಲ್ಲಿಕೆ ಜೊತೆಗೆ ಲಾಬಿ ಆರಂಭಿಸಿದ ಟಿಕೆಟ್ ಆಕಾಂಕ್ಷಿಗಳು
ಜಿಲ್ಲೆಯ ನಾಲ್ಕು ವಿಧಾನಸಭೆ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಗದಗ ಕ್ಷೇತ್ರದ ಹಾಲಿ ಶಾಸಕ ಎಚ್.ಕೆ. ಪಾಟೀಲ್ ಮತ್ತು ಮಾಜಿ ಶಾಸಕರು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರ ಜೊತೆಗೆ ಕಳೆದ ಬಾರಿಯೂ ಟಿಕೆಟ್ ಪ್ರಯತ್ನ ಮಾಡಿದವರು ಕೂಡ ಈ ಬಾರಿಯೂ ಪ್ರಯತ್ನ ಮುಂದುವರಿಸಿದ್ದಾರೆ. ಜೊತೆಗೆ ಹೊಸ ಮುಖಗಳು ಸಹ ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಜಿಲ್ಲೆಯ ನಾಲ್ಕು ವಿಧಾನಸಭೆಗಳ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಜೊತೆಗೆ ಲಾಬಿ ಕೂಡ ಆರಂಭಿಸಿದ್ದಾರೆ. ಅರ್ಜಿ ಸಲ್ಲಿಕೆಯ ಅವಧಿ ಮುಗಿದ ನಂತರವೂ ಬೆಂಗಳೂರಿಗೆ ತೆರಳಿ ತಮ್ಮ ಪರವಾಗಿರುವ ನಾಯಕರನ್ನು ಭೇಟಿ ಮಾಡಿ, ಟಿಕೆಟ್ಗಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಜಾತಿ ಲೆಕ್ಕಾಚಾರ, ಹಿಂದಿನ ಚುನಾವಣೆಯಲ್ಲಿ ಪಡೆದ ಮತಗಳು, ಆಡಳಿತ ವಿರೋಧಿ ಅಲೆ ವಿಚಾರವಾಗಿ ತಮ್ಮದೇ ಲೆಕ್ಕಾಚಾರವನ್ನು ನಾಯಕರ ಮುಂದಿಡುವ ಪ್ರಯತ್ನವನ್ನು ಟಿಕೆಟ್ ಆಕಾಂಕ್ಷಿಗಳು ಮಾಡುತ್ತಿದ್ದಾರೆ.

ರೋಣ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳು ಯಾರ್ಯಾರು..?
ಮಾಜಿ ಶಾಸಕ ಬಿ.ಆರ್. ಯಾವಗಲ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ್, ವಿವೇಕ ಯಾವಗಲ್, ಸಂಗಮೇಶ ಕೊಳ್ಳಿ, ದಶರಥ ಗಾಣಿಗೇರ ಹಾಗೂ ಪ್ರಕಾಶ ಕರಿ, ನರಗುಂದದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ರೋಣ ವಿಧಾನಸಭಾ ಕ್ಷೇತ್ರದಲ್ಲಿ ಪೈಪೋಟಿ ಕಮ್ಮಿ ಇದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್. ಪಾಟೀಲ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಇತ್ತೀಚಿಗೆ ನಿಧನ ಹೊಂದಿದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಕೂಡ ರೋಣ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಶಿರಹಟ್ಟಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳು ಯಾರ್ಯಾರು..?
ಇನ್ನು ಬಹುಬೇಡಿಕೆಯ ಶಿರಹಟ್ಟಿ ಕ್ಷೇತ್ರದಿಂದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ಭರತ್ ನಾಯ್ಕ, ಜಯಕ್ಕ ಕಳ್ಳಿ, ರಾಮಣ್ಣ ಲಮಾಣಿ (ಶಿಗ್ಲಿ), ದೇವಪ್ಪ ಲಮಾಣಿ, ತಿಪ್ಪೇಸ್ವಾಮಿ (ಚಿತ್ರದುರ್ಗ ಮೂಲ), ದೀಪಕ್ ಲಮಾಣಿ, ಪರಮೇಶ ಲಮಾಣಿ, ರಾಜು ದಾವಣಗೆರೆ ಹಾಗೂ ಇನ್ನಿಬ್ಬರು ಸಹಿತ 12 ಜನ ಕಾಂಗ್ರೆಸ್ ಟಿಕೆಟ್ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಗದಗ ಕ್ಷೇತ್ರದಿಂದ ಶಾಸಕ ಎಚ್.ಕೆ. ಪಾಟೀಲ್, ಉದ್ಯಮಿ ಬಲರಾಮ ಬಸವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸಲು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.












Click it and Unblock the Notifications