ಧಾರವಾಡ ರಸ್ತೆಗಿಳಿದ ಕೋವಿಡ್ ವೈರಸ್ ವೇಷಧಾರಿ!
ಧಾರವಾಡ, ಡಿಸೆಂಬರ್ 11: ಕೋವಿಡ್ ಸೋಂಕನ್ನು ನಿಯಂತ್ರಿಸಲು ಧಾರವಾಡ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ. ಕೋವಿಡ್ ವೈರಸ್ ವೇಷಧಾರಿ ಮಾಸ್ಕ್ ಹಾಕದ ಜನರನ್ನು ಹಿಡಿದು ಪರೀಕ್ಷೆಗೆ ಕರೆದುಕೊಂಡು ಹೋಗುತ್ತಿದ್ದಾನೆ.
ಕೋವಿಡ್ ನಿಯಂತ್ರಿಸಲು ಮಾಸ್ಕ್ ಧರಿಸುವಿಕೆ, ದೈಹಿಕ ಅಂತರ ಪಾಲನೆ ಅತ್ಯಗತ್ಯ. ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಧಾರವಾಡ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಪ್ರಯತ್ನ ನಡೆಸುತ್ತಿವೆ.
ಜನರಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಕೋವಿಡ್ ವೈರಸ್ ವೇಷಧಾರಿಯೊಬ್ಬರು ಶುಕ್ರವಾರ ಸಿಬಿಟಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡರು. ಮಾಸ್ಕ್ ಹಾಕದ ಜನರನ್ನು ಹಿಡಿದರು. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದರು.

ಧಾರವಾಡ ಜಿಲ್ಲಾಧಿಕಾರಿ ನಿತೇಶ್. ಕೆ ಪಾಟೀಲ ಅವರ ಪರಿಕಲ್ಪನೆಯಲ್ಲಿ ಈ ಕಾರ್ಯಚರಣೆ ಕೈಗೊಳ್ಳಲಾಯಿತು. ಪ್ರತಿ ನಿತ್ಯ ಮಾಸ್ಕ್ ಧರಿಸದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ಕಲಾವಿದರೊಬ್ಬರನ್ನು ಬಳಸಿಕೊಂಡು ಅವರಿಗೆ ಕೋವಿಡ್ ವೈರಸ್ ವೇಷ ಹಾಕಿಸಿ, ಜನ ನಿಬಿಡ ಸ್ಥಳಗಳಲ್ಲಿ ಹಠಾತ್ ಕಳಿಸಿ, ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೋವಿಡ್ ತಪಾಸಣೆಗೆ ಕರೆತರುವ ಕಾರ್ಯಾಚರಣೆಯನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ.

ನಾದಝೇಂಕಾರ ಸಂಸ್ಥೆಯ ಯಮನಪ್ಪ ಜಾಲಗಾರ ಅವರು ತಮ್ಮ ತಂಡದ ಬಸವರಾಜ ಗುಡ್ಡಪ್ಪನವರ ಅವರಿಗೆ ಕೋವಿಡ್ ವೇಷ ತೊಡಿಸಿ, ಜನರ ಮಧ್ಯೆ ಕಳಿಸುತ್ತಿದ್ದಾರೆ. ಪ್ರಸಾದನ ಕಲಾವಿದರಾದ ಸಂತೋಷ ಮಹಾಲೆ ಈ ವೇಷ ಭೂಷಣ ಸಿದ್ಧಪಡಿಸಿದ್ದಾರೆ.
ಗುರುವಾರದ ವರದಿಯಂತೆ ಧಾರವಾಡ ಜಿಲ್ಲೆಯಲ್ಲಿ 9 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 21,573. ಸಕ್ರಿಯ ಪ್ರಕರಣಗಳು 127.












Click it and Unblock the Notifications